ಧಾರವಾಡದಲ್ಲಿ ಸೆರೆಸಿಕ್ಕರು ಅನ್ನಭಾಗ್ಯಕ್ಕೆ ಕನ್ನಹಾಕಿದ್ದ ಖದೀಮರು
ಧಾರವಾಡ, ಅಕ್ಟೋಬರ್ 27: ಸರ್ಕಾರ ಬಡವರಿಗಾಗಿ ಉಚಿತವಾಗಿ ಅಕ್ಕಿ ಬೇಳೆ ಎಣ್ಣೆ ನೀಡುತ್ತಿದೆ. ಆದರೆ ಸರ್ಕಾರ ನೀಡುವ ಅಕ್ಕಿ ಬೇಳೆಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿಕೊಂಡು ಬಡವರ ಅನ್ನವನ್ನು ಕಿತ್ತು ತಿನ್ನುವ ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬರುತ್ತಿವೆ.
ಕಳೆದ ಒಂದು ವಾರದಲ್ಲಿ ಧಾರವಾಡ ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣ ಬೆಳಕಿಗೆ ಬಂದಿರುವುದು ಇದು ಎರಡನೇ ಬಾರಿ. ಲಕ್ಷಾಂತರ ರೂಪಾಯಿ ಮೌಲ್ಯದ ಅನ್ನ ಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮೂವರನ್ನು ಧಾರವಾಡ ಜಿಲ್ಲಯ ನವಲಗುಂದ ಪೊಲೀಸರು ಬಂಧಿಸಿದ್ದಾರೆ. ಶಿವಾನಂದ ಸಾಳುಂಕೆ, ಕೃಷ್ಣಮೂರ್ತಿ ಹೆಬಸೂರ ಮತ್ತು ಸೋಮನಾಥ ಹೆಬಸೂರ ಬಂಧಿತ ಆರೋಪಿಗಳಾಗಿದ್ದು, ಇವರು ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿಟ್ಟು ಹುಬ್ಬಳ್ಳಿಗೆ ಸಾಗಿಸುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ನವಲಗುಂದ ಪೊಲೀಸರು ಒಂದು ಟಾಟಾ ಏಸ್ ವಾಹನ ಸೇರಿದಂತ 20 ಕ್ಕೂ ಹೆಚ್ಚು ಅಕ್ಕಿ ಮೂಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡು ನವಲಗುಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.