'ಡಿಕೆಶಿ ಬಾಯಲ್ಲೂ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಬರಬಹುದು'; ಶೆಟ್ಟರ್ ಕಿಡಿ
ಧಾರವಾಡ, ಫೆಬ್ರವರಿ 22; ಬೆಂಗಳೂರಿನಲ್ಲಿ ಕಳೆದ ಗುರುವಾರ ಅಮೂಲ್ಯ ಲಿಯೋನಾ ಎನ್ನುವಳು 'ಪಾಕ್ ಜಿಂದಾಬಾದ್' ಎಂದು ಕೂಗಿರುವುದು ರಾಜ್ಯದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ಈ ಕುರಿತು ಧಾರವಾಡದಲ್ಲಿ ಮಾತನಾಡಿರುವ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು, ಪಾಕ್ ಜಿಂದಾಬಾದ್ ಎಂದು ಕೂಗುವವರ ಹಿಂದೆ ಇರುವವರು ಕಾಂಗ್ರೆಸ್ನವರು ಎಂದು ನೇರವಾಗಿ ಕಾಂಗ್ರೆಸ್ ಮುಖಂಡರ ಕಡೆಗೆ ಬೊಟ್ಟು ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಬೆಂಬಲದಿಂದಾಗಿಯೇ ಹೆಚ್ಚಿನ ರೀತಿಯ ಚಟುವಟಿಕೆಗೆ ಇಂಬು ಕೊಟ್ಟಂತಾಗಿದೆ ಎಂದು ಆರೋಪಿಸಿದ್ದಾರೆ.
'ಪಾಕಿಸ್ತಾನ್ ಜಿಂದಾಬಾದ್' ಎಂದವಳಿಗೆ ವೇದಿಕೆಯಲ್ಲೇ ಓವೈಸಿ ಪ್ರತಿಕ್ರಿಯೆ ಏನು?
ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡಿರುವ ಜಗದೀಶ್ ಶೆಟ್ಟರ್ ಅವರು, ಮುಂದೊಂದು ದಿನ ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ್ ಬಾಯಿಯಿಂದಲೂ ಪಾಕ್ ಜಿಂದಾಬಾದ್ ಘೋಷಣೆ ಹೊರ ಬರಬಹುದು ಎಂದು ವಿವಾದದ ಕಿಡಿ ಹೊತ್ತಿಸಿದ್ದಾರೆ.
ಡಿಕೆಶಿ ಪ್ರೋತ್ಸಾಹ ಕೊಡುತ್ತಿದ್ದಾರೆ
'ಪಾಕಿಸ್ತಾನ ಜಿಂದಾಬಾದ್ ಎನ್ನುವವರಿಗೆ ಡಿಕೆಶಿ ಪ್ರೋತ್ಸಾಹ ಕೋಡುವುದು ಖಂಡನಾರ್ಹ. ಇವತ್ತು ಹುಡುಗಿ ಬಾಯಲ್ಲಿ ಪಾಕಿಸ್ತಾನ ಬಂದಿದೆ, ಮುಂದೊಂದು ದಿನ ಡಿಕೆಶಿ ಬಾಯಲ್ಲಿ ಪಾಕಿಸ್ತಾನದ ಜಿಂದಾಬಾದ್ ಬಂದರೆ ಅಚ್ಚರಿ ಪಡಬೇಕಿಲ್ಲ' ಎಂದು ಡಿಕೆಶಿ ವಿರುದ್ದ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.
ಡಿಕೆಶಿ ಏನು ಹೇಳಿದ್ದರು
'ಅಮೂಲ್ಯ ಲಿಯೋನ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದ ಡಿ ಕೆ ಶಿವಕುಮಾರ್ ಅವರು, ಅಮೂಲ್ಯ ಪಾಕ್ ಪರ ಹೇಳಿಕೆ ಬಗ್ಗೆ ನಾನೇನೂ ಮಾತನಾಡುವುದಿಲ್ಲ. ಆದರೆ, ಏಕೆ ಏನು ಹೇಳಲು ಹೊರಟಿದ್ದಳು ಎಂಬುದಕ್ಕೆ ಅವಕಾಶ ಕೊಡಬೇಕಿತ್ತು' ಎಂದು ಹೇಳಿದ್ದರು. ಈ ಹೇಳಿಕೆಗೆ ಧಾರವಾಡದಲ್ಲಿ ಶೆಟ್ಟರ್ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.
ದೇಶದ ರಕ್ಷಣೆಗೆ ಕಾಂಗ್ರೆಸ್ ಬೆಂಬಲಿಸಬೇಕು
'ಕಾಂಗ್ರೆಸ್ನವರು ಸಿಎಎ ಬಗ್ಗೆ ಮುಸಲ್ಮಾನರಲ್ಲಿ ಭಯ ಹುಟ್ಟಿಸುವ ಕೆಸಲ ಮಾಡುತ್ತಿದ್ದಾರೆ. ದೇಶದ ಸುರಕ್ಷತೆ, ದೇಶದ ರಕ್ಷಣೆಗೆ ಕಾಂಗ್ರೆಸ್ ಬೆಂಬಲಿಸಬೇಕು. ಕಾಂಗ್ರೆಸ್ ಸರ್ಕಾರ ಇದ್ದಾಗ ಅಕ್ರಮವಾಗಿ ಬಹಳ ಜನ ದೇಶದೊಳಗೆ ನುಸುಳಿದ್ದಾರೆ. ಬೆಂಗಳೂರಿನಲ್ಲಿ ಲಕ್ಷಾಂತರ ಜನ ಬಾಂಗ್ಲಾದವರಿದ್ದಾರೆ, ಅಂತಹವರನ್ನು ಮೋದಿ ಸರ್ಕಾರ ಹೊರ ಹಾಕುವ ಕೆಲಸ ಮಾಡುತ್ತಿದೆ' ಎಂದು ಶೆಟ್ಟರ್ ಪಾಕ್ ಪರ ಘೋಷಣೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಗದ ಸಚಿವ ಸ್ಥಾನ; ಶೆಟ್ಟರ್ ನಿವಾಸದಲ್ಲಿ ಸಭೆ ನಡೆಸಿದ ಶಾಸಕರಾರು?
ಸಂಘಟಕರ ವಿಚಾರಣೆ
ಕಳೆದ ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಅಮೂಲ್ಯ ಲಿಯೋನಾ ಎನ್ನುವರಳು ದೇಶ ವಿರೋಧಿ ಘೋಷಣೆ ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾವೇಶದ ಆಯೋಜಕರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ ಅವರನ್ನು ಪಶ್ಚಿಮ ವಿಭಾಗ ಪೊಲೀಸರು ಶನಿವಾರ ಮಧ್ಯಾಹ್ನ ವಿಚಾರಣೆ ನಡೆಸಿದ್ದಾರೆ.