ವಿದೇಶಗಳಿಂದ ಬಂದವರು ಸ್ವಯಂ ವರದಿ ಮಾಡಿಕೊಳ್ಳಿಲು ಮನವಿ
ಧಾರವಾಡ, ಮಾರ್ಚ್ 20: ನೊವೆಲ್ ಕೊರೊನಾ ವೈರಸ್ ಕೋವಿಡ್-19 ನಿಯಂತ್ರಣಕ್ಕೆ ಧಾರವಾಡ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ವಿದೇಶಗಳಿಂದ ಜಿಲ್ಲೆಗೆ ಆಗಮಿಸುವ ಜನರು ಸ್ವಯಂ ಪ್ರೇರಿತರಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ವರದಿ ಮಾಡಿಕೊಳ್ಳಬೇಕು ಎಂದು ಧಾರವಾಡ ಡಿಸಿ ದೀಪಾ ಚೋಳನ್ ಮನವಿ ಮಾಡಿದ್ದಾರೆ
ಮನೆಗಳಲ್ಲಿ ಪ್ರತ್ಯೇಕವಾಗಿ ನಿಗಾ ಇರಿಸಲ್ಪಟ್ಟಿರುವವರು ತಮ್ಮ ಪ್ರತ್ಯೇಕತೆಯನ್ನು ಅನುಸರಿಸಬೇಕು. ಸರ್ಕಾರದ ನಿರ್ದೇಶನ ಉಲ್ಲಂಘಿಸಿದರೆ ಎಪಿಡೆಮಿಕ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಕೊರೊನಾ ವಿರುದ್ಧ ಜನಾಂದೋಲನ ರೂಪಿಸಲು ಮಾನ್ಯ ಪ್ರಧಾನ ಮಂತ್ರಿಗಳು ಜನಜಾಗೃತಿಗಾಗಿ ಕರೆ ನೀಡಿರುವ ಭಾನುವಾರದ ಜನತಾ ಕಫ್ರ್ಯೂ ಯಶಸ್ವಿಗೊಳಿಸಬೇಕು. ಸಾರ್ವಜನಿಕರು ಅಂದು ಸ್ವಇಚ್ಛೆಯಿಂದ ಮನೆಗಳಿಂದ ಹೊರಬರದೇ ಸಂಪೂರ್ಣವಾಗಿ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಬೆಳಿಗ್ಗೆ ನಡೆದ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕೊರೊನಾ ವೈರಸ್ ತಡೆಗೆ ವ್ಯಾಪಕ ಕ್ರಮಗಳನ್ನು ಜರುಗಿಸಲಾಗಿದೆ. ಹೋಟೆಲ್ಗಳು ಹಾಗೂ ಊಟ-ಉಪಾಹಾರ ಪೂರೈಸುವ ಎಲ್ಲಾ ವ್ಯಾಪಾರಿಗಳು ಶುಚಿತ್ವಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಅಡುಗೆ ತಯಾರಿಕೆ, ಬಳಸುವ ಪಾತ್ರೆಗಳು, ನೀರು, ಪದಾರ್ಥಗಳು, ಕೆಲಸಗಾರರು ಮುಂತಾದ ಎಲ್ಲ ವಿಷಯಗಳಲ್ಲಿ ಎಚ್ಚರ ವಹಿಸಿ ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸೇವೆ ನೀಡಬೇಕು. ಪಾತ್ರೆ ತೊಳೆಯಲು ಬಿಸಿನೀರು ಬಳಸಬೇಕು. ಗ್ರಾಹಕರಿಗೆ ಕುಡಿಯಲು ಪ್ರತ್ಯೇಕವಾಗಿ ಬಿಸಿನೀರು ಕೊಡಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ವಿಚಕ್ಷಣೆ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲೆಗೆ ವಿದೇಶಗಳಿಂದ ಆಗಮಿಸುವ ನಾಗರಿಕರು ಸ್ವಯಂ ಪ್ರೇರಿತರಾಗಿ ಜಿಲ್ಲಾಡಳಿತಕ್ಕೆ ತಮ್ಮ ಪ್ರವಾಸದ ಹಿನ್ನೆಲೆ ಮತ್ತು ಆರೋಗ್ಯದ ಬಗ್ಗೆ ಜಿಲ್ಲಾಡಳಿತಕ್ಕೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ಒದಗಿಸಬೇಕು. ಈಗಾಗಲೇ ಮನೆಗಳಲ್ಲಿ ಪ್ರತ್ಯೇಕವಾಗಿ ನಿಗಾ ಇರಿಸಲ್ಪಟ್ಟವರು ಯಾವುದೇ ಕಾರಣಕ್ಕೂ ತಮ್ಮ ಕುಟುಂಬದ ಇತರ ಸದಸ್ಯರು ಹಾಗೂ ನೆರೆ ಹೊರೆಯವರೊಂದಿಗೆ ಸಂಪರ್ಕಕ್ಕೆ ಬರಬಾರದು. ಈ ವಿಷಯದಲ್ಲಿ ಸರ್ಕಾರದ ನಿರ್ದೇಶನ ಉಲ್ಲಂಘಿಸಿದರೆ ಅಂತಹವರ ವಿರುದ್ಧ ಎಪಿಡೆಮಿಕ್ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದರು.
ಸೋಂಕಿಗೆ ಕಡಿವಾಣ ಹಾಕಲು ದೊಡ್ಡಮಟ್ಟದಲ್ಲಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ದೇಶದ ಮಾನ್ಯ ಪ್ರಧಾನ ಮಂತ್ರಿಗಳು ಭಾನುವಾರ ಕರೆ ನೀಡಿರುವ ಜನತಾ ಕಫ್ರ್ಯೂಗೆ ಜಿಲ್ಲೆಯ ಜನತೆ ತಮ್ಮ ಸಹಕಾರ ನೀಡಬೇಕು. ಆ ದಿನ ಜನರು ಸಾಧ್ಯವಾದಷ್ಟು ಮನೆಯೊಳಗೆ ಉಳಿದು ಮನೆಯಿಂದಲೇ ಕೆಲಸ ಮಾಡಬೇಕು. ಸಾರ್ವಜನಿಕರ ಆರೋಗ್ಯಕ್ಕಾಗಿ ಎಲ್ಲ ನಗರ ಮತ್ತು ಗ್ರಾಮೀಣ ವರ್ಗಗಳ ಜನರಲ್ಲಿ ಅರಿವು ಮೂಡಿಸಿ ಪರಸ್ಪರ ಅಂತರ ಕಾಪಾಡಿಕೊಳ್ಳುವುದರ ಮಹತ್ವದ ಮನವರಿಕೆ ಮಾಡಿಕೊಡಲು ಜಿಲ್ಲೆಯ ಜನತೆಗೆ ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡರು.
ಜಿಲ್ಲೆಯಲ್ಲಿ ಕೊರೊನಾ ವೈರಸ್ ಸದ್ಯ ನಿಯಂತ್ರಣದಲ್ಲಿದೆ. ಮುಂದಿನ ಹಂತಗಳನ್ನು ಎದುರಿಸಲು ವೈದ್ಯಕೀಯ ಹಾಗೂ ಇತರ ಅಗತ್ಯ ಕ್ರಮಗಳ ಏರ್ಪಾಡು ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಥರ್ಮಲ್ ಸ್ಕ್ಯಾನಿಂಗ್ ಗ್ಯಾಜೆಟ್ಗಳು, ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿಗಳಿಗೆ ಪರ್ಸನಲ್ ಪ್ರೊಟೆಕ್ಷನ್ ಗೇರ್, ಎನ್-95 ಮಾಸ್ಕ್ ಮೊದಲಾದ ರಕ್ಷಣಾ ಸಾಮಾಗ್ರಿಗಳನ್ನು ಅಗತ್ಯ ಪ್ರಮಾಣದಲ್ಲಿ ಖರೀದಿಸಿ ದಾಸ್ತಾನು ಮಾಡಿಕೊಳ್ಳಬೇಕು ಎಂದು ಸೂಚಿಸಿದರು. ನೆರೆಯ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಆಗಮಿಸುವ ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸಲು ಜಿಲ್ಲೆಯ ಗಡಿಭಾಗ ಮತ್ತು ನಗರದ ಪ್ರವೇಶದ ಮುಖ್ಯ ಸ್ಥಳಗಳಲ್ಲಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲು ಸಿದ್ಧತೆ ಮಾಡಿಕೊಳ್ಳಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.