ಶಾಲಾ ಪ್ರವಾಸ ವಾಹನಕ್ಕೆ ಬೆಂಕಿ: ಸಮಯಪ್ರಜ್ಞೆ ಮೆರೆದ ಪೊಲೀಸರು
ಧಾರವಾಡ, ಡಿಸೆಂಬರ್ 26 : ಶಾಲಾ ಪ್ರವಾಸಕ್ಕೆ ಹೊರಟಿದ್ದ ಖಾಸಗಿ ವಾಹನದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಧಾರವಾಡ ಟ್ರಾಫಿಕ್ ಪೊಲೀಸರು ಸಮಯಪ್ರಜ್ಞೆ ಮೆರೆದು ಶಾಲಾ ಮಕ್ಕಳನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ಮುಂಜಾನೆ 12ರ ಸುಮಾರಿಗೆ ನಗರದ ಎನ್.ಟಿ.ಎಫ್ ಮಾರ್ಗವಾಗಿ ಮೈಸೂರಿನತ್ತ ಹೊರಟಿದ್ದ ಚಿತ್ರದುರ್ಗದ ಜೆ.ಎಂ.ಜೆ ಟೂರ್ಸ್ ಆಂಡ್ ಟ್ರಾವೆಲ್ ನ ಹಿಂದಿನ ಕ್ಯಾರಿಯರನಲ್ಲಿನ ಬೆಂಕಿ ಹೊತ್ತಿಕೊಂಡು ಸಣ್ಣಗೆ ಹೊಗೆ ಬರುತ್ತಿರುವುದನ್ನು ಗಮನಿಸಿದ ಪೊಲೀಸರು ವಾಹನವನ್ನು ತಡೆಗಟ್ಟಿ ಶಾಲಾ ಮಕ್ಕಳನ್ನು ಕೆಳಗಿಳಿಸಿ ವಾಹನದಲ್ಲಿನ ಬೆಂಕಿ ನಂದಿಸಿದ್ದಾರೆ.
ಮುದೋಳ ತಾಲೂಕಿನ ಲೋಕಾಪುರದ ಆದರ್ಶ ಇಂಗ್ಲಿಷ್ ಮೀಡಿಯಮ್ ಶಾಲಾ ಮಕ್ಕಳನ್ನು ಮೂರು ದಿನದ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದರಿಂದ ಊಟ ಉಪಹಾರ ತಯಾರಿಸಿಕೊಳ್ಳಲು ಎರಡು ಸಿಲಿಂಡರ್ಗಳು ಸೇರಿದಂತೆ ಇತರೆ ಎಲ್ಲ ವಸ್ತುಗಳನ್ನು ಹಿಂದಿನ ಕ್ಯಾರಿಯರ್ ನಲ್ಲಿ ಇಡಲಾಗಿತ್ತು.
ಸಿಲಿಂಡರ್ ಪಕ್ಕದಲ್ಲಿ ಹಾದಿದ್ದ ಇಂಡಿಕೇಟರ್ ಲೈಟಿನ ವಾಯರಗಳ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದ್ದು ಯಾವ ಕ್ಷಣದಲ್ಲಾದರೂ ಸಿಲಿಂಡರಗಳು ಸ್ಪೋಟಗೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಪೊಲೀಸರ ಸಮಯಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದೆ.
ಬೆಂಕಿ ಕಾಣಿಸಿಕೊಂಡ ವಾಹನ ತಡೆದು ಪರಿಶೀಲನೆ ನಡೆಸಿದ ಪಿ.ಎಸ್.ಐ ಎನ್ .ತಳವಾರ, ಹೆಡ್ ಕಾನ್ಸ್ ಟೆಬಲ್ ಮಂಜುನಾಥ ಗದ್ದನಕೇರಿ, ಲಕ್ಷ್ಮಣ ಲಮಾಣಿ, ನಾಗರಾಜ ಪತ್ತೇಪೂರ ಅವರು. ಬೆಂಕಿ ಕಾಣಿಸಿಕೊಂಡ ವಾಹನದಲ್ಲಿ ಮಕ್ಕಳ ಪ್ರವಾಸ ಮುಂದುವರೆಸುವುದು ಬೇಡ. ಪ್ರವಾಸಕ್ಕೆ ಬೇರೆ ವಾಹನ ವ್ಯವಸ್ಥೆಮಾಡಿಕೊಂಡು ಹೋಗಿ ಎಂದು ಶಾಲಾ ಶಿಕ್ಷಕರಿಗೆ ತಿಳಿಸಿದರಾದರೂ ಶಿಕ್ಷಕರು ಜಾಗರೂಕತೆಯಿಂದ ಮಕ್ಕಳನ್ನು ಕರೆದುಕೊಂಡು ಪ್ರವಾಸ ಮಾಡುವುದಾಗಿ ಮುಚ್ಚಳಿಕೆ ಬರೆದುಕೊಟ್ಟು ಪ್ರವಾಸ ಮುಂದುವರೆಸಿದರು.