ಧಾರವಾಡದ ಹೆಬ್ಬಾಳ ಗ್ರಾಮಸ್ಥರು ಕುಡಿಯುತ್ತಿರುವುದು ಈ ಹಳ್ಳದ ನೀರನ್ನು
ಧಾರವಾಡ, ಡಿಸೆಂಬರ್ 13: ಮನುಷ್ಯನ ಮೂಲ ಸೌಕರ್ಯದಲ್ಲಿ ನೀರಿಗೆ ಅಮೂಲ್ಯ ಸ್ಥಾನ. ಆದರೆ ಈ ಗ್ರಾಮದ ಜನರು ಮಾತ್ರ ಈ ಮೂಲ ಸೌಕರ್ಯ ಪಡೆಯಲು ಇನ್ನೂ ಪರದಾಡುತ್ತಿದ್ದಾರೆ. ಶುದ್ಧ ನೀರು ಸಿಗದೇ ನಿತ್ಯ ಹಳ್ಳದ ನೀರು ಕುಡಿಯುತ್ತಲೇ ಜೀವನ ಸಾಗಿಸುತ್ತಿದ್ದಾರೆ.
ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ಪ್ರಾಣಿಗಳನ್ನು ಶುದ್ಧಗೊಳಿಸುವುದು ಎಲ್ಲಾ ಈ ಹಳ್ಳದ ನೀರಲ್ಲೇ. ಕುಡಿಯುವುದೂ ಇದೇ ನೀರನ್ನೆ. ಕಲುಷಿತವಾದ ಹಳ್ಳದ ನೀರನ್ನು ಕುಡಿದು ಜನರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದರೆ ಇಷ್ಟೆಲ್ಲಾ ಆಗುತ್ತಿದ್ದರೂ ಇದರ ಬಗ್ಗೆ ಆಲೋಚಿಸುವ ಗೋಜಿಗೂ ಯಾರೂ ಹೋಗುತ್ತಿಲ್ಲ. ನೀರಿನಿಂದ ಕಂಗಾಲಾಗಿರುವ ಆ ಗ್ರಾಮದ ಪರಿಸ್ಥಿತಿ ನೋಡಿದರೆ ಮರುಕ ಹುಟ್ಟದೇ ಇರಲು ಸಾಧ್ಯವೇ ಇಲ್ಲ.
ಎರಡು ತಿಂಗಳಿಂದ ಹಳ್ಳದ ನೀರು ಕುಡಿಯುತ್ತಿರುವ ಜನ
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಹೀಗಾಗಿ ಗ್ರಾಮದ ಹೊರವಲಯದಲ್ಲಿ ಹರಿದು ಹೋಗಿರುವ ಗಲೀಜು ನೀರು ಕುಡಿದು ಬದುಕುವ ಸ್ಥಿತಿ ಇಲ್ಲಿನ ಜನರ ಪಾಲಾಗಿದೆ. ಕಳೆದ ಎರಡು ತಿಂಗಳಿಂದ ಅಶುದ್ಧ ನೀರು ಕುಡಿದು, ಗ್ರಾಮದ ಜನರು ನಾನಾ ಕಾಯಿಲೆಗಳಿಗೆ ತುತ್ತಾಗಿರುವ ಉದಾಹರಣೆಗಳು ಸಿಕ್ಕಿವೆ.
