ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರನ ಕಾರು ಅಪಘಾತ: ಇಬ್ಬರು ಸಾವು
ಧಾರವಾಡ, ಏಪ್ರಿಲ್ 12: ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಪ್ರಯಾಣಿಸುತ್ತಿದ್ದ ಕಾರು ಮೂರು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಧಾರವಾಡ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ.
ಬೆಳಗಾವಿ ಕಡೆಯಿಂದ ಬರುತ್ತಿದ್ದ ಧಾರವಾಡದ ಕುಮಾರೇಶ್ವರ ನಗರದ ಕೆವಿಜಿ ಬ್ಯಾಂಕ್ ಬಳಿ ರಸ್ತೆ ಪಕ್ಕದಲ್ಲಿ ನಿಂತಿದ್ದ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ.
ಕಾರು ಡಿಕ್ಕಿ ಹೊಡೆದ ಪರಿಣಾಮ ಚರಣ ನಾಯಕ್ (17) ಹಾಗೂ ಶೇಖರ ಹುದ್ದಾರ (40) ಮೃತಪಟ್ಟಿದ್ದಾರೆ. ಪರಸ್ಪರ ಸಂಬಂಧಿಗಳಾಗಿದ್ದ ಇವರು ದೇವರಹುಬ್ಬಳ್ಳಿ ಮೂಲದವರು.
ಬೆಳಗಾವಿಯಿಂದ ಧಾರವಾಡಕ್ಕೆ ಬರುತ್ತಿದ್ದ ಈ ಕಾರು (ಕೆಎ-25-ಪಿ-007) ವಿಜಯ ಕುಲಕರ್ಣಿ ಅವರಿಗೆ ಸೇರಿದ್ದು ಎನ್ನಲಾಗುತ್ತಿದೆ. ಈ ವೇಳೆ ಚಾಲಕ ಕಾರು ಚಲಾಯಿಸುತ್ತಿದ್ದು, ವಿಜಯ ಕುಲಕರ್ಣಿ ಅವರು ಪಕ್ಕದ ಆಸನದಲ್ಲಿದ್ದರು ಎಂದು ತಿಳಿದುಬಂದಿದೆ.
ಅಪಘಾತ ನಡೆದಾಗ ಕಾರಿನಿಂದ ಕೆಳಗೆ ಇಳಿದ ವಿಜಯ ಕುಲಕರ್ಣಿ ಕೆಲಹೊತ್ತು ಅಲ್ಲಿ ನಿಂತು, ನಂತರ ಹೊರಟು ಹೋಗಿದ್ದಾರೆಂದು ಅಲ್ಲಿನ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ತಕ್ಷಣ ಸ್ಥಳಕ್ಕೆ ಬಂದ ಸಂಚಾರ ಠಾಣೆ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿ ಹಾಗೂ ಆಸ್ಪತ್ರೆ ಮುಂಭಾಗದಲ್ಲಿ ಭಾರೀ ಜನರು ಸೇರಿದ್ದರು.
2019ರಲ್ಲಿ ವಿನಯ ಕುಲಕರ್ಣಿ ಅವರ ಮಾವನಿಗೆ ಸೇರಿದ ಬಹುಮಹಡಿ ಕಟ್ಟಡ ಕುಸಿದ ಕೆಲವೇ ದೂರದ ಅಂತರದಲ್ಲಿ ಈ ಘಟನೆ ನಡೆದಿದೆ.