ಧಾರವಾಡದಲ್ಲಿ ಕಟ್ಟಡ ಕುಸಿತ, ಅವಶೇಷಗಳಡಿಯಿಂದ ಕೇಳುತ್ತಿದೆ ಆರ್ತನಾದ
ಧಾರವಾಡ, ಮಾರ್ಚ್ 20: ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತದಿಂದಾಗಿ ಇದುವರೆಗೆ ನಾಲ್ವರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ರಕ್ಷಣೆ ಮಾಡಲಾಗಿದೆ. ಅವಶೇಷಗಳಡಿಯಿಂದ ನೋವಿನ ಆರ್ತನಾದ ಕೇಳುತ್ತಿದೆ, ಸಂಬಂಧಿಕರೆಲ್ಲರೂ ಅಲ್ಲಿ ಬಂದು ಸೇರಿದ್ದು ತಮ್ಮವರ ಬರುವಿಕೆಗಾಗಿ ಕಾಯುತ್ತಿದ್ದಾರೆ. ಒಂದೆಡೆ
ಅವಶೇಷಗಳಡಿಯಿಂದ ನೋವಿನ ಆರ್ತನಾದ ಕೇಳುತ್ತಿದ್ದು ಎದೆ ಝೆಲ್ಲೆಸುವಂತಿದೆ. ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಸಾವನ್ನಪ್ಪಿದವರ ಸಂಖ್ಯೆ ನಾಲ್ಕಕ್ಕೇರಿದ್ದು, ಇದುವರೆಗೂ ಸುಮಾರು 56 ಜನರನ್ನು ರಕ್ಷಣೆ ಮಾಡಲಾಗಿದೆ.ರಾತ್ರಿಯಿಡೀ ರಕ್ಷಣಾ ಕಾರ್ಯ ಮುಂದುವರಿದಿದ್ದು, ಆದರೂ ಪಿಲ್ಲರ್ ಕೆಳಗೆ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾನೆ. ಇದೇ ವೇಳೆ ಪಿಲ್ಲರ್ ನಡುವೆ ಸಿಲುಕಿಕೊಂಡಿದ್ದ ಇಬ್ಬರು ಯುವಕರನ್ನು ಎನ್ಡಿಆರ್ಎಫ್ ತಂಡ ರಕ್ಷಣೆ ಮಾಡಿದೆ.
ಇನ್ನು ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕರ ವಿರುದ್ಧ ದೂರು ದಾಖಲಾಗಿದೆ. ಗಂಗಣ್ಣ ಶಿಂತ್ರೆ, ರವಿ ಸೊರಬದ, ಮಹಾಬಳೇಶ್ವರ್, ಬಸವರಾಜ್ ನಿಗದಿ, ರಾಜು ಘಾಟಿನ್ ಹಾಗೂ ಎಂಜಿನಿಯರ್ ವಿವೇಕ ಪವಾರ ಎಂಬ ಆರು ಜನರ ವಿರುದ್ಧ ಪಾಲಿಕೆ ಸಹಾಯಕ ಆಯುಕ್ತ ಸಂತೋಷ ಅನಿಶೆಟ್ಟರ್ ಉಪನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದುವರೆಗೆ ಸುಮಾರು 56 ಜನರನ್ನು ರಕ್ಷಣೆ ಮಾಡಲಾಗಿದ್ದು, ಗಾಯಗೊಂಡ ಸುಮಾರು 46 ಜನರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಸುಗಮಗೊಳಿಸಲು ಘಾಜಿಯಾಬಾದ್ನಿಂದ ಮತ್ತೆ 78 ಜನರಿರುವ ರಕ್ಷಣಾ ತಂಡ ಧಾರವಾಡ ತಲುಪಿದೆ.
ಇನ್ನು ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿದವರಿಗೆ ರಕ್ಷಣಾ ತಂಡವು ಪೈಪ್ ಮೂಲಕ ನೀರು ಮತ್ತು ಗ್ಲುಕೋಸ್ ನೀಡುತ್ತಿದೆ. ಅವಶೇಷದಡಿಯಲ್ಲಿ ಸಿಲುಕಿದ ನಾಗರಾಜ ಎಂಬಾತನಿಗೆ ಪೈಪ್ ಮೂಲಕ ನೀರು ಮತ್ತು ಗ್ಲುಕೋಸ್ ರವಾನಿಸಿದ್ದಾರೆ.