ಧಾರವಾಡ; ಜಾತ್ರೆ, ಉರುಸ್ ರದ್ದು. ಮಾಸ್ಕ್ ಧರಿಸದಿದ್ದರೆ ದಂಡ
ಧಾರವಾಡ, ಮಾರ್ಚ್ 15; "ಮುಖ್ಯಮಂತ್ರಿಗಳ ಸೂಚನೆಯಂತೆ ಜಿಲ್ಲೆಯಾದ್ಯಂತ ಮುಂಬರುವ ಎಲ್ಲಾ ಜಾತ್ರೆ, ಉರುಸ್ಗಳನ್ನು ರದ್ದುಗೊಳಿಸಲಾಗಿದೆ" ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಸೋಮವಾರ ಕೋವಿಡ್ ನಿಯಂತ್ರಣದ ತಾಂತ್ರಿಕ ಮತ್ತು ತಜ್ಞರ ಸಲಹಾ ಸಮಿತಿಯೊಂದಿಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಭೆ ನಡೆಸಿದರು. ಸಭೆಯಲ್ಲಿ ನೀಡಿದ ಸೂಚನೆಗಳನ್ನು ಆಧರಿಸಿ, ಜಿಲ್ಲಾಧಿಕಾರಿಗಳು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಕೈಗೊಂಡ ಹಲವು ನಿರ್ದೇಶನಗಳನ್ನು ನೀಡಿದ್ದಾರೆ.
ಧಾರವಾಡ; 74 ಕೇಂದ್ರಗಳಲ್ಲಿ ಲಸಿಕೆ ಲಭ್ಯ
"ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೋವಿಡ್-19 ಪ್ರಕರಣಗಳ ವರದಿಯಲ್ಲಿ ಏರಿಕೆಯಾಗುತ್ತಿರುವುದು ಎರಡನೇ ಅಲೆಯ ಅಪಾಯವನ್ನು ಸೂಚಿಸುತ್ತದೆ. ಇದನ್ನು ನಿಯಂತ್ರಿಸಲು ಮುಖ್ಯಮಂತ್ರಿಗಳ ಸೂಚನೆಯಂತೆ ಜಿಲ್ಲೆಯಾದ್ಯಂತ ಮುಂಬರುವ ಎಲ್ಲಾ ಜಾತ್ರೆ, ಉರುಸ್ ರದ್ದುಗೊಳಿಸಲಾಗಿದೆ" ಎಂದರು.
ಧಾರವಾಡ; ಮಾಸ್ಕ್ ಹಾಕದಿದ್ದರೆ ಮತ್ತೆ ದಂಡ ಕಟ್ಟಲು ಸಿದ್ಧರಾಗಿ
"ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಪಾಡಿಕೊಳ್ಳದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಮದುವೆ, ಸಾಮಾಜಿಕ, ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳಲ್ಲಿ ಸರ್ಕಾರ ವಿಧಿಸಿರುವ ಷರತ್ತುಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗುತ್ತದೆ" ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ 6 ಪಥವಾಗಿ ಅಗಲೀಕರಣ
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸಮಾರಂಭಗಳಲ್ಲಿ ಪ್ರತಿ ವ್ಯಕ್ತಿಗೆ 3.25 ಚದರ ಮೀಟರ್ ಸ್ಥಳಾವಕಾಶ ಇರುವಂತೆ ನೋಡಿಕೊಳ್ಳಬೇಕು. ಮದುವೆಗಳಿಗೆ ತೆರೆದ ಪ್ರದೇಶದಲ್ಲಿ 500, ಒಳಾಗಂಣದಲ್ಲಿ 200 ಜನರಿಗೆ ಮಾತ್ರ ಅವಕಾಶವಿದೆ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
ಜನ್ಮದಿನ ಇತರ ಆಚರಣೆಗಳಿಗೆ, ನಿಧನ, ಶವಸಂಸ್ಕಾರ, ಅಂತ್ಯಕ್ರಿಯೆ, ಧಾರ್ಮಿಕ, ರಾಜಕೀಯ ಆಚರಣೆಗಳಿಗೆ ಸರ್ಕಾರ ನಿಗದಿ ಪಡಿಸಿರುವ ಸಂಖ್ಯೆಗೆ ಸೀಮಿತಗೊಳಿಸಿ ಅವಕಾಶ ನೀಡಬೇಕು. ಮಾಸ್ಕ್ ಹಾಕದ ವ್ಯಕ್ತಿಗಳಿಗೆ ದಂಡ ವಿಧಿಸುವ ಕಾರ್ಯವನ್ನು ಮಹಾನಗರ ಪಾಲಿಕೆ, ಗ್ರಾಮ ಪಂಚಾಯತಿಗಳು ಚುರುಕುಗೊಳಿಸಬೇಕು ಎಂದು ಸೂಚಿಸಲಾಗಿದೆ.
