ಧಾರವಾಡ ಕಟ್ಟಡ ಕುಸಿತ : 72 ಗಂಟೆ ಕಾರ್ಯಾಚರಣೆ, 15 ಸಾವು
ಧಾರವಾಡ, ಮಾರ್ಚ್ 23 : ಧಾರವಾಡದಲ್ಲಿ ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಕುಸಿದು ಬಿದ್ದ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. 72 ಗಂಟೆಗಳಿಂದ ನಿಂತರವಾಗಿ ಕಾರ್ಯಾಚರಣೆ ನಡೆಯುತ್ತಿದೆ.
ಮಾರ್ಚ್ 19ರ ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಹೊಸ ನಿಲ್ದಾಣದ ಸಮೀಪ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿತ್ತು. ಅವಶೇಷಗಳ ಅಡಿಯಿಂದ 40ಕ್ಕೂ ಅಧಿಕ ಜನರನ್ನು ರಕ್ಷಣೆ ಮಾಡಲಾಗಿದೆ. ದುರಂತದಲ್ಲಿ 15 ಜನರು ಸಾವನ್ನಪ್ಪಿದ್ದಾರೆ.
ನಮ್ಮಿಬ್ಬರನ್ನೂ ಕಾಪಾಡಿ ಅವಶೇಷಗಳಡಿಯಿಂದ ದಂಪತಿ ಕೂಗು
ಅವಶೇಷಗಳಡಿ 60 ಗಂಟೆಗಳ ಕಾಲ ಸಿಲುಕಿದ್ದ ದಿಲೀಪ್ ಮತ್ತು ಸಂಗೀತಾ ದಂಪತಿಯನ್ನು ಶುಕ್ರವಾರ ಎನ್ಡಿಆರ್ಫ್ ಪಡೆ ರಕ್ಷಣೆ ಮಾಡಿದೆ. ಸಂಗೀತಾ ಅವರ ಕಾಲು ಮುರಿದಿದ್ದು, ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಮಗಳಿಗೆ ಧೈರ್ಯ ಹೇಳುತ್ತಾ 34 ಗಂಟೆ ಶವದ ಜೊತೆ ಕಳೆದ ತಾಯಿ
ಉಳ್ಳಿಗೇರಿ ಗ್ರಾಮದ ನಿವಾಸಿಯಾದ ಸೋಮನಗೌಡ ಎಂಬುವವರು ನಾಲ್ಕು ದಿನಗಳ ಬಳಿಕ ಸಾವನ್ನು ಗೆದ್ದು ಬಂದಿದ್ದಾರೆ. ಎನ್ಡಿಆರ್ಎಫ್, ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.....
ಧಾರವಾಡದಲ್ಲಿ ಸಾವನ್ನೇ ಗೆದ್ದುಬಂದ ಅವಶೇಷಗಳಡಿ ಸಿಲುಕಿದ್ದ ದಂಪತಿ
ಮಗಳನ್ನು ಕಳೆದುಕೊಂಡ ತಾಯಿ
ಕಟ್ಟಡ ಕುಸಿತದ ಅವಶೇಷಗಳಡಿ 36 ತಾಸು ಸಾವು ಬದುಕಿನ ನಡುವೆ ಹೋರಾಡಿದ ಮಹಿಳೆಗೆ ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೌದು, ಧಾರವಾಡದ ಶಿವಾನಂದನಗರದ ನಿವಾಸಿ ಪ್ರೇಮಾ ಉಣಕಲ್ ಅವರನ್ನು ರಕ್ಷಣೆ ಮಾಡಲಾಗಿದೆ. ಆದರೆ, ಮಗಳು ದಿವ್ಯಾ ಉಣಕಲ್ (8) ದುರಂತದಲ್ಲಿ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ರಾಜಕುಮಾರ ಖತ್ರಿ ಅವರು ಕಟ್ಟಡ ಕುಸಿತಗೊಂಡಿರುವ ಸ್ಥಳಕ್ಕೆ ಹಾಗೂ ಗಾಯಾಳುಗಳು ದಾಖಲಾಗಿರುವ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಟ್ಟಡ ಕುಸಿತ ಸ್ಥಳಕ್ಕೆ ಭೇಟಿ ನೀಡಿದ ಅವರು, ಪರಿಹಾರ ಕಾರ್ಯ ಹಾಗೂ ಕುಸಿದ ಕಟ್ಟಡ ತೆರವು ಕಾರ್ಯ ಪರಿಶೀಲಿಸಿದರು. ಮತ್ತು ಕಟ್ಟಡದಲ್ಲಿ ಸಿಲುಕಿರುವ ಕುಟುಂಬ ಸದಸ್ಯರನ್ನು ಸ್ಥಳದಲ್ಲಿ ಭೇಟಿ ಮಾಡಿ, ಸಾಂತ್ವನ ಹೇಳಿದರು.
2 ಲಕ್ಷ ಪರಿಹಾರ ವಿತರಣೆ
ಧಾರವಾಡ ತಹಶಿಲ್ದಾರ್ ಪ್ರಕಾಶ ಕುದರಿ ಅವರು ಪಾವಟೆನಗರ ನಿವಾಸಿಗಳಾಗಿದ್ದ ಮೃತ ಆಶಿತ್ ಹಿರೇಮಠ ಹಾಗೂ ಮಹೇಶ್ವರಯ್ಯ ಹಿರೇಮಠ ಅವರ ಮನೆಗೆ ಹಾಗೂ ಶಿವಾನಂದ ನಗರದ ಮೃತ ದಿವ್ಯಾ ಉಣಕಲ್ ಅವರ ಮನೆಗೆ ತೆರಳಿ 2 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಿದರು.
ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
ಕಟ್ಟಡದ ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಶಂಕೆ ಇದೆ. ಎನ್ಡಿಆರ್ಎಫ್ ಸಿಬ್ಬಂದಿ ಅವಶೇಷಗಳಡಿ ದುರ್ವಾಸನೆ ಬರುತ್ತಿದೆ ಎಂದು ಹೇಳುತ್ತಿದ್ದಾರೆ. ಕಟ್ಟಡದ ಇಂಜಿನಿಯರ್ ವಿವೇಕ ಪವಾರ್ ಎಂಬಾತನನ್ನು ಬಂಧಿಸಲಾಗಿದೆ. ಸ್ಥಳಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುರುವಾರ ಭೇಟಿ ನೀಡಿದ್ದರು.