ತಹಶೀಲ್ದಾರ್ ಕಚೇರಿ ಬಳಿ ಹೈಕೋರ್ಟ್ ವಕೀಲನ ಕೊಲೆಗೆ ಯತ್ನ
ಧಾರವಾಡ, ಫೆಬ್ರವರಿ 05 : ಹೈಕೋರ್ಟ್ ವಕೀಲ ಬಿ.ಐ. ದೊಡ್ಡಮನಿ ಎಂಬುವರ ಮೇಲೆ ದುಷ್ಕರ್ಮಿಗಳು ಮಚ್ಚು ಲಾಂಗ್ಗಳಿಂದ ಹೊಡೆದು ಕೊಲೆಗೆ ಯತ್ನಿಸಿರುವ ಘಟನೆ ಧಾರವಾಡದ ತಹಸೀಲ್ದಾರ್ ಕಚೇರಿ ಬಳಿ ನಡೆದಿದೆ.
ಹಲ್ಲೆಗೊಳಗಾದ ಕೂಡಲೇ ಆಸ್ಪತ್ರೆಗೂ ತೆರಳದೆ ರಕ್ತಮಡುವಿನಲ್ಲಿ ಪೊಲೀಸರಿಗೆ ದೂರು ನೀಡಲು ಪೊಲೀಸ್ ಠಾಣೆಗೆ ದೊಡ್ಡ ಮನವಿ ದೌಡಾಯಿಸಿದ್ದರು. ಕೂಡಲೇ ಕಾರ್ಯಪ್ರವತ್ತರಾದ ಪೊಲೀಸರು ದೊಡ್ಡಮನಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಎಸ್ ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಡ್ಡ ಮನಿಯವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದು, ಘಟನಾ ಸ್ಥಳಕ್ಕೆ ಧಾರವಾಡದ ಎಸಿಪಿ ಎಂ.ಎನ್. ರುದ್ರಪ್ಪ, ವಿದ್ಯಾಗಿರಿ ಪೊಲೀಸ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಮಹಾಂತೇಶ ಹೊಸಪೇಟ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ತಹಸೀಲ್ದಾರ್ ಕಚೇರಿಯ ಎದುರಿನ ವಕೀಲರ ಕಚೇರಿಯೊಳಗಡೆ ನುಗ್ಗಿ ಹಲ್ಲೆ ಮಾಡಿರುವುದಕ್ಕೆ ಇಡೀ ವಕೀಲ ಸಮುದಾಯ ಬೆಚ್ಚಿಬಿದ್ದಿದೆ. ಅನೇಕ ಯುವ ವಕೀಲರು ಘಟನಾ ಸ್ಥಳಕ್ಕೆ ದೌಡಾಯಿಸಿ ವಸ್ತು ಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ.