ಧಾರವಾಡ : 10 ವರ್ಷದಲ್ಲೇ ದಾಖಲೆ ಮಳೆ, 7650 ಕುಟುಂಬ ಸ್ಥಳಾಂತರ
ಧಾರವಾಡ, ಆಗಸ್ಟ್ 09 : ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ಮುಂದುವರೆದಿದೆ. ಜಿಲ್ಲೆಯಲ್ಲಿ ಇದುವರೆಗೆ 3 ಜನರು ಮೃತಪಟ್ಟದ್ದಾರೆ. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗಾಗಿ ಒಟ್ಟು 71 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಆಗಸ್ಟ್ 1 ರಿಂದ 7ರ ತನಕ ವಾಡಿಕೆಯಂತೆ 107.42 ಮಿ.ಮೀಟರ್ ಮಳೆಯಾಗಬೇಕಾಗಿತ್ತು. ಆದರೆ ಈಗ 154.6 ಮಿ.ಮೀಟರ್ ಮಳೆಯಾಗಿದೆ. ಧಾರವಾಡ, ಹುಬ್ಬಳ್ಳಿ ಹಾಗೂ ಕಲಘಟಗಿ ತಾಲೂಕುಗಳಲ್ಲಿ ಅತ್ಯಧಿಕ ಮಳೆಯಾಗಿದೆ.
ಬಾಗಲಕೋಟೆಯಲ್ಲಿ ಪ್ರವಾಹ : 785 ಕುಟುಂಬ ಸ್ಥಳಾಂತರ
ನದಿಗಳು ಉಕ್ಕಿ, ಕೆರೆಗಳ ಕೋಡಿಗಳು ಬಿದ್ದು ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದ್ದು, 7650 ಕುಟುಂಬಗಳಿಗೆ ಸೇರಿದ 27699 ಜನರನ್ನು ಸ್ಥಳಾಂತರ ಮಾಡಲಾಗಿದೆ. ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಎಲ್ಲ ಗ್ರಾಮಗಳ ಕೆರೆ, ಕಟ್ಟೆ ಹಾಗೂ ನಾಲೆಗಳು ತುಂಬಿ ನೀರು ಹೊರಚೆಲ್ಲುತ್ತಿವೆ. ನೀರು ಬರುವ ತಗ್ಗು ಪ್ರದೇಶಗಳಿಗೆ ತೆರಳದಂತೆ ಜಿಲ್ಲಾಡಳಿತ ಜನರಿಗೆ ಮನವಿ ಮಾಡಿದೆ.
10 ವರ್ಷಗಳ ಬಳಿಕ ತುಂಬಿದ ಧಾರವಾಡದ ನೀರಸಾಗರ
ಜಿಲ್ಲೆಯಲ್ಲಿ ಅಂದಾಜು ಮಾಡಲಾಗದಷ್ಟು ಮಳೆ, ನೆರೆ ಬರುತ್ತಿದೆ. ಸುರಕ್ಷತೆ ದೃಷ್ಟಿಯಿಂದ ಆಗಸ್ಟ್ 10 ರ ವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತೊಂದರೆಯಲ್ಲಿ ಸಿಲುಕಬಹುದಾದ ಜನರ ನೆರವಿಗಾಗಿ ಎಲ್ಲ ತಾಲೂಕು, ಪಾಲಿಕೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಲಾಗಿದೆ.
ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ
ರೈಲ್ವೆ ಇಲಾಖೆ ಕೋರಿಕೆಯಂತೆ 500 ಜನರಿಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ ಹಾಗೂ ಅಳ್ನಾವರ ಭಾಗದಲ್ಲಿ ಅತಿಯಾದ ಮಳೆಯಾಗುತ್ತಿರುವುದರಿಂದ ಬೆಂಗಳೂರಿನಿಂದ ಆಗಮಿಸಿರುವ ರೈಲುಗಳು ಬೆಳಗಾವಿ ತಲುಪಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನಿಂದ ಆಗಮಿಸಿದ್ದ ರೈಲು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಿಂತಿದ್ದರಿಂದ ಸುಮಾರು 500 ಪ್ರಯಾಣಿಕರಿಗೆ ಸಾರಿಗೆ ಕಲ್ಪಿಸಲು ರೈಲ್ವೆ ಇಲಾಖೆ ಕೋರಿತ್ತು. ಅದರಂತೆ ಬಸ್ ವ್ಯವಸ್ಥೆ ಮಾಡಲಾಗಿದೆ.
700 ಜನರ ಸ್ಥಳಾಂತರ
ಹುಲಿಕೇರಿಯ ಇಂದಿರಮ್ಮನ ಕೆರೆ ಭರ್ತಿಯಾಗಿ ಉಕ್ಕಿ ಹರಿಯುತ್ತಿರುವುದರಿಂದ ಅಳ್ನಾವರ ಪಟ್ಟಣದ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿದ್ದ 700 ಕ್ಕೂ ಹೆಚ್ಚು ಜನರನ್ನು ಮುಂಜಾಗ್ರತಾ ಕ್ರಮವಾಗಿ ಧಾರವಾಡದ ಮಗದುಮ್ ಕಲ್ಯಾಣ ಮಂಟಪಕ್ಕೆ ಸ್ಥಳಾಂತರಿಸಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಆರೋಗ್ಯ ತಪಾಸಣೆಗೆ ವ್ಯವಸ್ಥೆ
ಅತಿಯಾದ ಮಳೆಯಿಂದಾಗಿ ನೀರು ಸಂಬಂಧಿತ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗೃತಾ ಕ್ರಮವಾಗಿ ಸಂಚಾರಿ ಆರೋಗ್ಯ ತಂಡಗಳನ್ನು ರಚಿಸಲಾಗಿದೆ. ಪ್ರತಿದಿನ ಪರಿಹಾರ ಕೇಂದ್ರಗಳಲ್ಲಿ, ಗ್ರಾಮದ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಿ ಉಚಿತವಾಗಿ ಔಷಧಿಗಳನ್ನು ವಿತರಿಸಲಾಗುತ್ತಿದೆ. ಉತ್ತಮ ಗುಣಮಟ್ಟದ ಔಷಧಗಳ ದಾಸ್ತಾನು ಇದ್ದು, ಅವಶ್ಯವಿದ್ದಲ್ಲಿ ಖಾಸಗಿ ವೈದ್ಯರ ಸೇವೆಯನ್ನು ಸಹ ಬಳಸಿಕೊಳ್ಳಲಾಗುತ್ತದೆ.
ಆಹಾರ ಪೊಟ್ಟಣ, ಬಿಸ್ಕಿಟ್ ವಿತರಣೆಗೆ ಕ್ರಮ
ನೆರೆಯಲ್ಲಿ ಸಿಲುಕಿರುವ ಸಾರ್ವಜನಿಕರ ಆಹಾರ ಪೂರೈಕೆಗೆ ತೊಂದರೆಯಾದರೆ ನಿಭಾಯಿಸಲು ಹೆಲಿಕಾಪ್ಟರ್ ಮೂಲಕ ನೀರು, ಆಹಾರ, ಪೊಟ್ಟಣಗಳನ್ನು ತಲುಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆಎಂಎಫ್ನಿಂದ ಪರಿಹಾರ ಕೇಂದ್ರದಲ್ಲಿನ ಗರ್ಭಿಣಿಯರಿಗೆ, ಮಕ್ಕಳಿಗೆ, ವಯೋವೃದ್ಧರಿಗೆ ಹಾಗೂ ನೆರೆಪೀಡಿತ ಜನರಿಗೆ ಹಾಲು, ಪೌಷ್ಠಿಕ ಆಹಾರ ಮತ್ತು ಬಿಸ್ಕೆಟ್ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.