ಮಾಜಿ ಸಚಿವ ವಿನಯ್ ಕುಲಕರ್ಣಿ ಬಿಜೆಪಿ ಸೇರುವ ಬಗ್ಗೆ ಸಿ.ಟಿ. ರವಿ ಮಹತ್ವದ ಹೇಳಿಕೆ!
ಬೆಂಗಳೂರು, ಅ. 20: ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಅವರು ಬಿಜೆಪಿ ಸೇರ್ಪಡೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಹುಬ್ಬಳ್ಳಿಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, ಮಾಜಿ ಸಚಿವ ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಹುಬ್ಬಳ್ಳಿ-ಧಾರವಾಡದ ಬಿಜೆಪಿ ನಾಯಕರು ನಿರ್ಧಾರವೇ ಅಂತಿಮ ಎಂದಿದ್ದಾರೆ.
ಯಾವುದೇ ನಾಯಕ ಪಕ್ಷದ ಆಸ್ತಿ ಆಗುವುದಾದರೆ ಸ್ಥಳೀಯ ನಾಯಕರು ಗ್ರೀನ್ ಸಿಗ್ನಲ್ ಕೊಡುತ್ತಾರೆ ಎನ್ನುವ ಮೂಲಕ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಬಿಜೆಪಿ ಸೇರುವುದಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ.
ಆ ಬಗ್ಗೆ ಮಾತುಕತೆ ನಡೆದಿಲ್ಲ
ಮಾಜಿ ಸಚಿವ ವಿನಯ ಕುಲಕರ್ಣಿ ಬಿಜೆಪಿ ಸೇರುವ ಬಗ್ಗೆ ಮಾತುಕತೆ ನಡೆದಿಲ್ಲ. ಆದರೂ ಪಕ್ಷ ಸೇರ್ಪಡೆ ವಿಚಾರದಲ್ಲಿ ಸ್ಥಳೀಯ ಘಟಕಗಳ ನಿರ್ಧಾರವೇ ಅಂತಿಮ. ಪಕ್ಷದ ಆಸ್ತಿ ಆಗುವುದಾರೆ ಸ್ಥಳೀಯ ಘಟಕಗಳು ಒಪ್ಪುತ್ತವೆ ಎಂದರು.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆರು ವರ್ಷದಲ್ಲಿ ಸುಧಾರಣಾ ಪರ್ವ ಮುಂದುವರೆಸಿದೆ. ಆಡಳಿತದಲ್ಲಿ ಸುಧಾರಣೆ, ಅಭಿವೃದ್ಧಿಯಲ್ಲಿ ವೇಗದೊಂದಿಗೆ ಕೆಲಸ ಮಾಡುತ್ತಿದೆ. ಐದು ಶತಮಾನಗಳ ಅಯೋಧ್ಯಾ ಹೋರಾಟ ನಡೆದಿತ್ತು. ಬಿಜೆಪಿ ಬೆಂಬಲಿಸಿದವರು, ವಿರೋಧಿಸಿದವರು ಅಯೋಧ್ಯಾ ವಿಚಾರದ ಬಗ್ಗೆ ಚರ್ಚೆ ಮಾಡುತ್ತಿದ್ದರು. ಅಯೋಧ್ಯಾ ಯಾವಾಗ ಸರಿ ಮಾಡುತ್ತೀರಿ ಎಂದು ಬೆಂಬಲಿಸಿದವರು ಕೇಳಿದ್ರೆ, ವಿರೋಧಿಸಿದವರು ಚುನಾವಣೆ ಪ್ರಚಾರಕ್ಕೆ ಮಾತ್ರ ಬಳಸಿಕೊಳ್ಳುತ್ತಿರಿ ಎನ್ನುತ್ತಿದ್ದರು ಎಂದರು.
