ಡಿಕೆ ಶಿವಕುಮಾರ್ ಜೈಲಿನಲ್ಲಿದ್ದು ವಿಚಾರಣೆ ಎದುರಿಸಲಿ: ಎಸ್ಆರ್ ಹಿರೇಮಠ್
ಧಾರವಾಡ, ಸೆಪ್ಟೆಂಬರ್ 4: ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್ ಅವರ ವಿರುದ್ಧದ ಜಾರಿ ನಿರ್ದೇಶನಾಲಯದ ಕ್ರಮವನ್ನು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ ಸ್ವಾಗತಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಡಿ.ಕೆ. ಶಿವಕುಮಾರ್ ಅವರ ಈ ಪ್ರಕರಣವನ್ನು ಸಿಬಿಐ ಕೂಡ ತನಿಖೆ ನಡೆಸಬೇಕು. ಅದಕ್ಕೆ ತಾರ್ಕಿಕ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ಸಮಗ್ರ ತನಖೆಯಾಗಬೇಕು ಎಂದು ಆಗ್ರಹಿಸಿದರು.
ಡಿ.ಕೆ .ಶಿವಕುಮಾರ್ಗೆ ಜಾಮೀನಿಲ್ಲ, ಸೆ.13 ರವರೆಗೆ ಇಡಿ ವಶಕ್ಕೆ
'ಡಿಕೆ ಶಿವಕುಮಾರ್ ವಿರುದ್ಧ ಆದಾಯಕ್ಕೆ ಸರಿಯಾಗಿ ತೆರಿಗೆ ಪಾವತಿಸದ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಹಾಗೂ ಕಾನೂನು ಬಾಹಿರವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯಗಳು ತನಿಖೆ ನಡೆಸಿವೆ. ಇದನ್ನು ನಮ್ಮ ಸಂಸ್ಥೆ ಸ್ವಾಗತಿಸುತ್ತದೆ. ಆದರೆ, ಇದು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ. ಈ ಬಗ್ಗೆ ಕೂಡ ತನಿಖೆಯಾಗಬೇಕು. ಇದಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ದಾಖಲೆಗಳನ್ನು ನೀಡಲು ನಾನು ಸಿದ್ಧ' ಎಂದು ತಿಳಿಸಿದರು.
'ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಿಂದಲೂ ಡಿಕೆ ಶಿವಕುಮಾರ್ ಅವರ ಭ್ರಷ್ಟಾಚಾರದ ಕುರಿತು ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸುತ್ತಲೇ ಇದ್ದೇವೆ. ಕೊನೆಗೂ ನಮ್ಮ ಜೀವಿತಾವಧಿಯಲ್ಲಿ ಅವರ ಬಂಧನ ನೋಡುವಂತಾಗಿದೆ. ಪ್ರಮಾಣಿಕ ಅಧಿಕಾರಿಗಳಿಂದ ಅದು ಸಾಧ್ಯವಾಗಿದೆ' ಎಂದು ಹೇಳಿದರು.
ಇಡಿ ವಶದಲ್ಲಿರುವ ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡಿದ್ದಾರೆ ವಿಡಿಯೋ
'10.8 ಲಕ್ಷ ಟನ್ ಉತ್ಕೃಷ್ಟ ಗುಣಮಟ್ಟದ ಅದಿರನ್ನು ಅಕ್ರಮವಾಗಿ ರಫ್ತು ಮಾಡುವ ಮೂಲಕ ಮೈಸೂರು ಮಿನರಲ್ಸ್ಗೆ ಅವರು ನಷ್ಟ ಉಂಟುಮಾಡಿದ್ದಾರೆ. 3 ಲಕ್ಷ ಕೋಟಿ ಮೊತ್ತದ ಗೃಹ ನಿರ್ಮಾಣದ ಹಗರಣದಲ್ಲಿ ಅವರ ಹೆಸರಿದೆ. ಬೆನ್ನಿಗಾನಹಳ್ಳಿಯಲ್ಲಿ 4.20 ಎಕರೆ ಭೂಮಿಯನ್ನು ಡಿನೋಟಿಫೈ ಮಾಡುವಲ್ಲಿ ಬಿಎಸ್ ಯಡಿಯೂರಪ್ಪ ಅವರು ಡಿಕೆ ಶಿವಕುಮಾರ್ ಅವರಿಗೆ ನೆರವು ನೀಡಿದ್ದಾರೆ' ಎಂದರು.
'ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರದ ವಿರುದ್ಧ ದಿಟ್ಟ ಹೆಜ್ಜೆ ಇರಿಸಿದ್ದೇ ಆಗಿದ್ದರೆ, ಬಿಎಸ್ ಯಡಿಯೂರಪ್ಪ ಮತ್ತು ಗಾಲಿ ಜನಾರ್ದನ ರೆಡ್ಡಿ ಅವರಂತಹ ಸ್ವಪಕ್ಷದವರ ವಿರುದ್ಧವೂ ತನಿಖೆ ನಡೆಸಿ ಜೈಲಿಗೆ ಹಾಕಲಿ' ಎಂದು ಸವಾಲು ಹಾಕಿದರು.
ಡಿಕೆ.ಶಿವಕುಮಾರ್ಗೆ ಬೆಂಬಲಕ್ಕೆ ಬಂದ ಕಾಂಗ್ರೆಸ್ ಮುಖ್ಯ ವ್ಯಕ್ತಿ
'ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಸಹೋದರರು ಹಾಗೂ ಅವರ ಕುಟುಂಬದ ಇತರೆ ಸದಸ್ಯರು ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ. ಕನಕಪುರದ ಅನೇಕ ಗುಡ್ಡಗಳನ್ನು ಕರಗಿಸಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಹಣ ಸಂಪಾದಿಸಿದ್ದಾರೆ. ಗಾಲಿ ಜನಾರ್ದನ ರೆಡ್ಡಿ ಮೂರು ವರ್ಷ ಜೈಲಿನಲ್ಲಿದ್ದಂತೆ ಡಿಕೆ ಶಿವಕುಮಾರ್ ಕೂಡ ಜೈಲಿನಲ್ಲಿದ್ದು ತನಿಖೆ ಎದುರಿಸಬೇಕು' ಎಂದರು.