ಅಪಘಾತ: ಹುಬ್ಬಳ್ಳಿಯ ನಾಲ್ವರ ದುರ್ಮರಣ, 6 ಮಂದಿಗೆ ಗಾಯ
ಹುಬ್ಬಳ್ಳಿ,ಮಾರ್ಚ್,30: ದೇವರ ದರ್ಶನಕ್ಕೆಂದು ತೆರಳಿದ್ದ ಹುಬ್ಬಳ್ಳಿಯ ಅಮರಗೋಳ ಗ್ರಾಮದ ಮಂದಿಯ ಟವೇರಾ ವಾಹನ ಮಧ್ಯಪ್ರದೇಶದ ಶಹಜಹಾನಪುರ ಬಳಿ ಅಪಘಾತಕ್ಕೀಡಾದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಉಳಿದವರನ್ನು ಶಹಜಹಾನಪುರ ಆಸ್ಪತ್ರೆ ದಾಖಲಿಸಲಾಗಿದೆ.
ಮಧ್ಯಪ್ರದೇಶದ ಶಹಜಹಾನಪುರ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದಾದಾಪೀರ ನದಾಫ್ (28), ಸಲೀಂ ಬಂಗ್ಲೆವಾಲೇ (25) ಮಹ್ಮದ ಬಡಿಗೇರ (23), ಮುಕ್ತುಂ ನವಲೂರ (24) ಎಂಬ ನಾಲ್ವರು ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ನಜೀರ್ ನದಾಫ್, ಅಹ್ಮದ್ ಲಕ್ಕುಂಡಿ, ಹಜರತ್ ಅಲಿ ನದಾಫ್, ಟಿಪ್ಪು ನದಾಫ್, ಮಹ್ಮದ್ ರಫೀಕ್ ಮುಲ್ಲಾ, ಮತ್ತು ಮಿಶ್ರಿಕೋಟಿ ಗ್ರಾಮದ ಟಿಪ್ಪು ಎಂದು ಗುರುತಿಸಲಾಗಿದೆ.[ಪಾನಮತ್ತ ವೈದ್ಯನ ಉಪಟಳ, ಒಂದು ಸಾವು, ನಾಲ್ವರಿಗೆ ಗಾಯ]
ಅಪಘಾತ ಸಂಭವಿಸಿದ್ದು ಹೇಗೆ?
ವೆಲ್ಡರ್ ಕೆಲಸ ಮಾಡಿಕೊಂಡಿದ್ದ ದಾದಾಪೀರ್ ನದಾಫ್ ಅವರ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ದಾದಾಪೀರ್ ತನ್ನ ಸ್ನೇಹಿತರನ್ನು ಕರೆದುಕೊಂಡು ಮಾ. 25ರಂದು ರಾಜಸ್ಥಾನದ ಅಜ್ಮೀರ್ ದರ್ಗಾಕ್ಕೆ ದೇವರ ದರ್ಶನಕ್ಕಾಗಿ ಖಾಸಗಿ ಟವೇರಾ ವಾಹನವನ್ನು ಬಾಡಿಗೆ ತೆಗೆದುಕೊಂಡು ತೆರಳಿದ್ದರು.[ಮುಖ್ಯಮಂತ್ರಿ ಸಾಂತ್ವನ-'ಹರೀಶ್' ಯೋಜನೆ ಬಗ್ಗೆ ತಿಳಿಯಿರಿ]
ದೇವರ ದರ್ಶನ ಮುಗಿಸಿ ಮರಳುವಾಗ ಮಾ.28 ರಂದು ಶಹಜಹಾನಪುರ ಬಳಿ ಟವೇರಾ ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ಸುದ್ದಿ ಸೋಮವಾರ ತಿಳಿಯುತ್ತಿದ್ದಂತೆ ಅಮರಗೋಳ ಗ್ರಾಮವೇ ಶೋಕದಲ್ಲಿ ಮುಳುಗಿತ್ತು. ಮೃತರ ದೇಹಗಳು ಬುಧವಾರ ಮಧ್ಯಾಹ್ನ ಹುಬ್ಬಳ್ಳಿ ನಗರವನ್ನು ತಲುಪಲಿದೆ ಎಂದು ಎಪಿಎಂಸಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಎಸ್.ಆರ್ ನಾಯಕ್ ತಿಳಿಸಿದ್ದಾರೆ.