ಈ ಹಿಂದೆ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ದ ಹಳ್ಳಿ ಈಗ ಹೇಗಿದೆ?
ಧಾರವಾಡ, ಜೂನ್ 6: ಎಚ್ಡಿಕುಮಾರಸ್ವಾಮಿಯವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ನಡೆಸಿದ ಗ್ರಾಮ ವಾಸ್ತವ್ಯ ಹೂಡಿದ್ದ ಹಳ್ಳಿ ಕತೆ ಏನಾಗಿದೆ.
ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯವರು ಧಾರವಾಡದ ನಾವಳ್ಳಿಯಲ್ಲಿ ಗ್ರಾಮ ವಾಸ್ತವ್ಯ ನಡೆಸುತ್ತಿದ್ದು, ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಲವು ಯೋಜನೆಗಳಿಗೆ ಚಾಲನೆ ನೀಡಿದ್ದರು.
ಕುಮಾರಸ್ವಾಮಿ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾವಳ್ಳಿಯಲ್ಲಿ 2006ರ ಅಕ್ಟೋಬರ್ 10 ರಂದು ಅಲ್ಲಾಬಿ ಚಾಂದಸಾಬ ನದಾಫ್ ಅವರ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದರು.
ಗ್ರಾಮ ವಾಸ್ತವ್ಯ ಲೇವಡಿ ಮಾಡಿದ ಬಿಜೆಪಿಗೆ ಉತ್ತರ ಕೊಟ್ಟ ಸಿಎಂ
ಒಂದು ತಾಲೂಕಿಗೆ ಐದು ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ತಲಾ ಒಂದು ಹಳ್ಳಿಗೆ ಒಂದು ಕೋಟಿ ಅನುದಾನ ಹಂಚಿಕೆ ಮಾಡಿ ಹಳ್ಳಿಗಳ ಚಿತ್ರಣ ಬದಲು ಮಾಡಲು ಸುವರ್ಣ ಗ್ರಾಮ ಯೋಜನೆ ಪ್ರಾರಂಭಿಸಿದರು. ಈಗ ಅದು ಗ್ರಾಮ ವಿಕಾಸ ಯೋಜನೆಯೆಂದು ಮರುನಾಮಕರಣಗೊಂಡಿದೆ.
ಕುಮಾರಸ್ವಾಮಿ ಅವರು ನಾವಳ್ಳಿ ಗ್ರಾಮ ವಾಸ್ತವ್ಯ ಮಾಡಿದ ಹಿನ್ನಲೆಯಲ್ಲಿ ಗ್ರಾಮಕ್ಕೆ ವಿಶೇಷ ಮುತುವರ್ಜಿ ವಹಿಸಿ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ನೂತನ ಪ್ರೌಢಶಾಲೆ ಆರಂಭ ಮಾಡಲು ಸೂಚಿಸಿದ್ದರು.
ಗ್ರಾಮ ವಾಸ್ತವ್ಯ 'ಗಿಮಿಕ್' ಆರೋಪ: ಸಿಎಂ ಕುಮಾರಸ್ವಾಮಿ ಹೇಳಿದ್ದೇನು?
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ಬಳಿಕ ನಾವಳ್ಳಿ ಅಭಿವೃದ್ಧಿಯತ್ತ ಮುಖ ಮಾಡಿತು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು.
ನಾವಳ್ಳಿಯಲ್ಲಿ ನೂತನ ಪ್ರೌಢಶಾಲೆ ಮಂಜೂರು
ಮೂರು ಕಿಲೋ ಮೀಟರ್ ವ್ಯಾಪ್ತಿಯೊಳಗೆ ಈಗಾಗಲೇ ಸರಕಾರಿ ಪ್ರೌಢಶಾಲೆ ಇದ್ದರೆ ಹೊಸ ಶಾಲೆ ತೆಗೆಯಬಾರದು ಎಂಬ ಕಾನೂನು ಇದ್ದರೂ ಕೂಡ ನಾವಳ್ಳಿ ಗ್ರಾಮವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ನೂತನ ಪ್ರೌಢಶಾಲೆ ಮಂಜೂರು ಮಾಡಲು ಆದೇಶಿಸಿದರು.
ಸಾರಾಯಿ ನಿಷೇಧ ನಿರ್ಣಯ
ನಾವಳ್ಳಿಯಲ್ಲಿ ಮಹಿಳೆಯರು ಅಂದು ಕುಮಾರಸ್ವಾಮಿಯವರನ್ನು ಮುಖಾಮುಖಿಯಾದಾಗ ಕುಡಿತದ ಹಾವಳಿಯಿಂದಾಗಿ ತಮ್ಮ ಸಂಸಾರಗಳು ಬೀದಿಪಾಲಾಗುತ್ತಿವೆ ಎಂದು ಕಣ್ಣೀರು ಹಾಕಿದ್ದರಿಂದ ರಾಜ್ಯಾದ್ಯಂತ ಸಾರಾಯಿ ನಿಷೇಧದಂತಹ ಐತಿಹಾಸಿಕ ತೀರ್ಮಾನ ಹೊರಬಿತ್ತು.
