ಹುಬ್ಬಳ್ಳಿಗೆ ಸ್ಮಾರ್ಟ್ ಸಿಟಿ ಕೈತಪ್ಪಲು ಪ್ರಹ್ಲಾದ್ ಜೋಶಿಯೇ ಕಾರಣ
ಹುಬ್ಬಳ್ಳಿ, ಫೆಬ್ರವರಿ,01: ಹುಬ್ಬಳ್ಳಿ-ಧಾರವಾಡ ಅವಳಿ ನಗರವು ಸ್ಮಾರ್ಟ್ ಸಿಟಿಯ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆಯದಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿಯ ಕುತಂತ್ರವೇ ಕಾರಣ ಎಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಮಾತನಾಡಿ, ಅವಳಿ ನಗರದ ಜನತೆಯ ಕನಸು ಬಿಜೆಪಿ ಹೊಲಸು ರಾಜಕೀಯದಿಂದ ನುಚ್ಚು ನೂರಾಗಿದೆ. ಕಳಸಾ-ಬಂಡೂರಿ ವಿಷಯದಲ್ಲಿಯೂ ಬಿಜೆಪಿ ಕೀಳು ರಾಜಕೀಯ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಗೋವಾ, ಮಹಾರಾಷ್ಟ್ರ ಹಾಗೂ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು ಬಿಕ್ಕಟ್ಟನ್ನು ಬಗೆಹರಿಸುತ್ತಿಲ್ಲ ಎಂದು ದೂರಿದರು.[20 ಸ್ಮಾರ್ಟ್ ಸಿಟಿಗಳ ಮೊದಲ ಪಟ್ಟಿಯಲ್ಲಿ ದಾವಣಗೆರೆ, ಬೆಳಗಾವಿ]
ನಗರದ ಅಂಚೆ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ತಹಸೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಬಳಿಕ ಪ್ರಧಾನಿ ಮೋದಿ, ಜಗದೀಶ ಶೆಟ್ಟರ್, ಪ್ರಹ್ಲಾದ ಜೋಶಿ ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಸುಧಾ ದೊರೈರಾಜ ಮಣಿಕುಂಟ್ಲ, ಪ್ರಕಾಶ ಕ್ಯಾರಕಟ್ಟಿ, ಮೋಹನ ಹಿರೇಮನಿ, ಪಾರಸಮಲ್ ಜೈನ್, ರಾಜಶೇಖರ ಮೆಣಸಿನಕಾಯಿ, ಮೋಹನ ಅಸುಂಡಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.[ವಿಧಾನಪರಿಷತ್ ಚುನಾವಣೆ ಟಿಕೆಟ್ ಕೊಡೋಕೆ ಹಣ ಬೇಡಿಕೆ ಇಟ್ಟಿದ್ರಾ ಜೋಶಿ?]
ಹುಬ್ಬಳ್ಳಿ: 220 ಬಾಲಕಿಯರ ನೃತ್ಯೋತ್ಸವ, ಮನಗೆದ್ದ ಏಕನೃತ್ಯ
ಹುಬ್ಬಳ್ಳಿ,ಫೆಬ್ರವರಿ, 01: ಒಂದೇ ವೇದಿಕೆ, ನಾನಾ ನೃತ್ಯಗಳು, 220 ಬಾಲಕಿಯರು, ಮೃದಂಗ, ಕೊಳಲು, ವಯೋಲಿನ್ ಹೀಗೆ ಹಲವು ಸಂಗೀತ ವಾದ್ಯಗಳ ಸಮಾಗಮ ಈ ಎಲ್ಲಾ ಸುಂದರ ಕ್ಷಣಗಳು ಕಂಡು ಬಂದದ್ದು, ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ಸಾಂಸ್ಕೃತಿಕ ಸಮಾರಂಭದಲ್ಲಿ.
ಸಾಂಸ್ಕೃತಿಕ ಸಮಾರಂಭವನ್ನು ಹುಬ್ಬಳ್ಳಿ ಧಾರವಾಡ ಮಹಾಪೌರ ಅಶ್ವಿನಿ ಮಜ್ಜಿಗಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಆಂಗಿಕಂ ಮತ್ತು ಶಿವಶ್ಲೋಕದಿಂದ ಆರಂಭವಾದ ಪ್ರದರ್ಶನ ಕೃತಿ ಪುಷ್ಪಾಂಜಲಿ, ಆನಂದಂ ನರ್ತನಂ ಮತ್ತು ವೆಂಕಟರಮಣನೇ ಬಾರೋ ನೃತ್ಯ ಹೀಗೆ ನಾನಾ ನೃತ್ಯಗಳು ಪ್ರದರ್ಶನಗೊಂಡವು.
ಸುಮಾರು 45 ನಿಮಿಷಗಳ ಕಾಲ ನಡೆದ ಏಕನೃತ್ಯ ವಿಶಿಷ್ಟವಾಗಿದ್ದು, ಎಲ್ಲರ ಮನ ಸೆಳೆಯಿತು. ನಾಟ್ಯ ವಿದುಷಿ ವನಿತಾ ಮಹಾಲೆ ಈ ಎಲ್ಲ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದು, ಪಂಚಮ ಉಪಾಧ್ಯಾಯ ಮೃದಂಗ, ಶಂಕರ ಕಬಾರಿ ವಯೋಲಿನ್, ವೈಭವ ಭಟ್ ಕೊಳಲು ಸಾಥ್ ನೀಡಿದರು. ಕಿರಣ ಮತ್ತು ಕೃತಿಕಾ ಮಹಾಲೆ ಪ್ರಸಾಧನ ನಿರ್ವಹಿಸಿದ್ದರು.[ಹೆಣ್ಣುಮಕ್ಕಳ ಕಲಾವಂತಿಕೆಗೆ ಸಾಕ್ಷಿಯಾದ ಗಣರಾಜ್ಯೋತ್ಸವ]