ತಪಾಸಣೆ, ಲಸಿಕೆ ಕಡ್ಡಾಯ: ಜಿಲ್ಲೆಯಾದ್ಯಂತ ಕೋವಿಡ್-19 ಸೋಂಕಿತರು, ಅವರ ಸಂಪರ್ಕದ ವ್ಯಕ್ತಿಗಳನ್ನು ಪತ್ತೆಮಾಡಿ ಪರೀಕ್ಷೆಗೆ ಒಳಪಡಿಸುವ ಕಾರ್ಯ ಮತ್ತೆ ತೀವ್ರಗೊಳಿಸಲಾಗುತ್ತದೆ. ಜಿಲ್ಲೆಯಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎರಡೂ ತರಹದ ಲಸಿಕೆಗಳು ಲಭ್ಯವಿದೆ. ಸಾರ್ವಜನಿಕರು ತಮ್ಮ ಇಚ್ಛೆ ಅನುಸಾರ ಈ ಲಸಿಕೆಗಳನ್ನು ಪಡೆಯಬೇಕು.
ಎಲ್ಲಾ ಆಸ್ಪತ್ರೆಗಳಲ್ಲಿ ಈ ಎರಡು ಲಸಿಕೆಗಳನ್ನು ಪ್ರತ್ಯೇಕವಾಗಿ ನೀಡುವ ವ್ಯವಸ್ಥೆ ಮಾಡಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡಂಗುರ ಸಾರಿ ಜನಜಾಗೃತಿ ಮೂಡಿಸಬೇಕು. ವಿವಿಧ ಯೋಜನೆಗಳಲ್ಲಿ ಮಾಸಾಶನ ಪಡೆಯುತ್ತಿರುವ 60 ವರ್ಷ ಮೇಲ್ಪಟ್ಟವರು ಹಾಗೂ ಸರ್ಕಾರದ ನಿವೃತ್ತ ನೌಕರರು ಕಡ್ಡಾಯವಾಗಿ ಲಸಿಕೆ ಪಡೆಯಬೇಕಿದೆ.
60 ವರ್ಷ ಮೇಲ್ಪಟ್ಟ ಜನರನ್ನು ಗುರುತಿಸಲು ಚುನಾವಣಾ ಕರ್ತವ್ಯದ ಮಾದರಿಯಲ್ಲಿ ಕಾರ್ಯ ನಿರ್ವಹಣೆ ಮಾಡಲಾಗುತ್ತದೆ. ವಿಧಾನಸಭಾ ಕ್ಷೇತ್ರ, ಮತಗಟ್ಟೆವಾರು ಚುನಾವಣಾ ಗುರುತಿನ ಚೀಟಿ ಆಧರಿಸಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಹಾಗೂ 45 ವರ್ಷ ಮೇಲ್ಪಟ್ಟ ಕೊ-ಮಾರ್ಬಿಡಿಟಿ ಲಕ್ಷಣಗಳಿರುವ ವ್ಯಕ್ತಿಗಳನ್ನು ಗುರುತಿಸಿ ಲಸಿಕೆ ಪಡೆಯಲು ಮನವಿ ಮಾಡಲಾಗುತ್ತದೆ.