ಬರದ ಬೀಡಾಗಿದ್ದ ಚಿತ್ರದುರ್ಗದಲ್ಲಿ ಉಕ್ಕಿ ಹರಿಯುತ್ತಿದೆ ಕೊಳವೆ ಬಾವಿ
ಗ್ರಾಮಕ್ಕೆ ನೀರು ನೀಡುವ ಕೆರೆಯೂ ಖಾಲಿ
ಹೆಬ್ಬಾಳ ಗ್ರಾಮಕ್ಕೆ ನೀರು ನೀಡುತ್ತಿದ್ದ ಕೆರೆಯಲ್ಲಿ ಹೂಳೆತ್ತುವ ಕಾರ್ಯವನ್ನು ಗ್ರಾಮ ಪಂಚಾಯಿತಿ ಮಾಡಿದೆ. ಕೆರೆಯನ್ನು ಖಾಲಿ ಮಾಡಿ ಹೂಳೆತ್ತುವ ಕಾರ್ಯವನ್ನು ಮಾಡಿದೆ. ಆದರೆ ಗ್ರಾಮದ ಜನರಿಗೆ ಪರ್ಯಾಯ ವ್ಯವಸ್ಥೆ ಮಾಡೇ ಇಲ್ಲ. ಜೊತೆಗೆ ಹಳ್ಳದ ನೀರು ಕುಡಿಯುವಂತೆ ಗ್ರಾಮ ಪಂಚಾಯತ್ ಅಧಿಕಾರಿಗಳು ಜನರಿಗೆ ತಿಳಿಸಿದ್ದಾರೆ. ಹಾಗಾಗಿ ಗ್ರಾಮದ ಜನರು ಅನಿವಾರ್ಯವಾಗಿ ಹಳ್ಳದ ನೀರು ಕುಡಿದು ಜೀವನ ನಡೆಸುತ್ತಿದ್ದಾರೆ.
ನೀರಿಗಾಗಿ ಅಂಗಲಾಚುತ್ತಿರುವ ಮಹಿಳೆಯರು
ಗ್ರಾಮದಲ್ಲಿ ಒಂಟಿ ಮಹಿಳೆಯರು ಹಾಗೂ ವಯೋವೃದ್ಧರು ಕುಡಿಯುವ ನೀರಿಗಾಗಿ ಅಂಗಲಾಚುವಂತಾಗಿದೆ. ಗ್ರಾಮದಿಂದ ದೂರ ಇರುವ ಹಳ್ಳದ ನೀರು ತರಲು ಆಗದೇ ಬೇರೆಯವರಿಗೆ ನೀರು ಕೊಡಿ ಎಂದು ಬೇಡುವಂತಾಗಿದೆ. ಗ್ರಾಮದಲ್ಲಿ ಹಣ ಇರುವವರು ಅಕ್ಕಪಕ್ಕದ ಗ್ರಾಮಗಳಿಂದ ಟ್ರ್ಯಾಕ್ಟರ್ ಮೂಲಕ ನೀರು ತೆಗೆದುಕೊಂಡು ಬರುತ್ತಿದ್ದಾರೆ. ಬಡವರು, ನಿತ್ಯ ಕೂಲಿ ಕೆಲಸ ಮಾಡುವವರು ಈ ಅಶುದ್ಧ ನೀರು ಸೇವನೆ ಮಾಡುತ್ತಿದ್ದಾರೆ.
ಸೋಲಿಗರ ಈ ಸ್ಥಿತಿ ನೋಡಿದರೆ ನಿಮ್ಮ ಮನಸ್ಸೂ ಕರಗಬಹುದು, ಆದರೆ...
ಜನರಪ್ರತಿನಿಧಿಗಳ ನಿರ್ಲಕ್ಷ್ಯ
ಜನ ಪ್ರತಿನಿಧಿಗಳು ವೋಟಿಗಾಗಿ ಮಾತ್ರ ಬರುತ್ತಾರೆ ವಿನಃ ಜನರ ಸಮಸ್ಯೆ ಆಲಿಸಲು ಅಲ್ಲ ಎಂದು ದೂರುತ್ತಾರೆ ಸ್ಥಳೀಯರು. ಧಾರವಾಡ ಜಿಲ್ಲೆಯಲ್ಲಿ ಓರ್ವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಓರ್ವ ರಾಜ್ಯ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ನವಲಗುಂದ ಬಿಜೆಪಿಯ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಆಡಳಿತದಲ್ಲಿ ಇದ್ದಾರೆ. ಆದರೆ ಗ್ರಾಮದ ಜನರಿಗೆ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಕಡೆ ಮಾತ್ರ ಯಾರೂ ಗಮನ ನೀಡಿಲ್ಲ.