"ಚೋಟುದ್ದ ಇಲ್ಲ, ಐ ಲವ್ ಯೂ ನಾ?" ಧಾರವಾಡ ಡಿಸಿ ಅಚ್ಚರಿಗೊಂಡಿದ್ದೇಕೆ?
ಧಾರವಾಡ, ಡಿಸೆಂಬರ್ 27: ನೆರೆ ಸಂತ್ರಸ್ತರ ಮನೆಗಳ ಪರಿಶೀಲನೆಗೆಂದು ನಿನ್ನೆ ಧಾರವಾಡದ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್ ಭೇಟಿ ನೀಡಿದ್ದರು.
ಗ್ರಾಮದಲ್ಲಿ ನಡೆದುಹೋಗುತ್ತಾ ಅಲ್ಲಲ್ಲಿ ನಿಂತಿದ್ದ ವಿದ್ಯಾರ್ಥಿ, ಮಕ್ಕಳನ್ನು ಮಾತನಾಡಿಸುತ್ತಿದ್ದರು. ಈ ವೇಳೆ ಮನೆಯ ಮುಂದಿನ ಕಟ್ಟೆ ಮೇಲೆ ಬುಕ್ ಹಿಡಿದು ಜಿಲ್ಲಾಧಿಕಾರಿಗಳು ಹೋಗುವುದನ್ನು ನೋಡುತ್ತ ನಿಂತಿದ್ದ ಹುಡುಗನೊಬ್ಬನನ್ನು ಕಂಡು, ಆ ಹುಡುಗನ ಬಳಿ ಹೋಗಿ ಎಷ್ಟನೇ ತರಗತಿ ಎಂದು ಮಾತನಾಡಿಸಿದ್ದಾರೆ. ಹಾಗೆ ಆತನ ಕೈಯಲ್ಲಿದ್ದ ಪುಸ್ತಕವನ್ನು ತೆಗೆದುಕೊಂಡು ನೋಡಲಾರಂಭಿಸಿದ್ದಾರೆ.
ಭೀಕರ ಪ್ರವಾಹ: ಧಾರವಾಡ ಜಿಲ್ಲೆಯಲ್ಲಿ 672 ಕೋಟಿ ರೂ. ಹಾನಿ
ಅವರು ಪುಸ್ತಕ ತೆಗೆದುಕೊಂಡಿದ್ದೇ ತಡ, ಆ ವಿದ್ಯಾರ್ಥಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಜಿಲ್ಲಾಧಿಕಾರಿಗಳು ಆಶ್ಚರ್ಯಗೊಂಡು ಆ ಪುಸ್ತಕ ತೆಗೆದು ನೋಡುತ್ತಿದ್ದಂತೆ ಅದರಲ್ಲಿ ಯಾರಿಗೋ ಐ ಲವ್ ಯೂ ಎಂದು ಬರೆದಿದ್ದು ಕಾಣಿಸಿದೆ. ಅದನ್ನು ನೋಡಿ ದಂಗಾದ ಜಿಲ್ಲಾಧಿಕಾರಿಗಳು, ನೋಡಿ ಇಲ್ಲಿ ಎಂದು ಅಲ್ಲಿದ್ದ ಇತರರಿಗೂ ಅದನ್ನು ತೋರಿಸಿದ್ದಾರೆ. ಚೋಟುದ್ದ ಇಲ್ಲ, ಐ ಲವ್ ಯೂ ನಾ ಎಂದು ಅಚ್ಚರಿಗೊಂಡಿದ್ದಾರೆ. ಇದೇ ಕಾರಣಕ್ಕೇ ಓಡಿ ಹೋದ ಬಾಲಕ ಎಂದು ನಸುನಕ್ಕು ಮುಂದೆ ಹೋಗಿದ್ದಾರೆ.