ಧಾರವಾಡ ಕಟ್ಟಡ ಕುಸಿತ: ತಡರಾತ್ರಿ ಆರೋಪಿಗಳ ಶರಣು, ಸಾವಿನ ಸಂಖ್ಯೆ 15ಕ್ಕೆ
ಮಾರ್ಚ್ 22: ಧಾರವಾಡದಲ್ಲಿ ಸುಮಾರು 15 ಮಂದಿಯನ್ನು ಬಲಿತೆಗೆದುಕೊಂಡ ಕಟ್ಟಡ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ.
ಧಾರವಾಡದ ಕುಮಾರೇಶ್ವರ ನಗರದಲ್ಲಿ ಮಂಗಳವಾರ ಮಧ್ಯಾಹ್ನ ನಿರ್ಮಾಣ ಹಂತದಲ್ಲಿದ್ದ ವಾಣಿಜ್ಯ ಕಟ್ಟಡವೊಂದು ಕುಸಿದು 15 ಜನರು ಮೃತಪಟ್ಟಿದ್ದಾರೆ. ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿದ್ದು, ಅವುಗಳ ಅಡಿಯಲ್ಲಿ ಇನ್ನೂ 14 ಮಂದಿ ಸಿಲುಕಿರುವ ಅನುಮಾನ ವ್ಯಕ್ತವಾಗಿದೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಕಟ್ಟಡ ಕುಸಿತ ಘಟನೆ ಸಂಬಂಧ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಅವರಲ್ಲಿ ಕಟ್ಟಡದ ಎಂಜಿನಿಯರ್ ವಿವೇಕ್ ಪವಾರ್ ಅವರನ್ನು ಗುರುವಾರ ಪೊಲೀಸರು ಬಂಧಿಸಿದ್ದರು. ಉಳಿದ ನಾಲ್ವರು ಆರೋಪಿಗಳಾದ ರವಿ ಸಬರದ್, ಬಸವರಾಜ ನಿಗದಿ, ಗಂಗಣ್ಣ ಶಿಂತ್ರಿ ಮತ್ತು ಮಹಾಬಳೇಶ್ವರ ಪುರದಗುಡಿ ತಡರಾತ್ರಿ ಉಪನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ.
ಧಾರವಾಡ ಕಟ್ಟಡ ಕುಸಿತ, ಸಾವಿನ ಸಂಖ್ಯೆ 12: ಮೃತರ ಕುಟುಂಬಕ್ಕೆ 2 ಲಕ್ಷ
ಗಂಗಣ್ಣ ಶಿಂತ್ರಿ ಅವರು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಮಾವನಾಗಿದ್ದು (ಪತ್ನಿಯ ತಂದೆ), ಕಟ್ಟಡದ ಮಾಲೀಕರಾಗಿದ್ದಾರೆ. ಇನ್ನೊಬ್ಬ ಆರೋಪಿ ರಾಜು ಘಾಟಿ ಅವರು ತಲೆಮರೆಸಿಕೊಂಡಿದ್ದಾರೆ.
ಸಾವಿನ ಸಂಖ್ಯೆ 15ಕ್ಕೆ ಏರಿಕೆ
ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಕ್ಕಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಬೆಳಿಗ್ಗೆ ಕಾರ್ಯಾಚರಣೆ ನಡೆಸಿದ ರಕ್ಷಣಾ ಸಿಬ್ಬಂದಿ ಸುಬ್ಬಪ್ಪ ದಿಂಡಿಲಕೊಪ್ಪ ಎಂಬುವವರ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಇನ್ನೂ ಅನೇಕರು ಮೃತಪಟ್ಟಿರುವ ಶಂಕೆ ಇದೆ. ಗುರುವಾರ ಸಂಜೆಯವರೆಗೂ 12 ಮೃತದೇಹಗಳನ್ನು ಹೊರತೆಗೆಯಲಾಗಿತ್ತು. ಬಳಿಕ ಮತ್ತೆರಡು ಶವಗಳು ಪತ್ತೆಯಾಗಿದ್ದವು.
ಬಿರುಕಿದೆ ಎಂದು ಕಟ್ಟಡದೊಳಗೆ ಪಿಲ್ಲರ್ ನಿರ್ಮಿಸಿದ್ದೇ ದುರಂತಕ್ಕೆ ಕಾರಣವಾಯ್ತಾ?
