ಧಾರವಾಡದಲ್ಲಿ ರಾತ್ರಿಯಿಡೀ ಸುರಿದ ಮಳೆ; ರಸ್ತೆ ಸಂಪರ್ಕ ಕಡಿತ
ಧಾರವಾಡ, ಅಕ್ಟೋಬರ್ 20: ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದ್ದು, ಶನಿವಾರ ರಾತ್ರಿಯಿಡೀ ಸುರಿದ ಮಳೆಗೆ ಹಲವು ಹಳ್ಳ, ಕೆರೆಗಳು ಪ್ರವಾಹ ಸ್ವರೂಪ ಪಡೆದುಕೊಂಡಿವೆ. ಪರಿಣಾಮವಾಗಿ ಕೆಲ ರಸ್ತೆಗಳು ಸಂಪರ್ಕ ಕಡಿದುಕೊಂಡಿದ್ದು, ಕೆರೆಗಳ ನೀರು ಗ್ರಾಮಗಳಿಗೂ ನುಗ್ಗಿದೆ.
ಧಾರವಾಡ- ಸವದತ್ತಿ- ಬಾಗಲಕೋಟೆ ಸಂಪರ್ಕ ಕಲ್ಪಿಸುವ ರಸ್ತೆಯ ತಾತ್ಕಾಲಿಕ ಸೇತುವೆಯು ಪುನಃ ತುಪ್ಪರಿಹಳ್ಳದ ಪ್ರವಾಹಕ್ಕೆ ಮುಳುಗಡೆಯಾಗಿದೆ. ಹಾರೋಬೆಳವಡಿ ಬಳಿಯಲ್ಲಿಯೇ ತುಪ್ಪರಿಹಳ್ಳ ರಸ್ತೆಯನ್ನೇ ಆವರಿಸಿಕೊಂಡು ಹರಿಯುತ್ತಿದ್ದು, ಎರಡು ತಿಂಗಳ ಹಿಂದೆ ಇದೇ ಹಳ್ಳದ ಪ್ರವಾಹಕ್ಕೆ ಇಲ್ಲಿನ ಮುಖ್ಯ ಸೇತುವೆ ಕೊಚ್ಚಿ ಹೋಗಿತ್ತು.
ಈಗ ತಾತ್ಕಾಲಿಕ ಸೇತುವೆ ಮೂರನೇ ಬಾರಿ ಮುಳುಗಡೆಯಾಗಿದ್ದು, ರಸ್ತೆ ಸಂಚಾರ ಬಂದ್ ಆಗಿದೆ. ಧಾರವಾಡ ತಾಲೂಕಿನ ಹೊಸೆಟ್ಟಿ ಗ್ರಾಮದ ಕೆರೆಯ ಒಂದು ಭಾಗ ಒಡೆದಿದ್ದು, ಇದರಿಂದ ತಡರಾತ್ರಿ ಗ್ರಾಮದೊಳಗೆ ನೀರು ನುಗ್ಗಿದೆ. ನೀರು ನುಗ್ಗಿದ ತಕ್ಷಣವೇ ಜಲಾವೃತಗೊಳ್ಳಲಿದ್ದ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದ್ದು, ಸದ್ಯ ನೀರು ನುಗ್ಗಿರುವ ಮನೆಗಳಿಂದ ಪಂಪ್ ಸೆಟ್ ಮೂಲಕ ಹೊರಹಾಕುವ ಕಾರ್ಯ ನಡೆದಿದೆ.
ಎರಡು ತಿಂಗಳ ಹಿಂದೆ ಪ್ರವಾಹ ಬಂದಾಗ 8 ದಿನಗಳ ಕಾಲ ಸಂಪರ್ಕ ಕಡಿದುಕೊಂಡಿದ್ದ ಕಂಬಾರಗಣವಿ ಗ್ರಾಮದ ಹಳ್ಳ ಪುನಃ ಪ್ರವಾಹ ಸ್ವರೂಪ ಪಡೆದುಕೊಂಡಿದ್ದು, ಇದರಿಂದ ಕಂಬಾರಗಣವಿ ಗ್ರಾಮವೂ ಮತ್ತೊಮ್ಮೆ ಸಂಪರ್ಕ ಕಡಿದುಕೊಂಡಿದೆ. ಇದರ ಜೊತೆಗೆ ಅಳ್ನಾವರ ತಾಲೂಕಿನ ಹುಲಿಕೆರೆಯ ಇಂದಿರಮ್ಮನ ಕೆರೆ ಕೂಡ ತುಂಬಿ ಹರಿಯುತ್ತಿದ್ದು, ಕ್ಲಸ್ಟರ್ ಗೇಟ್ ಓಪನ್ ಮಾಡಿರುವುದರಿಂದ ಅಳ್ನಾವರ ನಗರಕ್ಕೆ ಯಾವುದೇ ಆತಂಕ ಇಲ್ಲದಂತಾಗಿದೆ.