ಕೊರೊನಾ: ಸಂಚಾರಿ ಗಂಟಲು ದ್ರವ ಸಂಗ್ರಹ ಕೇಂದ್ರಕ್ಕೆ ಚಾಲನೆ
ಧಾರವಾಡ, ಏಪ್ರಿಲ್ 24: ಕೊರೊನಾ ನಿಯಂತ್ರಣಕ್ಕೆ ಗಂಟಲುದ್ರವ ಮಾದರಿಗಳನ್ನು ಹೆಚ್ಚು ಸಂಖ್ಯೆಯಲ್ಲಿ ಪರೀಕ್ಷೆಗೆ ಒಳಪಡಿಸುವ ಕ್ರಮಕ್ಕೆ ಧಾರವಾಡ ಜಿಲ್ಲಾಡಳಿತ ಮುಂದಾಗಿದೆ.
ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಇಚ್ಛಾಶಕ್ತಿಯೊಂದಿಗೆ ರೂಪಿಸಲಾಗಿರುವ ಸಂಚಾರಿ ಗಂಟಲುದ್ರವ ಸಂಗ್ರಹಣಾ ಕೇಂದ್ರವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಇಂದು ಪರಿಶೀಲಿಸಿ, ಚಾಲನೆ ನೀಡಿದರು.
ಹಿರಿಯ ಪೊಲೀಸ್ ಅಧಿಕಾರಿ ಮುರುಗನ್ ಮೇಲೆ ಗಂಭೀರ ಆರೋಪ
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಈ ಸಂಚಾರಿ ಗಂಟಲುದ್ರವ ಸಂಗ್ರಹಣೆ ಕೇಂದ್ರ ವೀಕ್ಷಿಸಿದ ಸಚಿವರು ಅದರ ಕಾರ್ಯವಿಧಾನ, ಮಾದರಿ ಸಂಗ್ರಹ ಮಾಡಲು ಅನುಸರಿಸುವ ಪದ್ಧತಿಗಳು, ಆರೊಗ್ಯ ಮುಂಜಾಗೃತೆ ಕ್ರಮಗಳು ಮೊದಲಾದ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಸಚಿವರು, ಲಾಕ್ಡೌನ್ ನಿಯಮಗಳಲ್ಲಿ ಕೆಲವು ಸಡಿಲಿಕೆಗಳು ಆಗಿರುವುದರಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಕಂಟೈನ್ಮೆಂಟ್ ವ್ಯಾಪ್ತಿ ಹೊರತುಪಡಿಸಿ ಜಿಲ್ಲೆಯ ಉಳಿದ ಎಲ್ಲಾ ಸ್ಥಳಗಳಲ್ಲಿ ರಸ್ತೆ, ಕಟ್ಟಡ ನಿರ್ಮಾಣ ಕಾಮಗಾರಿಗಳು ಹಾಗೂ ಜಲ್ಲಿಕಲ್ಲು, ಕ್ರಷರ್ ಘಟಕಗಳ ಕಾರ್ಯಾರಂಭಕ್ಕೆ ಅವಕಾಶವಾಗಿದೆ. ಗ್ರಾಮೀಣ ಭಾಗದಲ್ಲಿ ಕೈಗಾರಿಕೆಗಳನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಪ್ರಾರಂಭಿಸಬಹುದು. ಜಿಲ್ಲಾಡಳಿತ ಈ ಚಟುವಟಿಕೆಗಳಿಗೆ ಆನ್ಲೈನ್ನಲ್ಲಿ ಸರಳವಾಗಿ ಅನುಮತಿ ನೀಡಲಿದೆ ಎಂದರು.
ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ, ಶಂಕರ ಪಾಟೀಲ ಮುನೇನಕೊಪ್ಪ, ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ್, ಶ್ರೀನಿವಾಸ ಮಾನೆ, ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ: ಬಿ.ಸಿ. ಸತೀಶ್, ಉಪಸ್ಥಿತರಿದ್ದರು.