ಬಸವರಾಜ ಹೊರಟ್ಟಿ ಸೋಲು ಖಚಿತ: ಶೆಟ್ಟರ್ ಭವಿಷ್ಯ
ಹುಬ್ಬಳ್ಳಿ, ಮೇ, 10: ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಪಶ್ಚಿಮ ಪದವೀಧರ ಶಿಕ್ಷಕರ ಮತಕ್ಷೇತ್ರದಲ್ಲಿ ಜೆಡಿಎಸ್ ನಿಂದ ಸ್ಪರ್ಧೆ ಮಾಡಿರುವ ಬಸವರಾಜ ಹೊರಟ್ಟಿ ಸೋಲುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.
ಅವರು ಮಂಗಳವಾರ ನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಜರುಗಿದ ಬಿಜೆಪಿ ಪದಾಧಿಕಾರಿಗಳ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಈ ಬಾರಿ ಎಬಿವಿಪಿ ಹಿನ್ನೆಲೆಯುಳ್ಳ ಪ್ರೊ.ಮಾ.ನಾಗರಾಜ ಅವರು ಅತೀ ಹೆಚ್ಚಿನ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೇ 11, ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ಇನ್ನೊಂದು ಹಗರಣ ಬಯಲಿಗೆಳೆಯುತ್ತೇನೆ ಎಂದು. ನಾನು ನೀಡಲಿರುವ ಮಾಹಿತಿಯಿಂದ ಕಾಂಗ್ರೆಸ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಹೇಳಿದರು.[36 ವರ್ಷ ಶಾಸಕರಾಗಿ ಹೊರಟ್ಟಿ ಶಿಕ್ಷಕರಿಗೆ ಏನು ಮಾಡಿದ್ದಾರೆ ?]
ರಾಜ್ಯದಲ್ಲಿನ ಭ್ರಷ್ಟ ಕಾಂಗ್ರೆಸ್ ಸರಕಾರ ಹಲವಾರು ಅವ್ಯವಹಾರಗಳನ್ನು ಜನತೆಯ ತೆರಿಗೆ ದುಡ್ಡನ್ನು ದೋಚುತ್ತಿದೆ. ಸಚಿವ ಎಚ್.ಕೆ.ಪಾಟೀಲ ತಮ್ಮದೇ ನೀರಿನ ಘಟಕಗಳ ಸ್ಥಾಪನೆಯಲ್ಲಾದ ಅವ್ಯವಹಾರಗಳ ಗೊತ್ತಿಲ್ಲ ಈ ಬಗ್ಗೆ ಸಿಐಡಿ ತನಿಖೆ ನಡೆಸುತ್ತೇನೆ ಎಂದು ಹೇಳುತ್ತಾರೆ. ಇದು ಸರಕಾರದ ಕಾರ್ಯವೈಖರಿಯಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಂತೂ ಯಾರಿಗೆ ಕ್ಯಾರೇ ಎನ್ನುತ್ತಿಲ್ಲ. ಮೌಲ್ಯಮಾಪಕರು 15 ದಿನಗಳಟ್ಟಲೇ ಬೇಡಿಕೆ ಈಡೇರಿಸುವಂತೆ ಪ್ರತಿಭಟಿಸಿದರೆ ಸರಕಾರದ ಪರವಾಗಿ ಒಬ್ಬರೂ ಅವರ ಅಹವಾಲು ಕೇಳಲಿಲ್ಲ ಎಂದು ಶೆಟ್ಟರ್ ದೂರಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಮ್ಮ ಮಗನ ಚಲನಚಿತ್ರ ಜಾಗ್ವಾರ್ ದ ಶೂಟಿಂಗ್ ಗಾಗಿ ಹದಿನೈದು ದಿನಗಳಿಂದ ಆಸ್ಟ್ರೇಲಿಯಾದಲ್ಲಿ ಬೀಡು ಬಿಟ್ಟಿದ್ದಾರೆ. ರಾಜ್ಯ ಬರ ಪರಿಸ್ಥಿತಿ ಇರುವುದು ಅವರಿಗೂ ಗೊತ್ತಿದೆ. ದೂರದಲ್ಲಿ ಇದ್ದು ರಾಜ್ಯಕ್ಕೇನು ಮಾಡುತ್ತಾರೆ ಎಂದು ಪ್ರಶ್ನಿಸಿದ ಶೆಟ್ಟರ್, ಬಸವರಾಜ ಹೊರಟ್ಟಿ ಅವರೂ ಕೂಡ ಪ್ರಚಾರದಲ್ಲಿ ತಮ್ಮ ಪಕ್ಷದ ರಾಜ್ಯಾಧ್ಯಕ್ಷರಿಲ್ಲದೇ ಹೇಗೆ ಪ್ರಚಾರ ಮಾಡುವುದು ಎಂದು ಚಿಂತೆ ಮಾಡುತ್ತ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ ಎಂದು ವ್ಯಂಗ್ಯವಾಡಿದರು.[ಹುಬ್ಬಳ್ಳಿ: ವಾಟರ್ ಸಪ್ಲೈ ಅಲರ್ಟ್ ಬಂದ್, ತಪ್ಪು ಯಾರದ್ದು?]
ಕಾಂಗ್ರೆಸ್ ಇಬ್ಬರನ್ನೂ ಪಕ್ಷದ ಅಭ್ಯರ್ಥಿಗಳನ್ನಾಗಿಸಿ ತಮ್ಮ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂದು ತೋರಿಸಿಕೊಟ್ಟಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಈಶ್ವರ ಅವರೂ ಸೋಲಲಿದ್ದಾರೆ ಎಂದು ಹೇಳಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಶಾಸಕರಾದ ಅರವಿಂದ ಬೆಲ್ಲದ, ಪ್ರೊ.ಎಸ್.ವಿ.ಸಂಕನೂರ, ಪ್ರದೀಪ ಶೆಟ್ಟರ್ ಸೇರಿದಂತೆ ಪಕ್ಷದ ಮಾಜಿ ಶಾಸಕರು, ಮಾಜಿ ಸಚಿವರು, ಹಾಲಿ ಜಿ.ಪಂ. ಅಧ್ಯಕ್ಷರು ಹಾಜರಿದ್ದರು.