ಗಿರಡ್ಡಿ ಗೋವಿಂದರಾಜು ಪಾಟೀಲ್ ಪುಟ್ಟಪ್ಪರ ಬಳಿ ಯಾಕೆ ಕ್ಷಮೆ ಕೇಳ್ಬೇಕು?
ಹುಬ್ಬಳ್ಳಿ, ಜನವರಿ,27: ಕನ್ನಡ ಸಾಹಿತಿ ಪಾಟೀಲ್ ಪುಟ್ಟಪ್ಪ ಅವರ ಬಳಿ ಖ್ಯಾತ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜು ಕ್ಷಮೆಯಾಚಿಸಬೇಕು ಎಂದು ಹುಬ್ಬಳ್ಳಿ ಧಾರವಾಡ ಕಾಂಗ್ರೆಸ್ ವಕ್ತಾರ ವೇದವ್ಯಾಸ ಕೌಲಗಿ ಪಟ್ಟು ಹಿಡಿದಿದ್ದಾರೆ.
ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ ಧಾರವಾಡ ಸಾಹಿತ್ಯ ಸಮ್ಮೇಳನದ ಸಂಭ್ರಮ ಅವಶ್ಯವಿತ್ತೇ ಎಂದು ಹೇಳಿದ ಪಾಟೀಲ್ ಪುಟ್ಟಪ್ಪ ಅವರ ಹೇಳಿಕೆ ಖಂಡಿಸಿದ ಡಾ. ಗಿರಡ್ಡಿ ಗೋವಿಂದರಾಜು ಅವರ 'ಇತ್ತೀಚೆಗೆ ಪಾಪು ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಳ್ಳುತ್ತಿರುವಾಗ ರೈತರ ನೆನಪಾಗಲಿಲ್ಲವೇ' ಎಂಬ ಪ್ರತ್ತ್ಯುತ್ತರ ವೇದವ್ಯಾಸ ಕೌಲಗಿ ಅವರ ಕೋಪಕ್ಕೆ ಕಾರಣವಾಗಿದೆ.[ಗಂಗೂಬಾಯಿ ಹಾನಗಲ್ ಗಾಯನಕ್ಕೆ ಮರುಳಾದ ಪಂ.ಜಸರಾಜ್]
ಪಾಟೀಲ್ ಪುಟ್ಟಪ್ಪ ಅವರ ಪರ ಮಾತನಾಡಿದ ಕಾಂಗ್ರೆಸ್ ವಕ್ತಾರ ವೇದವ್ಯಾಸ ಕೌಲಗಿ, ಕನ್ನಡದ ಕಟ್ಟಾಳು, ಏಕೀಕರನದ ಹೋರಾಟಗಾರ ಇವರ ಹುಟ್ಟುಹಬ್ಬ ಆಚರಿಸಲು ಉತ್ತರ ಕರ್ನಾಟಕ ಜನತೆಗೆ ದೊರೆತಿದ್ದು, ಸೌಭಾಗ್ಯವೆಂದು ತಿಳಿದಿರುವಾಗ ನಮ್ಮೆಲ್ಲರ ಅಭಿಮಾನಕ್ಕೆ ಗಿರಡ್ಡಿ ಅವರು ಧಕ್ಕೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನವರಿ 14ರಂದು ಪಾಟೀಲ್ ಪುಟ್ಟಪ್ಪ ಅವರು 97 ವರ್ಷಕ್ಕೆ ಕಾಲಿಟ್ಟಿದ್ದು, ಇದನ್ನು ಅವರು ಆಚರಿಸಿಕೊಂಡಿದ್ದಲ್ಲ. ಕರ್ನಾಟಕ ವಿದ್ಯಾವರ್ಧಕ ಸಂಘದ ಏಳಿಗೆಗೆ ದುಡಿದಿದ್ದರು. ಪಾಪು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದಾಗ ಅತ್ಯಂತ ಪ್ರಾಮಾಣಿಕವಾಗಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಲು ಪ್ರಯತ್ನಿಸಿದ್ದರು. ಈ ಉದ್ದೇಶದಿಂದ ಅಭಿಮಾನಿಗಳು ಅವರ ಹುಟ್ಟುಹಬ್ಬ ಆಚರಿಸಿದ್ದಾರೆ ಎಂದು ಸಮಜಾಯಿಷಿ ನೀಡಿದ್ದಾರೆ.[ಸಾಹಿತ್ಯ ವಿಮರ್ಶೆ ಅಂದರೆ ಏನು? ಏಕೆ? ಹೇಗೆ ಹುಟ್ಟಿತು?]
ಡಾ. ಗಿರಡ್ಡಿ ಅವರ ಮೇಲೆ ಕಿಡಿಕಾರಿದ ಕೌಲಗಿ, 'ಧಾರವಾಡದಿಂದ ಬೆಂಗಳೂರನ್ನೇ ಕೇಂದ್ರಸ್ಥಾನ ಮಾಡಿಕೊಂಡು ವ್ಯಂಗ್ಯೋಕ್ತಿಗಳಿಂದ ತಮ್ಮ ಬೆನ್ನು ತಾವು ತಟ್ಟಿಕೊಳ್ಳುತ್ತ ಪಾಟೀಲ್ ಪುಟ್ಟಪ್ಪರವರನ್ನು ವಿದ್ಯಾವರ್ಧಕ ಸಂಘದಿಂದ ಸೋಲಿಸುವ ಪ್ರಯತ್ನ ಮಾಡಿದವರು ಡಾ.ಗಿರಡ್ಡಿಯವರು' ಎಂದು ದೂರಿದ್ದಾರೆ. ಜೊತೆಗೆ ಅವರ ಬಳಿ ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.