ದಿ. ಮಾಜಿ ಪ್ರಧಾನಿ ರಾಜೀವ್ ನೆನಪಿಸಿಕೊಂಡ ರವಿ
ಜಮ್ಮು ಕಾಶ್ಮೀರದ ಆರ್ಟಿಕಲ್370 ರದ್ದು ಪಡಿಸಿ ಅನುಷ್ಠಾನಗೊಳಿಸುವ ಕೆಲಸ ನಡೆದಿದೆ. ಪ್ರತ್ಯೇಕತಾವಾದಕ್ಕೆ ಜಮ್ಮು ಮಾತ್ರವಲ್ಲ, ದೇಶದಲ್ಲಿಯೇ ಜಾಗವಿಲ್ಲ. ದೇಶದಲ್ಲಿ ಸುಧಾರಣೆ ಪರ್ವ ನಡೆದಿದೆ. 1986 ರಾಜೀವ್ ಗಾಂಧಿ ಒಂದು ಮಾತು ಹೇಳಿದ್ದರು, ಕೇಂದ್ರ ಸರ್ಕಾರ ಒಂದು ರೂಪಾಯಿ ಬಿಡುಗಡೆ ಮಾಡಿದರೆ ಅದರಲ್ಲಿ 15 ಪೈಸೆ ಮಾತ್ರ ಜನರಿಗೆ ತಲುಪುತ್ತದೆ ಎಂದಿದ್ದರು. ಅದು ಕಾಂಗ್ರೆಸ್ ಆಡಳಿತ ವೈಖರಿ. ಅದನ್ನು ಸಾರ್ವಜನಿಕವಾಗಿ ರಾಜೀವ್ ಗಾಂಧಿ ಅವರೇ ಒಪ್ಪಿಕೊಂಡಿದ್ದರು ಎಂದು ಸಿಟಿ ರವಿ ಹೇಳಿದರು.
ಕೇಂದ್ರದ ಅನುದಾನ ಸಂಪೂರ್ಣ ತಲುಪುತ್ತಿದೆ
ಈಗ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ನೂರು ರೂಪಾಯಿ ಜನರಿಗೆ ಸಂಪೂರ್ಣವಾಗಿ ತಲುಪುತ್ತದೆ. ಎಲ್ಲ ಯೋಜನೆಗಳ ಹಣ ನೇರವಾಗಿ ಜನರ ಖಾತೆಗೆ ಹೋಗುತ್ತದೆ. ಯಾವುದೇ ಭ್ರಷ್ಟಾಚಾರ ಹಾಗೂ ವಿಳಂಬಕ್ಕೆ ಆಸ್ಪದವೇ ಇಲ್ಲ. ಜನಧನ ಮೂಲಕ ಜನರ ಖಾತೆಗಳಿಗೆ ನೇರವಾಗಿ ಜಮಾ ಆಗುತ್ತಿದೆ. ಒನ್ ನೇಶನ್, ಒನ್ ಕಾರ್ಡ್ನಿಂದ ದೇಶದೆಲ್ಲೆಡೆ ಪಡಿತರ ಪಡೆಯಬಹುದು ಎಂದು ಕೇಂದ್ರ ಸರ್ಕಾರದ ಸಾಧನೆಗಳನ್ನು ಸಿಟಿ ರವಿ ವಿವರಿಸಿದರು.
ಕಾರ್ಮಿಕ ಕಾಯ್ದೆ ತಿದ್ದುಪಡಿಯಿಂದ ಸಮಸ್ಯೆಯಿಲ್ಲ
ಕಾರ್ಮಿಕ ಕಾಯಿದೆ ತಿದ್ದುಪಡಿಯಿಂದ ಯಾರಿಗೂ ಪಿಎಫ್ ಸಮಸ್ಯೆ ಇಲ್ಲ. ಭವಿಷ್ಯದ ಭಾರತವನ್ನು ಗಟ್ಟಿ ಅಡಿಪಾಯದ ಮೇಲೆ ನಿರ್ಮಾಣ ಮಾಡುವ ಶಿಕ್ಷಣವಿದೆ. ಪ್ರಾದೇಶಿಕ ಭಾಷೆಗಳ ಉಳಿವಿಗೆ ಆದ್ಯತೆ ನೀಡಲಾಗುತ್ತಿದೆ. ಕೌಶಲ್ಯದ ತರಬೇತಿಗೆ ಒತ್ತು ನೀಡಿದ ಶಿಕ್ಷಣ ನೀಡಲಾಗುತ್ತಿದೆ. ವಿರೋಧ ಪಕ್ಷಗಳಿಗೆ ಈಗ ನಮ್ಮನ್ನು ವಿರೋಧಿಸಲು ಯಾವುದೇ ಅಂಶಗಳು ಸಿಗುತ್ತಿಲ್ಲ. ಹೀಗಾಗಿ ಹುಯಿಲೆಬ್ಬಿಸುತ್ತಿದ್ದಾರೆ ಎಂದರು.