ಯೋಧ ಹನುಮಂತಪ್ಪ ಕುಟುಂಬ ರಾಜಕೀಯ ನಾಯಕರ ದಾಳವಾಯಿತೇ?
ಹುಬ್ಬಳ್ಳಿ,ಮಾರ್ಚ್,22: ಸಿಯಾಚಿನ್ ಹಿಮಪಾತದಲ್ಲಿ ಹುತಾತ್ಮರಾದ ವೀರ ಯೋಧ ಹನುಮಂತಪ್ಪ ಕೊಪ್ಪದರವರ ಕುಟುಂಬದವರನ್ನು ಬಿಜೆಪಿ, ಆರೆಸ್ಸೆಸ್ ಹಾಗೂ ಎಬಿವಿಪಿ ಸಂಘಟನೆಗಳು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿವೆ ಎಂದು ಹುಬ್ಬಳ್ಳಿ ಧಾರವಾಡ ಜಿಲ್ಲಾ ಕಾಂಗ್ರೆಸ್ ವಕ್ತಾರ ವೇದವ್ಯಾಸ ಕೌಲಗಿ ಆರೋಪಿಸಿದ್ದಾರೆ.
ಬಿಜೆಪಿ ಪಕ್ಷವು ದೇಶದ ಎಲ್ಲ ಎಡಪಂಥೀಯ ವಿಚಾರವುಳ್ಳ ಜಾತ್ಯಾತೀತ ವ್ಯಕ್ತಿಗಳು, ಪಕ್ಷಗಳು, ದೇಶದ್ರೋಹಿಗಳೆಂಬ ಕಲ್ಪನೆ ಮೂಡಿಸಿ ಯೋಧ ಹನುಮಂತಪ್ಪನ ಅಮಾಯಕ ತಾಯಿ ಹಾಗೂ ಪತ್ನಿಯನ್ನು ದಾರಿ ತಪ್ಪಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.[ಸಿಯಾಚಿನ್ ಯೋಧರ ಕುಟುಂಬಕ್ಕೆ ಉಚಿತ ಬಸ್ ಪಾಸ್]
ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧಿಯನ್ನು ಗುಂಡಿಕ್ಕಿ ಕೊಂದ ಗೋಡ್ಸೆ ಮಹಾನ್ ದೇಶ ಭಕ್ತನೆಂದು ಹೇಳುವ ಬಿಜೆಪಿಯಿಂದ ದೇಶಪ್ರೇಮದ ಪಾಠ ಕಲಿಯಬೇಕಿಲ್ಲ. ದೇಶ ವಿರೋಧಿ ಭಾವನೆ ಬಿತ್ತುತ್ತಿರುವ ಬಿಜೆಪಿ ಪಕ್ಷದೊಂದಿಗೆ ಸಹೋದರಿ ಮಹಾದೇವಿ ಹಾಗೂ ಯೋಧನ ತಾಯಿ ಗುರುತಿಸಿಕೊಂಡರೆ, ಮಹಾತ್ಮಾ ಗಾಂಧಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ.
ಜೆಎನ್ ಯುದ ವಿದ್ಯಾರ್ಥಿ ಸಂಘದ ಕನ್ಹಯ್ಯಕುಮಾರ್ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ಬಿಜೆಪಿ ಹಾಗೂ ಆರೆಸ್ಸೆಸ್ ನವರು ಕೋರ್ಟಿನಲ್ಲಿ ಕನ್ಹಯ್ಯ ವಿರುದ್ಧ ಯಾವುದೇ ದೇಶದ್ರೋಹದ ಪ್ರಕರಣ ಸಾಬೀತಾಗದೆ ಇರುವುದಕ್ಕೆ ಯೋಧನ ಪತ್ನಿ ಮಹಾದೇವಿಯಿಂದ ಹೇಳಿಸಿದ ಉದ್ವೇಗದ ಮಾತುಗಳೇ ಕಾರಣ ಎಂದು ಹೇಳಿದ್ದಾರೆ.[ಮೋದಿ ಬಗ್ಗೆ ಜೈಲಿನಿಂದ ಬಿಡುಗಡೆಯಾದ ಕನ್ಹಯ್ಯಾ ಹೇಳಿದ್ದೇನು?]
ಯೋಧನ ಪತ್ನಿ ಮಹಾದೇವಿಯಿಂದ 'ತನ್ನ ಗಂಡ ಸಿಯಾಚಿನ್ ಹಿಮಪಾತದಲ್ಲಿ ದೇಶಕ್ಕಾಗಿ ಪ್ರಾಣತೆತ್ತ ದಿನದಂದು ಜೆಎನ್ ಯು ದಲ್ಲಿ ದೇಶದ್ರೋಹದ ಘೋಷಣೆ ಕೂಗಿದ್ದು ಖಂಡನೀಯ' ಎಂಬ ಉದ್ವೇಗದ ಮಾತನ್ನು ಎಬಿವಿಪಿ, ಆರೆಸ್ಸೆಸ್ ಹೇಳಿಸಿದ್ದು, ಇವರ ಕಾರ್ಯವೈಖರಿಯ ಮೇಲೆ ಅಸಹ್ಯ ಹುಟ್ಟಿಸುತ್ತದೆ ಎಂದಿದ್ದಾರೆ.[ದೇಶದ್ರೋಹಿಗಳ ಬಗ್ಗೆ ಹನುಮಂತಪ್ಪ ಪತ್ನಿ ಹೇಳಿದ್ದೇನು?]
