ಎಚ್ಚರ; ಕೊರೊನಾ ಸುಳ್ಳು ಸುದ್ದಿ ಹರಿಬಿಟ್ಟವರನ್ನು ಹಿಡಿದ ಪೊಲೀಸರು!
ಧಾರವಾಡ. ಮಾರ್ಚ್ 26: ಆರೋಗ್ಯದ ವಿಚಾರವಾಗಿ ತೀವ್ರ ತಲ್ಲಣವನ್ನೇ ಸೃಷ್ಟಿಸಿದೆ ಮಾರಕ ಕೊರೊನಾ ವೈರಸ್ ಸೋಂಕು. ಜಗತ್ತಿನಲ್ಲಿ ಎಲ್ಲಿ ನೋಡಿದರೆಲ್ಲಿ, ಕೊರೊನಾ ವೈರಸ್ದ್ದೆ ಮಾತು.
ಪರಿಸ್ಥಿತಿ ಹೀಗಿರುವಾಗ ಕೊರೊನಾ ಬಗ್ಗೆ ಜಗತ್ತಿನಲ್ಲಿ ಸುಳ್ಳು ಸುದ್ದಿಗಳಿಗೂ ಕಡಿಮೆ ಏನಿಲ್ಲ. ಯಾರೋ ಕಿಡಗೇಡಿಗಳು ಕೊರೊನಾ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಮಜಾ ತೆಗೆದುಕೊಳ್ಳುತ್ತಿರುವುದು ನಡೆದಿದೆ.
ರಾಜ್ಯದಲ್ಲಿ ಅರ್ಧಶತಕ ದಾಟಿದ ಕೊರೊನಾ ಕೇಸ್; ಆತಂಕ ಹೊರಹಾಕಿದ ಸಚಿವ
ಧಾರವಾಡದಲ್ಲಿ ಕೊರೊನಾ ಸೋಂಕಿತ ಪ್ರಕರಣವೊಂದು ಪತ್ತೆಯಾಗಿದ್ದಾಗ, ಪತ್ರಕರ್ತರೊಬ್ಬರ ಫೋಟೊ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಇಬ್ಬರನ್ನು ಧಾರವಾಡ ಪೊಲೀಸರು ಬಂಧಿಸಿದ್ದಾರೆ. ಮುಂದೆ ಓದಿ...
ತಪ್ಪು ಮಾಹಿತಿ ಹರಿಬಿಟ್ಟಿದ್ದರು
ಧಾರವಾಡದ ಹೊಸ ಯಲ್ಲಾಪೂರದ ಒಬ್ಬ ವ್ಯಕ್ತಿಗೆ ಈ ಹಿಂದೆ ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಕಾಲ್ಪನಿಕ ಹೆಸರಿನೊಂದಿಗೆ, ಬೇರೊಬ್ಬ ಆರೋಗ್ಯಯುತ ಪತ್ರಕರ್ತರ ಫೋಟೋವೊಂದನ್ನು ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹರಿಬಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ವಿದ್ಯಾರ್ಥಿಗಳನ್ನು ಗುರುವಾರ ಬಂಧಿಸಿದ್ದಾರೆ.
ಇಬ್ಬರೂ ವಿದ್ಯಾರ್ಥಿಗಳು
ಈ ಪ್ರಕರಣದ ಕುರಿತು ಕ್ರಮ ಕೈಗೊಳ್ಳಲು ಕೋರಿ ಮಾರ್ಚ್ 22 ರಂದು ಜಿಲ್ಲಾಧಿಕಾರಿಗಳು ಮಹಾನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು. ಅದರ ಆಧಾರದ ಮೇಲೆ ತನಿಖೆ ಕೈಗೊಂಡ ಸೈಬರ್ ವಿಭಾಗದ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿ ಸುಳ್ಳು ಸುದ್ದಿ ಹರಡಿದ ಇಬ್ಬರು ವಿದ್ಯಾರ್ಥಿಗಳ ಮೇಲೆ ಧಾರವಾಡ ಶಹರ ಹಾಗೂ ವಿದ್ಯಾಗಿರಿ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಬಂಧಿಸಿದ್ದಾರೆ.
ರಿಪಿಟ್ ಆದ್ರೆ 5 ಲಕ್ಷ ದಂಡ
ಸಿಆರ್ಪಿಸಿ ಕಲಂ 110 ರನ್ವಯ ಒಂದು ಲಕ್ಷ ರೂ. ಮೌಲ್ಯದ ಬಾಂಡ್ ಪಡೆದು ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ. ಇಂತಹ ಕೃತ್ಯಗಳನ್ನು ಪುನರಾವರ್ತನೆ ಮಾಡಿದರೆ ಸಿಆರ್ಪಿಸಿ ಕಾಯ್ದೆ 269, 188 ಅನ್ವಯ ಮೊಕದ್ದಮೆ ದಾಖಲಿಸಿ ಐದು ಲಕ್ಷ ರೂ.ಗಳ ದಂಡ ಮತ್ತು ಕಠಿಣ ಕ್ರಮ ವಿಧಿಸಲಾಗುವುದು. ಇನ್ಸ್ಪೆಕ್ಟರ್ ಪ್ರಭುಗೌಡ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿತ್ತು ಎಂದು ಮಹಾನಗರ ಪೊಲೀಸ್ ಕಮೀಷನ್ರೇಟ್ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಕೃಷ್ಣಕಾಂತ ತಿಳಿಸಿದ್ದಾರೆ.
ಚೇತರಿಸಿಕೊಂಡ ಸೋಂಕಿತ
ಧಾರವಾಡದಲ್ಲೂ ಕೊರೊನಾ ಸೋಂಕು ಹರಡಿತ್ತು. ಆಸ್ಟ್ರೇಲಿಯದಿಂದ ಆಗಮಿಸಿದ್ದ ವ್ಯಕ್ತಿಯೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಅವರನ್ನು ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಈಗ ವ್ಯಕ್ತಿ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿದು ಬಂದಿದೆ.