ಅವಶೇಷಗಳಡಿಯಲ್ಲಿ ಪವಾಡ
ಕಟ್ಟಡ ದುರಂತ ಸಂಭವಿಸಿದ ಮೂರು ದಿನಗಳು ಸಂಭವಿಸಿದ್ದರೂ ಅದರ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರು ಬದುಕಿರಬಹುದು ಎಂಬ ನಿರೀಕ್ಷೆ ಇದೆ. ಅದು ಹುಸಿಯಾಗಿಲ್ಲ. ಗುರುವಾರ ಬೆಳಿಗ್ಗೆ ಮೂವರು ಪವಾಡ ಸದೃಶ ರೀತಿಯಲ್ಲಿ ಇನ್ನೂ ಜೀವಂತವಾಗಿರುವುದು ಪತ್ತೆಯಾಗಿದೆ. ಅವಶೇಷಗಳ ಅಡಿ ಸಿಲುಕಿಕೊಂಡಿರುವ ಜಾಗ ಪತ್ತೆ ಮಾಡಲಾಗಿದ್ದು, ಅವರಿಗೆ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ದಿಲೀಪ್, ಸೋಮು ಮತ್ತು ಸಂಗೀತಾ ಎಂಬುವವರು ಕಟ್ಟಡದ ಪಾರ್ಕಿಂಗ್ ಭಾಗದ ಸ್ಥಳದಲ್ಲಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ಸಿಬ್ಬಂದಿಯೊಂದಿಗೆ ದಿಲೀಪ್ ಮಾತನಾಡಿದ್ದು, ತಮ್ಮ ಸ್ಥಿತಿಯ ಬಗ್ಗೆ ಅವರಿಗೆ ಮಾಹಿತಿ ನೀಡುತ್ತಿದ್ದಾರೆ.
ಧಾರವಾಡ ಕಟ್ಟಡ ದುರಂತ : ಅವಶೇಷದಡಿ 12 ಜನರ ಸಾವು-ಬದುಕಿನ ಹೋರಾಟ
'ಎಂಜಿನಿಯರ್ ತಪ್ಪು, ನಮ್ಮದಲ್ಲ'
ನಾವು ತಪ್ಪು ಮಾಡಿಲ್ಲ. ಕಟ್ಟಡ ನಮ್ಮದಷ್ಟೇ. ಕಟ್ಟಡ ನಿರ್ಮಾಣ ಮಾಡುವ ಕಾರ್ಯವನ್ನು ಗುತ್ತಿಗೆಗೆ ನೀಡಲಾಗಿತ್ತು. ಈ ದುರಂತಕ್ಕೆ ಎಂಜಿನಿಯರ್ ಕಾರಣ. ಈ ಘಟನೆಯಿಂದ ಅನೇಕರು ಮೃತಪಟ್ಟಿರುವುದು ತೀವ್ರ ನೋವುಂಟು ಮಾಡಿದೆ. ಹೀಗಾಗಿ ನಾವೇ ಬಂದು ಪೊಲೀಸರಿಗೆ ಶರಣಾಗಿದ್ದೇವೆ. ನಮ್ಮನ್ನು ಯಾರೂ ಬಂಧಿಸಿಲ್ಲ ಎಂದು ಬಸವರಾಜ ನಿಗದಿ ಪೊಲೀಸರಿಗೆ ಶರಣಾಗುವ ಮುನ್ನ ತಿಳಿಸಿದ್ದಾರೆ.
ಕುಮಾರಸ್ವಾಮಿ ಭೇಟಿ, ಪರಿಹಾರ
ದುರಂತ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ ಭೇಟಿ ನೀಡಿ, ಸಂತ್ರಸ್ತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಮೃತರ ಕುಟುಂಬದವರಿಗೆ 2 ಲಕ್ಷ ರೂ ಪರಿಹಾರ ನೀಡಲಾಗುವುದು. ಚಿಕಿತ್ಸೆ ಅಗತ್ಯವಿರುವವರೆಗೆ ಜಿಲ್ಲಾಧಿಕಾರಿಗಳು 1 ಲಕ್ಷ ರೂಪಾಯಿ ಪರಿಹಾರವನ್ನು ತಕ್ಷಣ ನೀಡಲಿದ್ದಾರೆ. ಹೆಚ್ಚಿನ ಪರಿಹಾರ ಘೋಷಿಸುವ ಅಧಿಕಾರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವಹಿಸಲಾಗಿದೆ ಎಂದು ಅವರು ತಿಳಿಸಿದ್ದರು.
|
ಕುಮಾರಸ್ವಾಮಿ ಟ್ವೀಟ್ಮ್ಯಾಜಿಸ್ಟ್ರೇಟ್ ಹಂತದ ತನಿಖೆ
ಧಾರವಾಡ ಕಟ್ಟಡ ಕುಸಿತ ದುರಂತ ಸಂಬಂಧ ಮ್ಯಾಜಿಸ್ಟ್ರೇಟ್ ಹಂತದ ತನಿಖೆ ನಡೆಸಲು ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಇನ್ನೂ ಉನ್ನತ ತನಿಖೆ ನಡೆಸಲೂ ಸಹ ಸಿದ್ಧ. ಧಾರವಾಡದಲ್ಲಿ ಸಂತ್ರಸ್ತರ ಬಂಧುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.