ಎಚ್ಚರ! ಹುಬ್ಬಳ್ಳಿ-ಧಾರವಾಡ ವ್ಯಕ್ತಿಗೆ ಕೊರೊನಾಸೋಂಕು ಪತ್ತೆ
ಬೆಂಗಳೂರು, ಮಾರ್ಚ್ 22: ಜನತಾ ಕರ್ಫ್ಯೂ ಆಚರಿಸಿ ಮನೆಯಲ್ಲೇ ಉಳಿದುಕೊಂಡ ಹುಬ್ಬಳ್ಳಿ ಮಂದಿಗೆ ಬೆಳಗ್ಗೆಯೇ ಕೆಟ್ಟ ಸುದ್ದಿ ಸಿಕ್ಕಿದೆ. ವಿದೇಶದಿಂದ ಹುಬ್ಬಳ್ಳಿಗೆ ಬಂದ 33 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೊನಾವೈರಸ್ ಸೋಂಕು ಇರುವುದು ಪತ್ತೆಯಾಗಿದೆ. ಸೋಂಕಿತ ವ್ಯಕ್ತಿ ಆಸ್ಟ್ರೆಲಿಯಾದಿಂದ ಬಂದಿದ್ದು, ಧಾರವಾಡದ ಹೊಸಯಲ್ಲಾಪುರದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಟ್ರಾವೆಲ್ ಹಿಸ್ಟರಿ: ಆಸ್ಟ್ರೇಲಿಯಾದಿಂದ ದುಬೈ, ದುಬೈನಿಂದ ಮಸ್ಕತ್ ಗೆ ತೆರಳಿದ್ದ ವ್ಯಕ್ತಿ, ಗೋವಾಕ್ಕೆ ಬಂದಿದ್ದಾರೆ. ನಂತರ ಮಾರ್ಚ್ 12ರಂದು ಹುಬ್ಬಳ್ಳಿ-ಧಾರಾವಾಡಕ್ಕೆ ಬಸ್ ನಲ್ಲಿ ಪ್ರಯಾಣಿಸಿದ್ದಾರೆ.
ಸೋಂಕು ದೃಢ: ಮಾರ್ಚ್ 18ರಂದು ಕೊವಿಡ್19 ರೋಗದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರ್ಚ್ 19ರಂದು ಗಂಟಲ ದ್ರವ ಶಿವಮೊಗ್ಗದ ವಿಡಿ ಆರ್ ಎಲ್ ಲ್ಯಾಬಿಗೆ ಕಳಿಸಲಾಗಿತ್ತು. ಕೋವಿಡ್19 ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಕೋವಿಡ್19 ಸೋಂಕಿತ ವ್ಯಕ್ತಿಯನ್ನು ಹುಬ್ಬಳ್ಳಿಯ ಕಿಮ್ಸ್ ಗೆ ಸೇರಿಸಲಾಗಿದ್ದು ,ಪ್ರತ್ಯೇಕ ಕೋಠಡಿಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಧಾರವಾಡದ ಹೊಸಯಲ್ಲಾಪುರ ಪ್ರದೇಶವನ್ನು ಸೋಂಕಿತ ಪ್ರದೇಶ ಎಂದು ಘೋಷಿಸಲಾಗಿದ್ದು, ಸುತ್ತಾ ಮುತ್ತಾ 3 ಕಿ. ಮೀ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಕರ್ನಾಟಕದಲ್ಲಿ ಸೋಂಕಿತ ಸಂಖ್ಯೆ 21ಕ್ಕೆ ಏರಿದೆ ಎಂದು ಮಾಹಿತಿ ಸಿಕ್ಕಿದೆ. ಜಿಲ್ಲಾವಾರು ನೋಡುವುದಾದರೆ, ಬೆಂಗಳೂರು 14, ಕಲಬುರಗಿ 3 (ಒಂದು ಸಾವು ಸೇರಿ), ಮಡಿಕೇರಿ 1, ಚಿಕ್ಕಬಳ್ಳಾಪುರ 1, ಮೈಸೂರು 1, ಹುಬ್ಬಳ್ಳಿ ಧಾರವಾಡ-1 ಸೇರಿ ಒಟ್ಟು ರಾಜ್ಯದಲ್ಲಿ 21 ಸೋಂಕಿತರು ದೃಢಪಟ್ಟಿದ್ದಾರೆ.
ಜನತಾ ಕರ್ಫ್ಯೂ : ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ರಾಜ್ಯದೆಲ್ಲೆಡೆ ಭಾರಿ ಬೆಂಬಲ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸೇರಿದಂತೆ ಸಾರಿಗೆ ಬಂದ್ ಆಗಿದೆ. ಭಾರತೀಯ ರೈಲ್ವೆ, ಆಸ್ಪತ್ರೆಗಳು, ಓಲಾ, ಉಬರ್, ಜ್ಯೂವೆಲರ್ಸ್ ಸಂಘಟನೆ, ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಬೆಂಬಲ ನೀಡಿದ್ದು, ಭಾನುವಾರ ಸ್ವಯಂಘೋಷಿತ ಬಂದ್ ಆಚರಣೆ ಮಾಡುತ್ತಿದ್ದಾರೆ.