ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಆಶ್ರಯವಾದ ಜನಜಾಗೃತಿ ಸಂಘ
ಧಾರವಾಡ, ಆಗಸ್ಟ್, 15: ಧಾರವಾಡದಲ್ಲಿ ಜನ ಜಾಗೃತಿ ಸಂಘ ಹಾಗೂ ಬಸವರಾಜ ಕೋರವಾರ ಗೆಳೆಯರ ಬಳಗದ ವತಿಯಿಂದ ಗ್ರಾಮೀಣ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಆರಂಭಗೊಂಡಿದೆ.
ಬಡ ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನದ ದಾಹವನ್ನು ತೀರಿಸಲು ಈ ಸಂಘ ಮುಂದಾಗಿದೆ. ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಶ್ರಮಿಸುತ್ತಿರುವ ಈ ಸಂಘದ ಸದಸ್ಯರು ಧಾರವಾಡ ತಾಲೂಕಿನ ಗ್ರಾಮೀಣ ಸರ್ಕಾರಿ ಶಾಲೆಗೆ ಉಚಿತವಾಗಿ ನೋಟ್ಬುಕ್ ವಿತರಿಸುತ್ತಿದೆ. ಆ ಮೂಲಕ ಬಡ ಮಕ್ಕಳ ಅಕ್ಷರದ ದಾಹವನ್ನು ನೀಗಿಸುತ್ತಿದ್ದಾರೆ. ಜಿಲ್ಲೆಯ 31ಕ್ಕೂ ಹೆಚ್ಚು ಗ್ರಾಮೀಣ ಶಾಲೆಗಳ 13 ಸಾವಿರ ವಿದ್ಯಾರ್ಥಿಗಳಿಗೆ ಸುಮಾರು 80,000 ನೋಟ್ಬುಕ್ಗಳನ್ನು ವಿತರಿಸಿದ್ದಾರೆ.
ಬೆಳಗಾವಿ - ಕಿತ್ತೂರು - ಧಾರವಾಡ ಹೊಸ ರೈಲು ಮಾರ್ಗ ಏನಾಯ್ತು? ಇಲ್ಲಿದೆ ಮಾಹಿತಿ
ಧಾರವಾಡ ನಗರದ ಸರ್ಕಾರಿ ಶಾಲೆಗಳಲ್ಲಿ ಪ್ರತಿ ವರ್ಷ ಸುಮಾರು 5 ಸಾವಿರ ನೋಟ್ಬುಕ್ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿತ್ತು. ಈಗ ಗ್ರಾಮೀಣ ಭಾಗದ ಶಾಲೆಯ ಮಕ್ಕಳಿಗೂ ನೋಟ್ಬುಕ್ ವಿತರಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಈ ಸೇವೆ ಧಾರವಾಡ ಜಿಲ್ಲೆಯ ಸರ್ಕಾರಿ ಶಾಲೆಗಳ ಮಕ್ಕಳನ್ನು ವಿದ್ಯಾಭ್ಯಾಸದಲ್ಲಿ ಮುಂದೆ ತರುವುದೇ ಆಗಿದೆ. ಈ ವರ್ಷ ನೋಟ್ಬುಕ್ ವಿತರಿಸುವಂತೆ ಗ್ರಾಮೀಣ ಮಕ್ಕಳ ಪೋಷಕರಿಂದ ಮನವಿ ಬಂದಿದೆ. ಗ್ರಾಮೀಣ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ನೋಡಿ, ಅಲ್ಲಿನ ಶಾಲೆ ಮಕ್ಕಳಿಗೂ ಈ ಸೇವೆಯನ್ನು ವಿಸ್ತರಿಸಿದ್ದೇವೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ್ ಕೊರವರ ಹೇಳಿದ್ದಾರೆ.
ಪಲಿಮಾರು ಪ್ರಿಂಟರ್ಸ್ನಲ್ಲಿ ಆರ್ಡರ್:
ಈ ಯೋಜನೆಯು ಯಾವುದೇ ಖಾತೆಯನ್ನು ನಿರ್ವಹಿಸುತ್ತಿಲ್ಲ. ಸುಮಾರು 50-60 ಸ್ನೇಹಿತರು ನೇರವಾಗಿ ಹುಬ್ಬಳ್ಳಿಯ ಪಲಿಮಾರು ಪ್ರಿಂಟರ್ಸ್ನಲ್ಲಿ ಆರ್ಡರ್ಗಳನ್ನು ನೀಡುತ್ತಿದ್ದು, ಅವರು ನೋಟ್ಬುಕ್ಗಳನ್ನು ನಮಗೆ ಸಗಟು ಬೆಲೆಗೆ ನೀಡುತ್ತಾರೆ. 1 ರಿಂದ 3ನೇ ತರಗತಿಯಲ್ಲಿ ಓದುತ್ತಿರುವ ಪ್ರತಿ ವಿದ್ಯಾರ್ಥಿಗೆ ತಲಾ ಮೂರು ನೋಟ್ಬುಕ್ ವಿತರಿಸಲಾಗುತ್ತಿದೆ. 4 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 12 ನೋಟ್ಬುಕ್ ನೀಡಲಾಗುತ್ತದೆ. ಸರ್ಕಾರಿ ಶಾಲಾ ಶಿಕ್ಷಕರು ನೀಡಿದ ಅವಶ್ಯಕತೆಗಳನ್ನು ಸಹ ನಾವು ಈಡೇರಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಮುಂದಿನ ತಿಂಗಳೊಳಗೆ ಒಂದು ಲಕ್ಷ ನೋಟ್ಬುಕ್ಗಳನ್ನು ವಿತರಿಸುವ ಗುರಿಯನ್ನು ನಮ್ಮ ಜನಜಾಗೃತಿ ಸಂಘ ಹೊಂದಿದೆ. ಈ ಸಂಘ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಶಿಕ್ಷಣ ಮುಂದುವರೆಸಲು ಸದಾ ಸಹಕಾರ ನೀಡುತ್ತಿದೆ. ಜ್ಞಾನದ ಹಸಿವಿನೊಂದಿಗೆ ಈ ಸಂಘವು ಪರಿಸರ ಸಂರಕ್ಷಣೆಯಲ್ಲಿ ನಿರತವಾಗಿದೆ. ಪ್ರತಿ ಶಾಲೆಗಳಿಗೆ ತೆರಳಿ ಅಲ್ಲಿ ನೋಟ್ಬುಕ್ ವಿತರಣೆ ಮಾಡುವುದಲ್ಲದೇ ಶಾಲಾ ಮಕ್ಕಳಿಂದಲೇ ಸಸಿಗಳನ್ನು ನೆಡೆಸುತ್ತಿದ್ದಾರೆ. ನೋಟ್ಬುಕ್ ವಿತರಣೆ ಜೊತೆಗೆ ಪರಿಸರ ಸ್ನೇಹಿ ಕಾರ್ಯದಲ್ಲಿ ತೊಡಗಿರುವ ಈ ಸಂಘಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.