ಹುಬ್ಬಳ್ಳಿಯಿಂದ ಪರಾರಿಯಾದ ಹುಡುಗಿಯರು ಮೈಸೂರಲ್ಲಿ ಪತ್ತೆ
ಹುಬ್ಬಳ್ಳಿ,ಮಾರ್ಚ್,19: ಮನೆಯಲ್ಲಿ ಶಾಲೆಗೆ ಹೋಗುವುದಾಗಿ ಹೇಳಿ ಹೊರಟ ರೈಲ್ವೆ ಸ್ಕೂಲಿನ ಐವರು ವಿದ್ಯಾರ್ಥಿನಿಯರು ಶಾಲೆಗೆ ಹೋಗದೆ ಮೈಸೂರಿಗೆ ತೆರಳಿ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಎಲ್ಲರಿಗೂ ಆಶ್ಚರ್ಯ ತಂದಿದೆ.
ಸ್ಥಳೀಯ ಕೇಶ್ವಾಪುರ ಸಿಮೆಂಟ್ ಚಾಳ್ ಮತ್ತು ಮಂಟೂರು ರೋಡ್ ನಿವಾಸಿಗಳಾದ ಐವರು ವಿದ್ಯಾರ್ಥಿನಿಯರು 6ನೇ ತರಗತಿಯಲ್ಲಿ ಓದುತ್ತಿದ್ದಾರೆ. ಮೈಸೂರಿನಲ್ಲಿ ಪೊಲೀಸರ ಕೈಗೆ ಸಿಕ್ಕ ವಿದ್ಯಾರ್ಥಿನಿಯರು ಮೋಜಿಗೆಂದು ಮೈಸೂರಿಗೆ ಬಂದಿರುವುದಾಗಿ ಹೇಳಿದ್ದಾರೆ.[ಮೊಬೈಲ್ ಪ್ರೇಮ, ಬೆಂಗಳೂರು ಯುವತಿ ಅಪಹರಣ, ರಕ್ಷಣೆ]
ಘಟನೆಯ ವಿವರ:
ಶುಕ್ರವಾರ ಮನೆಯಲ್ಲಿ ಶಾಲೆಗೆ ಹೋಗುವುದಾಗಿ ತೆರಳಿದ್ದ ವಿದ್ಯಾರ್ಥಿನಿಯರು ಸಂಜೆಯವರೆಗೂ ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ವಿದ್ಯಾರ್ಥಿನಿಯರ ಪೋಷಕರು ಶಾಲೆಗೆ ದೌಡಾಯಿಸಿದ್ದಾರೆ. ಆದರೆ ಶಾಲೆಯ ಹಾಜರಾತಿಯಲ್ಲಿ ಗೈರು ಹಾಜರಾಗಿರುವುದು ತಿಳಿದು ಬಂದಿದೆ. ಇದರಿಂದ ಕಂಗೆಟ್ಟ ಪಾಲಕರು ಕೇಶ್ವಾಪುರ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕೂಡಲೇ ಎಚ್ಚೆತ್ತ ಕೇಶ್ವಾಪುರ ಪೊಲೀಸರು, ವಿದ್ಯಾರ್ಥಿನಿಯರಲ್ಲಿ ಒಬ್ಬಳ ಬಳಿ ಮೊಬೈಲ್ ಫೋನ್ ಇರುವುದು ಗೊತ್ತಾಗಿ ಅವಳ ಮೊಬೈಲ್ ಗೆ ಕರೆ ಮಾಡಿದ್ದಾರೆ. ಆದರೆ ಮೊಬೈಲ್ ಸ್ವಿಚ್ ಆಫ್ ಆಗಿದೆ. ನಂತರ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾರಂಭಿಸಿದ್ದಾರೆ. ಆಗ ರೈಲ್ವೆ ನಿಲ್ದಾಣದ ಸಿಸಿಟಿವಿಯಲ್ಲಿ ವಿದ್ಯಾರ್ಥಿನಿಯರು ಶುಕ್ರವಾರ ಬೆಳಗ್ಗೆ ಶರಾವತಿ ಎಕ್ಸ್ಪ್ರೆಸ್ ರೈಲು ಹತ್ತಿರುವುದು ಕಂಡಿದೆ.[ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ನೀಡಿದ ಸಲಹೆ ಏನು?]
ಇದರಿಂದ ಜಾಗೃತಗೊಂಡ ಪೊಲೀಸರು ಕೂಡಲೇ ಎಲ್ಲ ಠಾಣೆಗಳಿಗೆ ಕಾಣೆಯಾದ ವಿದ್ಯಾರ್ಥಿನಿಯರ ವಿಷಯವನ್ನು ರವಾನಿಸಿದ್ದಾರೆ. ಒಮ್ಮೆ ಮೊಬೈಲ್ ಟವರ್ ಲೊಕೇಶನ್ ಪರಿಶೀಲಿಸಿದಾಗ ಹಾಸನ ಬಳಿಯ ಟವರ್ ತೋರಿಸಿದೆ.
ವಿದ್ಯಾರ್ಥಿನಿಯರು ಮೈಸೂರು ಕಡೆಗೆ ಪ್ರಯಾಣ ಬೆಳೆಸಿದ ವಿಷಯವನ್ನು ಖಚಿತಪಡಿಸಿಕೊಂಡ ಪೊಲೀಸರು ಅಲ್ಲಿನ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಮೈಸೂರು ರೈಲ್ವೆ ನಿಲ್ದಾಣದಲ್ಲಿ ವಿದ್ಯಾರ್ಥಿನಿಯರನ್ನು ಗುರುತಿಸಿದ ಪೊಲೀಸರು ಹುಬ್ಬಳ್ಳಿ ಪೊಲೀಸರಿಗೆ ವಿದ್ಯಾರ್ಥಿನಿಯರು ಸಿಕ್ಕ ವಿಷಯ ತಿಳಿಸಿದ್ದಾರೆ.[ಪುಣೆ ವಿದ್ಯಾರ್ಥಿಗಳ ಜೀವಕ್ಕೆ ಕುತ್ತು ತಂದ ಕಾಲೇಜು ಪ್ರವಾಸ]
ಮೈಸೂರು ನಗರದಿಂದ ಶನಿವಾರ ವಿದ್ಯಾರ್ಥಿನಿಯರು ಕರೆತರುವ ನಿರೀಕ್ಷೆಯಿದೆ. ಪಾಲಕರು ಮತ್ತು ಪೊಲೀಸರು ವಿದ್ಯಾರ್ಥಿನಿಯರನ್ನು ಕರೆತಲು ತೆರಳಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಪ್ರಭಾಕರ ರಾಣೆ ಅವರಿಗೆ ಕರೆ ಮಾಡಿದರೆ ಅವರು ಕರೆ ಸ್ವಿಕರಿಸಲಿಲ್ಲ.