ಅಫ್ಜಲ್ ಗುರು ನೇಣುಗಂಬ ಏರುವುದನ್ನು ವಿರೋಧಿಸಿದ ಪಿಡಿಪಿ ಪಕ್ಷದೊಂದಿಗೆ ಕಾಶ್ಮೀರದಲ್ಲಿ ಅಧಿಕಾರಕ್ಕಾಗಿ ಕೈ ಜೋಡಿಸಿದ ಬಿಜೆಪಿಗೆ ಜೆಎನ್ ಯು ವಿದ್ಯಾರ್ಥಿ ಕನ್ಹಯ್ಯನನ್ನು ದೇಶದ್ರೋಹಿಯೆಂದು ಬಿಂಬಿಸಲು ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದ್ದಾರೆ.
ಸಂವಿಧಾನ ರಕ್ಷಣೆ ಮಾಡಬೇಕಾದ ಕೇಂದ್ರ ಸರಕಾರ ಪ್ರಜೆಗಳ ಮೇಲೆ ಹಿಂದೂತ್ವದ ಸಿದ್ಧಾಂತ ಹೇರುವವರನ್ನು ವಿರೋಧಿಸಿದವರಿಗೆ ದೇಶದ್ರೋಹಿ ಪಟ್ಟ ಕಟ್ಟುತ್ತಿದ್ದಾರೆ. ಚಕ್ರವರ್ತಿ ಸೂಲಿಬೆಲೆಯಂತಹ ಕೋಮುವಾದಿಯೊಂದಿಗೆ ವೇದಿಕೆ ಹಂಚಿಕೊಂಡರೆ ಹುತಾತ್ಮ ಹನುಮಂತಪ್ಪನ ಆತ್ಮಕ್ಕೆ ಶಾಂತಿ ಸಿಗಲಾರದು ಎಂದು ಬಿಜೆಪಿ ಪಕ್ಷದ ಮೇಲೆ ಕಿಡಿಕಾರಿದ್ದಾರೆ.[ಕನ್ಹಯ್ಯಾ ಕುಮಾರ್ ನನ್ನು ಶೂಟ್ ಮಾಡಿದರೆ 11 ಲಕ್ಷ ನಗದು!]
ರಾಜ್ಯ ಸರಕಾರ ಮಹಾದೇವಿ ಕುಟುಂಬಕ್ಕೆ ಬೆಂಬಲ ನೀಡುತ್ತಿದೆ. ಶಾಸಕ ಶಿವಳ್ಳಿಯವರು ಶೀಘ್ರದಲ್ಲಿಯೇ ನಿಮಗೆ ಜಮೀನು, ಹುಬ್ಬಳ್ಳಿಯಲ್ಲಿ ನಿವೇಶನ, ಬೆಟದೂರಿನಲ್ಲಿ ಹುತಾತ್ಮನ ಸ್ಮಾರಕ ಸ್ಥಾಪಿಸುವುದು. ಮುಖ್ಯಮಂತ್ರಿಗಳು ಮಹಾದೇವಿಯವರಿಗೆ ಸರಕಾರಿ ನೌಕರಿ ಕೊಡುವ ಬಗ್ಗೆ ಆಶ್ವಾಸನೆ ನೀಡಿದ್ದಾರೆ.[ಕರ್ನಾಟಕ ಹೆಮ್ಮೆಯ ಹನುಮಂತಪ್ಪನಿಗೆ ಎದೆಯುಬ್ಬಿಸಿ ಸೆಲ್ಯೂಟ್ ಹೊಡೆಯಿರಿ]
ಹೀಗಿರುವಾಗ ತಾವುಗಳು ವೃಥಾ ವಿವಾದಾತ್ಮಕ ಸಂಘಟನೆಯಲ್ಲಿ ಭಾಗವಹಿಸಿ ಯಾರಿಗೂ ದೇಶ ಪ್ರೇಮದ ಪಾಠ ಕಲಿಸಬೇಕಾಗಿಲ್ಲ. ನಿಮಗೆ ಸಹಾಯ ಮಾಡಿದ ಸರಕಾರ ಹಾಗೂ ಮುಖ್ಯಮಂತ್ರಿ, ಶಾಸಕರು ದೇಶಪ್ರೇಮಿಗಳಾಗಿದ್ದಾರೆಂಬುದನ್ನು ತಿಳಿದುಕೊಳ್ಳಬೇಕು ಹಾಗೂ ಹುತಾತ್ಮ ಹನುಮಂತಪ್ಪನ ಕುಟುಂಬ ಯಾವುದೇ ಕೋಮುವಾದಿ ಸಂಘಟನೆಯೊಂದಿಗೆ ಪಾಲ್ಗೊಳ್ಳಬಾರದು ಎಂದು ಎಚ್ಚರಿಸಿದ್ದಾರೆ.