ಧಾರವಾಡ: ಸಾಲ ತೀರಿಸದ್ದಕ್ಕೆ ಒಂದು ತಿಂಗಳ ಮಗು ಮಾರಾಟ; 6 ಜನರ ಬಂಧನ
ಧಾರವಾಡ, ಮಾರ್ಚ್ 7: ಸಾಲ ತೀರಿಸದ ದಂಪತಿಯನ್ನು ಅಕ್ರಮ ಬಂಧನದಲ್ಲಿಟ್ಟು ಮೀಟರ್ ಬಡ್ಡಿ ಕುಳಗಳು, ದಂಪತಿಯ ಒಂದು ತಿಂಗಳ ಗಂಡು ಮಗುವನ್ನು 2.50 ಲಕ್ಷ ರೂ.ಗೆ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿ, ಮಗು ರಕ್ಷಿಸಿದ್ದಾರೆ.
ಮೀಟರ್ ಬಡ್ಡಿ ನೀಡುವ ಜೊತೆಗೆ ಹಲ್ಲೆ ಮಾಡಿದ ಆರೋಪದಡಿ ಧಾರವಾಡದ ಭಾರತಿ ಮಂಜುನಾಥ ವಾಲ್ಮೀಕಿ, ರಮೇಶ್ ಮಂಜುನಾಥ ವಾಲ್ಮೀಕಿ, ರವಿ ಭೀಮಸೇನ ಹೆಗಡೆ, ವಿನಾಯಕ ಅರ್ಜುನ ಮಾದರ ಹಾಗೂ ಮಗುವನ್ನು ಖರೀದಿಸಿದ ಆರೋಪದಡಿ ಉಡುಪಿಯ ವಿಜಯ ನೆಗಳೂರ ಮತ್ತು ಚಿತ್ರಾ ನೆಗಳೂರ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಮೀಟರ್ ಬಡ್ಡಿ ದಂಧೆ ಮಾಡುವ ನಾಲ್ವರು ಆರೋಪಿಗಳು ಧಾರವಾಡದ ದಂಪತಿಗೆ ಬಡ್ಡಿ ಸಾಲ ನೀಡಿದ್ದರು. ಆ ಸಾಲ ಮರಳಿಸುವಂತೆ ಪೀಡಿಸಿದ ಆರೋಪಿಗಳು, ಸಾಲ ಪಡೆದ ದಂಪತಿಯನ್ನು ಅಕ್ರಮ ಬಂಧನದಲ್ಲಿ ಇಟ್ಟಿದ್ದರು.
ಹಣ ಕೊಡಿ ಇಲ್ಲವೇ ಮಗು ಮಾರಾಟ ಮಾಡಿ ಎಂದು ಬೆದರಿಕೆ ಹಾಕಿದ್ದರು. ಒತ್ತಡ ತಂದು ನಮ್ಮ ಮಗುವನ್ನು ಉಡುಪಿಯ ವಿಜಯ ಹಾಗೂ ಚಿತ್ರಾ ದಂಪತಿಗೆ ಮಾರಾಟ ಮಾಡಿದ್ದಾರೆ. ಹೀಗಾಗಿ ತಮ್ಮ ಮಗುವನ್ನು ವಾಪಸ್ ಕೊಡಿಸಿ ಎಂದು ದಂಪತಿ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಡಿಸಿಪಿ ರಾಮರಾಜನ್, ಆರ್.ಬಿ ಬಸರಗಿ, ಎಸಿಪಿ ಜಿ.ಅನುಷಾ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಎಂ.ಕೆ ಬಸಾಪೂರ, ಪಿಎಸ್ಐ ಎಸ್.ಆರ್ ತೇಗೂರ ಹಾಗೂ ಸಿಬ್ಬಂದಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
ಮಾರಾಟವಾಗಿದ್ದ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದ್ದು, ಅಧಿಕಾರಿಗಳ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.