ಸಂಬಳದಲ್ಲಿ ಮಾಸ್ಕ್ ಹಂಚಿ ಕೊರೊನಾ ಜಾಗೃತಿಗೆ ಮುಂದಾದ ಧಾರವಾಡದ ಯುವ ವೈದ್ಯ
ಧಾರವಾಡ, ನವೆಂಬರ್ 16: ಜನರಿಗೆ ಉಚಿತವಾಗಿ ಮಾಸ್ಕ್ ವಿತರಿಸುವ ಮೂಲಕ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ ಧಾರವಾಡದ ಯುವ ವೈದ್ಯ.
ಧಾರವಾಡದ ಕಮಲಾಪುರ ನಿವಾಸಿಯಾಗಿರುವ ಡಾ. ಮಯೂರೇಶ್ ಲೋಹಾರ್, ಕೊರೊನಾ ಸೋಂಕಿನ ಕುರಿತ ಜಾಗೃತಿಗೆ ಈ ಭಿನ್ನ ನಡೆ ಇಟ್ಟಿರುವವರು. ಇದೇ ಜುಲೈ ತಿಂಗಳಿನಲ್ಲಿ ಎಂಬಿಬಿಎಸ್ ಮುಗಿಸಿದ ಮಯೂರೇಶ್, ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಆಸ್ಪತ್ರೆಗೆ ಕೆಲಸಕ್ಕೆ ಹಾಜರಾದರು. ಅದಾಗಲೇ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದರಿಂದ ಮಯೂರೇಶ್ ಅವರನ್ನು ಕೂಡಲೇ ಕೋವಿಡ್ ವಾರ್ಡ್ ಗೆ ನಿಯೋಜಿಸಲಾಯಿತು.
ವಿದೇಶಗಳಲ್ಲಿ ವ್ಯಾಸಂಗ ಮಾಡಿ, ಭಾರತಕ್ಕೆ ಹಿಂದಿರುಗಿ ಸೇವೆ ಸಲ್ಲಿಸಿ: ಸಚಿವ ಸುಧಾಕರ್ ಮನವಿ
ಅಂದಿನಿಂದ ಮೂರು ತಿಂಗಳುಗಳ ಕಾಲ ಮಯೂರೇಶ್ ಒಂದು ದಿನ ರಜೆಯನ್ನು ತೆಗೆದುಕೊಳ್ಳದೇ ಕೆಲಸ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೇ, ತಮ್ಮ ವೇತನದಿಂದ ಒಂದು ಲಕ್ಷ ಐವತ್ತು ಸಾವಿರ ರೂಪಾಯಿ ಖರ್ಚು ಮಾಡಿ ಜನರಿಗೆ ಉಚಿತವಾಗಿ ಮಾಸ್ಕ್ ವಿತರಿಸುತ್ತಿದ್ದಾರೆ.
ತಮ್ಮ ಸ್ನೇಹಿತರ ಜೊತೆ ಸೇರಿ ಧಾರವಾಡದ ಮಾರುಕಟ್ಟೆ, ಬಸ್ ನಿಲ್ದಾಣ, ಶಿಕ್ಷಣ ಸಂಸ್ಥೆ, ಸರ್ಕಾರಿ ಕಚೇರಿಗಳಿಗೆ ತೆರಳಿ ಮಾಸ್ಕ್ ವಿತರಣೆ ಮಾಡಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಸುಮಾರು ಹತ್ತು ಸಾವಿರ ಮಾಸ್ಕ್ ಗಳನ್ನು ತಮ್ಮ ಖರ್ಚಿನಿಂದಲೇ ಉಚಿತವಾಗಿ ನೀಡಿದ್ದಾರೆ. 5,000 ಎನ್ 95 ಹಾಗೂ 5,000 ಥ್ರೀ ಲೇಯರ್ ಮಾಸ್ಕ್ ಗಳನ್ನು ಹಂಚಿದ್ದು, ಬಿಒ ಕಚೇರಿಗೆ 1000, ಪೊಲೀಸ್ ಇಲಾಖೆಗೆ 500 ಮಾಸ್ಕ್ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಡಾ. ಮಯೂರೇಶ್, ಭಾರತವನ್ನು ಕೊರೊನಾದಿಂದ ಮುಕ್ತಗೊಳಿಸಲೇಕು. ಆದರೆ ಕೆಲವರಿಗೆ ಅನಿವಾರ್ಯ ಕಾರಣದಿಂದ ಮಾಸ್ಕ್ ಕೊಳ್ಳಲು ಸಾಧ್ಯವಾಗಿರುವುದಿಲ್ಲ. ಅಂಥವರಿಗೆ ಉಚಿತವಾಗಿ ಮಾಸ್ಕ್ ನೀಡುವ ಮೂಲಕ ಕೊರೊನಾ ಜಾಗೃತಿ ಮೂಡಿಸಲು ಮುಂದಾಗಿದ್ದೇವೆ. ನನ್ನ ಸ್ನೇಹಿತರೂ ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ ಎಂದು ಹೇಳಿದ್ದಾರೆ.