ಎರಡೂ ಉಪಚುನಾವಣೆ ಗೆಲ್ಲುವ ಮೂಲಕ ಸರಕಾರ ಮತ್ತಷ್ಟು ಸುಭದ್ರಗೊಳ್ಳಲಿದೆ: ಎಚ್ ಕೆ ಪಾಟೀಲ
ಕುಂದಗೋಳ, ಮೇ 12 2019: ಕುಂದಗೋಳ ಹಾಗೂ ಚಿಂಚೋಳಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಸರಕಾರವನ್ನು ಮತ್ತಷ್ಟು ಸುಭದ್ರಗೊಳಿಸಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಹೆಚ್ ಕೆ ಪಾಟೀಲ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕುಂದಗೋಳ ಉಪಚುನಾವಣೆಯಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳುತ್ತಿರುವ ಅವರು ಇಂದು ಕೂಡಾ ಪಶುಪತಿಹಾಳ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಪಶುಪತಿಹಾಳ ಗ್ರಾಮದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ಉಪಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಈ ಮೂಲಕ ರಾಜ್ಯ ಸರಕಾರ ಮತ್ತಷ್ಟು ಸುಭದ್ರಗೊಳ್ಳಲಿದೆ ಎಂದು ಹೇಳಿದರು.
ಮೇ 23ರ ನಂತರ ಕಾಂಗ್ರೆಸ್ 4 ಹೋಳು: ಬಾಬುರಾವ್ ಚಿಂಚನಸೂರ್
ಕಾಂಗ್ರೆಸ್ ನೇತೃತ್ವದ ಸರಕಾರ ರಾಜ್ಯದ ಹಾಗೂ ದೇಶದ ಅಭಿವೃದ್ದಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಗರೀಬಿ ಹಠಾವೋ, 20 ಅಂಶಗಳ ಕಾರ್ಯಕ್ರಮ ಇತ್ತೀಚಿನ ನ್ಯಾಯ್ ಕಾರ್ಯಕ್ರಮ ಎಲ್ಲವೂ ದೇಶದಲ್ಲಿ ಮಹತ್ತರ ಬದಲಾವಣೆ ತರುವಂತಹ ಕಾರ್ಯಕ್ರಮಗಳಾಗಿವೆ.
ಸಿದ್ದರಾಮಯ್ಯ ನೇತೃತ್ವದ ಸರಕಾರದ ಯೋಜನೆಗಳು
ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರಕಾರ ನೀಡಿದ ಅನ್ನಭಾಗ್ಯ, ಶೌಚಾಲಯ ನಿರ್ಮಾಣ ಯೋಜನೆ ಎಲ್ಲವೂ ಕೂಡಾ ಗ್ರಾಮೀಣ ಮಟ್ಟದ ಜನರ ಜೀವನ ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದರು.
ನದಿ ಮೂಲದಿಂದ ಜನರಿಗೆ ಕುಡಿಯುವ ನೀರು ಸರಬರಾಜು
ಕುಂದಗೋಳ ತಾಲ್ಲೂಕು ಹಾಗೂ ಧಾರವಾಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಬಹಳ ತೊಂದರೆ ಇರುವುದನ್ನು ಬಹಳಷ್ಟು ಜನರು ನನ್ನ ಗಮನಕ್ಕೆ ತಂದಿದ್ದಾರೆ. ಗದಗ ಜಿಲ್ಲೆಯಲ್ಲಿ ಕೈಗೊಂಡಿರುವಂತೆ ನದಿ ಮೂಲದಿಂದ ಜನರಿಗೆ ಕುಡಿಯುವ ನೀರು ಸರಬರಾಜು ಯೋಜನೆಯ ರೀತಿಯಲ್ಲಿಯೇ ಧಾರವಾಡ ಜಿಲ್ಲೆಯಲ್ಲಿಯೂ ಹೊಸ ಯೋಜನೆಯನ್ನು ಪ್ರಾರಂಭಿಸುವ ಭರವಸೆಯನ್ನು ನೀಡಿದರು.
ರಕ್ತರಹಿತ ರಾಜಕೀಯ ಮೌನ ಕ್ರಾಂತಿ
ಗ್ರಾಮಪಂಚಾಯ್ತಿ ಚುನಾವಣೆಗಳಲ್ಲಿ ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನರೂ ಕೂಡಾ ಭಾಗವಹಿಸುವಂತಹ ಕ್ರಾಂತಿಕಾರಕ ಕಾರ್ಯಕ್ರಮಗಳನ್ನು ನೀಡಿದ್ದು ಕಾಂಗ್ರೆಸ್ ಪಕ್ಷ. ರಕ್ತರಹಿತ ರಾಜಕೀಯ ಮೌನ ಕ್ರಾಂತಿಯನ್ನು ಹಾಗೂ ಶಾಸನಗಳನ್ನು ಕಾಂಗ್ರೆಸ್ ಪಕ್ಷ ಜಾರಿಗೆ ತಂದಿದೆ.
ಅಭ್ಯರ್ಥಿಯನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕಾಗಿದೆ
ರಾಜೀವ್ ಗಾಂಧಿ ಅವರ ಕಾಲದಲ್ಲಿ ಜಾರಿಗೊಂಡ ಶಾಸನಗಳು ಇಂದು ಹಲವಾರು ಕೆಳಸ್ತರದ ಜನರು ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದೆ. ದೇಶದ ಕೆಳಸ್ತರದ ಜನರ ಅಭಿವೃದ್ದಿಗಾಗಿ ಶ್ರಮಿಸುವುದು ಕಾಂಗ್ರೆಸ್ ಪಕ್ಷದ ಮೂಲಗುರಿ. ಇಂತಹ ಮೂಲ ಅಂಶಗಳ ಮೇಲೆ ಆಡಳಿತ ನೀಡುತ್ತಿರುವ ಪಕ್ಷದ ಅಭ್ಯರ್ಥಿಯನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕಾಗಿದೆ ಎಂದರು