ರೈತರು ಉಳ್ಳಾಗಡ್ಡಿ ಬೆಲೆ ಕುಸಿತ ಕುರಿತು ಕುಮಾರಸ್ವಾಮಿ ಅವರ ಗಮನ ಸೆಳೆದರು. ಅಂದು ಮಾರುಕಟ್ಟೆಯಲ್ಲಿ ಉಳ್ಳಾಗಡಿ ಬೆಲೆ ಕ್ವಿಂಟಾಲ್ ಗೆ 50 ರಿಂದ 80 ರೂಪಾಯಿ ಮಾತ್ರ ಇತ್ತು. ಇದರಿಂದ ತಕ್ಷಣವೇ ಉಳ್ಳಾಗಡ್ಡಿಗೆ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ ಗೆ 500 ರೂಪಾಯಿ ಘೋಷಿಸಿ ಸಾವಿರಾರುಕ್ವಿಂಟಾಲ್ ಉಳ್ಳಾಗಡ್ಡಿ ಖರೀದಿಯಾಯಿತು ಎಂದು ಗ್ರಾಮದ ರೈತ ಡಿ.ಎಂ.ಪಾಟೀಲ ಇಂದಿಗೂ ಸ್ಮರಿಸುತ್ತಾರೆ.ಅಂಗನವಾಡಿ ಕಾರ್ಯಕರ್ತೆಯರಿಗೆ ಸಕಾಲದಲ್ಲಿ ವೇತನ
50ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ತಾಲೂಕು ಬೋರ್ಡನಿಂದ ಆಯ್ಕೆಯಾಗಿದ್ದರಿಂದ ಸಮಯಕ್ಕೆ ಸರಿಯಾಗಿ ವೇತನ ದೊರಕದಿರುವ ಬಗ್ಗೆ ಅಳಲು ತೋಡಿಕೊಂಡಿದ್ದರು. ಅದಕ್ಕಾಗಿ ಅವರನ್ನು ಅಂದಿನಿಂದಲೇ ಜಿಲ್ಲಾ ಪಂಚಾಯತ್ನ ನೌಕರರನ್ನಾಗಿ ಪರಿಗಣಿಸಿದರಲ್ಲದೇ ಇಡೀ ರಾಜ್ಯಕ್ಕೆ ಈ ನಿಯಮ ಅನ್ವಯಗೊಳಿಸಿದರು.
ನಾವಳ್ಳಿಗೆ ಮೊದಲು ಕನ್ಯೆ ಕೊಡಲು ಹಿಂದೇಟು ಹಾಕುತ್ತಿದ್ದರು
ನಾವಳ್ಳಿ ಗ್ರಾಮಕ್ಕೆ ಮೊದಲು ಸಮರ್ಪಕ ರಸ್ತೆ ಸಂಪರ್ಕ ಇರಲಿಲ್ಲ. ಯಾವುದಾದರೂ ಊರಿಗೆ ಹೋಗಬೇಕಾದರೆ ಸಮೀಪದ ಶಲವಡಿ,ತುಪ್ಪದ ಕುರಹಟ್ಟಿ, ಹಳ್ಳಿಕೇರಿ ಇಲ್ಲವೇ ಇಬ್ರಾಹಿಂಪುರದವರೆಗೆ ಐದು ಕಿ.ಮೀ.ನಡೆದುಕೊಂಡು ಹೋಗಿಯೇ ಬಸ್ ಹಿಡಿತ ಬೇಕಾಗಿತ್ತು. ಹಳ್ಳ ಬಂದ ಸಮಯದಲ್ಲಿ ಗರ್ಭಿಣಿಯರನ್ನು ,ರೋಗಿಗಳನ್ನು ತೊಟ್ಟಿಲಲ್ಲಿ ಹೊತ್ತುಕೊಂಡು ದಾಟಿಸಬೇಕಾಗಿತ್ತು.ಮೊಣಕಾಲುದ್ದ ಚರಂಡಿ ನೀರು ಗ್ರಾಮದಲ್ಲಿ ಹರಿಯುತ್ತಿತ್ತು. ಈಗ ಸಾಕಷ್ಟು ಪ್ರಗತಿಯಾಗಿದೆ.
ಕುಡಿಯುವ ನೀರಿನ ನಳ ಬಂದಿವೆ ಎಂದು ಗ್ರಾಮದ ಎ.ಆರ್.ಕಿರೇಸೂರ ಸಂತೃಪ್ತಿ ವ್ಯಕ್ತಪಡಿಸಿದರು.
ಹಂದಿಗ್ಯಾನಹಳ್ಳದ ಸೇತುವೆ, ಅಡ್ನೂರ,ಕಿತ್ತೂರ ಕ್ವಾರೆಗೆ ನೀರು ತುಂಬಿಸುವ ಕಾರ್ಯ ತುರ್ತಾಗಿ ಆಗಬೇಕು ಎಂದು ಸ್ಥಳೀಯ ಗ್ರಾಮಸ್ಥ ಗುರಪ್ಪ ಮಣಕವಾಡ ಹೇಳಿದರು.
ನಾವಳ್ಳಿ ಗ್ರಾಮಕ್ಕೆ ಬಸ್ ಸಂಪರ್ಕ
ನಾವಳ್ಳಿ ಗ್ರಾಮಕ್ಕೆ ಬಸ್ ಸಂಪರ್ಕವಿರಲಿಲ್ಲ. ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯದ ನಂತರ ಹುಬ್ಬಳ್ಳಿಯಿಂದ ಅಣ್ಣಿಗೇರಿ ಮಾರ್ಗವಾಗಿ ನಾವಳ್ಳಿಗೆ ಬಸ್ ಸಂಚಾರ ಆರಂಭಿಸಲಾಯಿತು. ಅದಕ್ಕೆ ಇಂದಿಗೂ ಕೂಡ ಕುಮಾರಸ್ವಾಮಿ ಬಸ್ ಎಂದೇ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಗ್ರಾಮಸ್ಥರು ಹೆಮ್ಮೆಯಿಂದ ಕರೆಯುತ್ತಾರೆ.