ಭಾರೀ ಮಳೆಗೆ ಧಾರವಾಡ- ಬೆಳಗಾವಿ ರಾಜ್ಯ ಹೆದ್ದಾರಿಯ ಸೇತುವೆ ಮುಳುಗಡೆ
ಧಾರವಾಡ, ಅಕ್ಟೋಬರ್ 13: ಎರಡು- ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನರಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಶನಿವಾರ ಸುರಿದ ಮಳೆಯಿಂದಾಗಿ ಧಾರವಾಡ- ಬೆಳಗಾವಿ ರಾಜ್ಯ ಹೆದ್ದಾರಿಯ ಸೇತುವೆ ಮುಳುಗಡೆಯಾಗಿದೆ. ಶನಿವಾರ ರಾತ್ರಿ ಧಾರವಾಡ ಬೆಳಗಾವಿ ಗಡಿ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು, ಮಳೆಗೆ ತುಪ್ರಿಹಳ್ಳಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ.
11 ವರ್ಷದ ನಂತರ ತುಂಬಿದ ಕಳಸಾಪುರ ದೊಡ್ಡ ಕೆರೆ
ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಧಾರವಾಡದಿಂದ ಸೌದತ್ತಿಗೆ ಹೋಗುವ ಹಾರೋಬೆಳವಡಿ ಗ್ರಾಮದ ಬಳಿಯ ಸೇತುವೆಯೂ ಮುಳುಗಡೆಯಾಗಿದೆ . ಇನ್ನು ಇದರಿಂದ ವಾಹನ ಸವಾರರಿಗೆ ಸಾಕಷ್ಟು ತೊಂದರಯಾಗಿದ್ದು, ಮುಳುಗಡೆಯಾದ ಸೇತುವೆ ಮೇಲೆಯೇ ಜನ ದಾಟಲು ಪ್ರಯತ್ನ ಮಾಡುತಿದ್ದಾರೆ.
ಇದೇ ಸೇತುವೆ ಕಳೆದ ಎರಡು ತಿಂಗಳ ಹಿಂದೆ ಬಂದ ಭಾರಿ ಮಳೆಗೆ ಕೊಚ್ಚಿ ಹೋಗಿತ್ತು. ಹೀಗಾಗಿ ಅದರ ಪಕ್ಕದಲ್ಲೇ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿತ್ತು. ಆದರೆ ಭಾನುವಾರದಂದು ತಾತ್ಕಾಲಿಕ ಸೇತುವೆ ಕೂಡ ಮುಳುಗಡೆಯಾಗಿದೆ. ಎರಡು ತಿಂಗಳ ಹಿಂದೆ ಬೆಳಗಾವಿಯಲ್ಲಿ ಭಾರೀ ಮಳೆಗೆ ಅಪಾರ ಪ್ರಮಾಣದಲ್ಲಿ ಹಾನಿ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.