ಧಾರವಾಡದ ವಿದ್ಯಾರ್ಥಿ ಧೂದ್ಸಾಗರದಲ್ಲಿ ನಾಪತ್ತೆ
ಪೊಂಡಾ, ಸೆ. 15 : ಸ್ನೇಹಿತರೊಂದಿಗೆ ಗೋವಾ-ಕರ್ನಾಟಕ ಗಡಿಭಾಗದ ಧೂದ್ಸಾಗರ್ ಜಲಪಾತಕ್ಕೆ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿಯೊಬ್ಬ ನದಿಯಲ್ಲಿ ಈಜಲು ಇಳಿದಾಗ ನಾಪತ್ತೆಯಾದ್ದಾನೆ.
ಧಾರವಾಡ ಜನತಾ ಶಿಕ್ಷಣ ಸಮಿತಿಯ ಕೃಷ್ಣರಾವ್ ಹನುಮಂತರಾವ್ ಕಬ್ಬೂರು ವಿದ್ಯಾಸಂಸ್ಥೆಯ ಇಂಜಿನಿಯರಿಂಗ್ ವಿದ್ಯಾರ್ಥಿ ಮಾರುತಿ ಹೊಸಮನಿ(19) ನದಿಯಲ್ಲಿ ಭಾನುವಾರ ಸಂಜೆ ನಾಪತ್ತೆಯಾಗಿದ್ದಾನೆ.(ಚಂದಾ ತರಲು ಹೋದ ಬಾಲಕರು ಸೇಲಂನಲ್ಲಿ ಪತ್ತೆ)
ಈ ಬಗ್ಗೆ ಮಾಹಿತಿ ನೀಡಿದ ಗೋವಾ ಕೋಲೆಂ ಪೊಲೀಸ್ ಇನ್ಸಪೆಕ್ಟರ್ ಜಿವ್ಬಾ ದಾಲ್ವಿ ನಾಪತ್ತೆಯಾದವನಿಗಾಗಿ ಭಾನುವಾರ ರಾತ್ರಿಯವರೆಗೂ ಕಾರ್ಯಾಚರಣೆ ನಡೆಸಲಾಯಿತು. ಆದರೆ ಯಾವುದೆ ಸುಳಿವು ಲಭ್ಯವಾಗಿಲ್ಲ. ಈ ಬಗ್ಗೆ ನಾಪತ್ತೆ ಪ್ರಕರಣವೊಂದನ್ನು ದಾಖಲಿಸಿಕೊಂಡಿದ್ದೇವೆ ಎಂದು ಹೇಳಿದರು.
ಆರು ಜನ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಭಾನುವಾರ ಬೆಳಗ್ಗೆ ರೈಲಿನಲ್ಲಿ ಧೂದ್ ಸಾಗರ್ ಜಲಪಾತ ನೋಡಲು ಆಗಮಿಸಿತ್ತು. ಜಲಪಾತದ ಬಳಿ ಸ್ವಲ್ಪ ಸಮಯ ಕಳೆದ ವಿದ್ಯಾರ್ಥಿಗಳು ನಂತರ ಕೆಳಗಿಳಿದು ನದಿ ಹರಿಯುವ ದಿಕ್ಕಿನಲ್ಲಿ ಸಾಗಿದ್ದಾರೆ.
ಈ ವೇಳೆ ಒಂದೆಡೆ ಈಜಾಡಲು ನೀರಿಗಿಳಿದಿದ್ದಾರೆ. ನೀರಿನಲ್ಲಿ ಸಾಕಷ್ಟು ಹೊತ್ತು ಈಜಾಡಿದ ನಂತರ ಮೇಲೆ ಬಂದು ನೋಡಿದರೆ ಅವರಲ್ಲೊಬ್ಬ ಕಣ್ಮರೆಯಾಗಿದ್ದ. ಕೂಡಲೇ ಕೋಲೆಂ ಪೊಲೀಸ್ ಠಾಣೆಗೆ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.(ಕುಂದಾಪುರ: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಶವವಾಗಿ ಪತ್ತೆ)
ನಾವು ನದಿಯ ಇಕ್ಕೆಲಗಳಲ್ಲಿ ಸಂಪೂರ್ಣವಾಗಿ ಹುಡುಕಿದ್ದೇನೆ. ಯಾವುದೇ ಸುಳಿವು ಲಭ್ಯವಾಗಿಲ್ಲ. ಸೂರ್ಯ ಉದಯಿಸಿದ ನಂತರ ಮತ್ತೆ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಜಿವ್ಬಾ ದಾಲ್ವಿ ತಿಳಿಸಿದ್ದಾರೆ.