ಐಜಿಪಿ ಹೇಮಂತ್ ನಿಂಬಾಳ್ಕರ್ ಒಬ್ಬ ಕಾಂಗ್ರೆಸ್ ಕಾರ್ಯಕರ್ತ: ಶೆಟ್ಟರ್
ಧಾರವಾಡ, ಡಿಸೆಂಬರ್ 13 : ಕೋಮು ವೈಷಮ್ಯಕ್ಕೆ ಬಲಿಯಾದ ಹೊನ್ನಾವರದ ಪರೇಶ್ ಮೇಸ್ತ ಮರಣೋತ್ತರ ಪರೀಕ್ಷೆ ವೇಳೆ ವೈದ್ಯರಿಗೆ ಸ್ವಾತಂತ್ರ್ಯ ಕೊಡದೆ ಕೇವಲ ಎಸ್ ಆರ್ ನೋ ಪ್ರಶ್ನೆ ಕೇಳಿರುವುದು ಸರಿಯಲ್ಲ ಎಂದು ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಗೃಹ ಇಲಾಖೆ ನಿಯಂತ್ರಣ ತಪ್ಪಿ ವರ್ತಿಸುತ್ತಿದೆ, ಗೃಹ ಇಲಾಖೆಯಲ್ಲಿ ಎಲ್ಲರೂ ಸಲಹೆಗಾರ ಕೆಂಪಯ್ಯ ಅವರ ಮಾತನ್ನು ಮಾತ್ರ ಪಾಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ನಂ 2 ಪಟ್ಟವನ್ನ ಕೋಮು ಗಲಭೆಯಲ್ಲಿ ಪಡೆದಿದೆ ಎಂದು ಅವರು ದೂರಿದರು.
ಶಿರಸಿ ಗಲಭೆಯಲ್ಲಿ ಬಂಧಿತರಾದವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ ಅವರು ಬಿಜೆಪಿ 63 ಜನರನ್ನು ಶಿರಸಿಯಲ್ಲಿ ಬಂಧಿಸಿದ್ದಾರೆ. ಇವರ ಮೇಲೆ 307 ಅಡಿಯಲ್ಲಿ ಕೇಸ್ ಹಾಕಿ ಅಪರಾಧಿಗಳು ಎನ್ನುವುದು ಸರಿಯಲ್ಲ, ಕೂಡಲೇ ಅವರನ್ನೆಲ್ಲಾ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಐಜಿಪಿ ಹೇಮಂತ್ ನಿಂಬಾಳ್ಕರ್ ಕಾಂಗ್ರೆಸ್ ಪಕ್ಷದ ಪರವಾಗಿ ನಿಂತಿದ್ದಾರೆ. ಖಾನಾಪುರದಲ್ಲಿ ಪತ್ನಿಗೆ ಚುನಾವಣೆ ಟಿಕೆಟ್ ಕೊಡಿಸುವ ಸಲುವಾಗಿ ಕಾಂಗ್ರೆಸ್ ನಾಯಕರ ಬೆನ್ನು ಬಿದ್ದಿದ್ದಾರೆ ಎಂದು ಆರೋಪಿಸಿದ ಅವರು ಐಜಿಪಿ ಹೇಮಂತ್ ನಿಂಬಾಳ್ಕರ್ ಗಲಭೆಯನ್ನು ಸರಿಯಾಗಿ ನಿಭಾಯಿಸಲಿಲ್ಲ, ಶಾಂತಿ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.
ನಂತರ ಮಾತನಾಡಿದ ಸಂಸದ ಪ್ರಹ್ಲಾದ ಜೋಶಿ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕದ ಹಿಂದೂ ಮುಖಂಡರ ಹತ್ಯೆ ಬಗ್ಗೆ ಚರ್ಚೆ ಮಾಡುತ್ತೇನೆ. ಇದಕ್ಕೆಲ್ಲ ಸಿಎಂ ಸಿದ್ದರಾಮಯ್ಯ ಅವರ ಕುಮ್ಮಕ್ಕು ಇದೆ. 63 ಮಂದಿ ಬಿಜೆಪಿ ಕಾರ್ಯಕರ್ತರ ಬಂಧಿಸಿದ್ದು ಸರಿಯಲ್ಲ. ಕಾಲೇಜು ಹುಡುಗರನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ' ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರವು ವಿರೋಧ ಪಕ್ಷದವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ, ರಾಜ್ಯದಲ್ಲಿ ಮುಸ್ಲಿಂ ಮತದಾರರ ತುಷ್ಠೀಕರಣ ಮಾಡುವ ಸಲುವಾಗಿ ಕಾಂಗ್ರೆಸ್ ಸರ್ಕಾರ ಇದನ್ನೆಲ್ಲ ಮಾಡುತ್ತಿದೆ. ಪಾಕಿಸ್ತಾನ ಪರ ಹೇಳಿಕೆ ಕೊಟ್ಟಿದ್ದ ಮೌಲ್ವಿಯನ್ನ ಬಂಧಿಸಿ ಬಿಡುಗಡೆ ಮಾಡಿದ್ದಾರೆ ಆದರೆ ನ್ಯಾಯ ಕೇಳಿದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಪರೇಶ ಸಾವು ಐಸಿಸ್ ಮಾದರಿಯಲ್ಲಿ ಆಗಿದ್ದು ಈ ಬಗ್ಗೆ ಎನ್ಐಎ ತನಿಖೆ ಆಗಬೇಕು ಎಂದ ಅವರು ಐಜಿಪಿ ನಿಂಬಾಳ್ಕರ್ ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸುತ್ತಿದ್ದು ಅವರನ್ನು ಮೊದಲು ಕೆಲಸದಿಂದ ಕಿತ್ತು ಹಾಕಬೇಕು ಎಂದು ಹೇಳಿದರು.