ಧಾರವಾಡ: ವೃದ್ಧ ಅಪ್ಪನನ್ನು ರಸ್ತೆಯಲ್ಲಿ ಬಿಟ್ಟು ಹೋದ ನಿರ್ದಯಿ ಮಗ
ಧಾರವಾಡ, ಅಕ್ಟೋಬರ್ 27: ವೃದ್ಧ ಅಪ್ಪನನ್ನು ಸಾಕಲಾಗದ ಮಗನೊಬ್ಬ ಅಪ್ಪನನ್ನು ಮನೆಯಿಂದ ದೂರ ಕರೆದುಕೊಂಡು ಹೋಗಿ ನಡು ರಸ್ತೆಯಲ್ಲೇ ಬಿಟ್ಟು ಬಂದಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಹೊರವಲಯದ ಗರಗ ಎಂಬಲ್ಲಿ ವೃದ್ಧನನ್ನು ಕಾರಿನಿಂದ ಇಳಿಸಿ, ವೇಗವಾಗಿ ಕಾರು ಚಲಾಯಿಸಿಕೊಂಡು ಹೊರಟು ಹೋಗಿದ್ದನ್ನು ಸ್ಥಳೀಯರು ನೋಡಿದ್ದಾರೆ. ಯಾರೋ ವೃದ್ಧ ಡ್ರಾಪ್ ತೆಗೆದುಕೊಂಡಿರಬೇಕು ಎಂದುಕೊಂಡಿದ್ದಾರೆ ಆದರೆ ಯಾವಾಗ ವೃದ್ಧ ದಾರಿ ತಿಳಿಯದೇ ಒದ್ದಾಡುತ್ತಿದ್ದರೋ ಆಗ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ವೃದ್ಧನನ್ನು ಕರೆದುಕೊಂಡು ಹೋಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಿದ ಪೊಲೀಸರು ಆತನನ್ನು ವಿಚಾರಿಸಿದಾಗ, ವೃದ್ಧನ ಹೆಸರು ವಿನ್ಸೆಟ್ ಚರ್ಚಿಲ್ ಎಂದೂ ಆತ ಬೆಂಗಳೂರಿನ ಮತ್ತಿಕೆರೆಯವನೆಂದು ಗೊತ್ತಾಗಿದೆ. ಅಲ್ಲದೆ ಆತನ ಮಗನೇ ಆತನನ್ನು ನಡು ರಸ್ತೆಯಲ್ಲಿ ಬಿಟ್ಟುಹೋಗಿದ್ದಾಗ್ಯೂ ವೃದ್ಧ ವಿನ್ಸೆಟ್ ಹೇಳಿಕೊಂಡಿದ್ದಾರೆ.
ವಿನ್ಸೆಟ್ ಅವರನ್ನು ತಪಾಸಣೆ ಮಾಡಿದ ವೈದ್ಯರು ವಿನ್ಸೆಟ್ಗೆ ಅಲ್ಜೈಮರ್ (ಮರೆವಿನ ಖಾಯಿಲೆ) ಯಿಂದ ಬಳಲುತ್ತಿರುವುದು ಗೊತ್ತಾಗಿದೆ. ಆದರೆ ವಿನ್ಸೆಟ್ಗೆ ಸಾಮಾನ್ಯ ಸಂಗತಿಗಳಾದ, ಹೆಸರು, ವಿಳಾಸ ಇನ್ನಿತರೆ ವಿಷಯಗಳ ನೆನಪಿದೆ.
ಪ್ರಸ್ತುತ ವಿನ್ಸೆಟ್ ಆಸ್ಪತ್ರೆಯ ಬಳಿ ಇರುವ ಅನಾಥಾಶ್ರಮದಲ್ಲಿ ಇದ್ದಾರೆ. ಆದರೆ ಅವರು ಮನೆಗೆ ವಾಪಸ್ ಹೋಗಲು ಚಡಪಡಿಸುತ್ತಿದ್ದಾರೆ. ಮನೆಗೆ ಅಲ್ಲದಿದ್ದರೆ ಕನಿಷ್ಟ ಸಮೀಪದ ಕ್ಯಾಥೊಲಿಕ್ ಚರ್ಚಾಗದರೂ ನನ್ನನ್ನು ಬಿಡಿ ಅಲ್ಲೇ ಇರುತ್ತೇನೆ ಎಂದು ಅನಾಥಾಶ್ರಮದ ಸಿಬ್ಬಂದಿ ಬಳಿ ನಿನ್ಸೆಟ್ ಅಂಗಲಾಚುತ್ತಿದ್ದಾರೆ.
ಮಾನವೀಯ ಆಯಾಮದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಧಾರವಾಡ ಉಪನಗರ ಠಾಣೆ ಇನ್ಸ್ಪೆಕ್ಟರ್ ಬಸಪುರ ಅವರು ವಿನ್ಸೆಟ್ ಅವರ ಸಂಬಂಧಿಗಳ ಹುಡುಕಾಟಕ್ಕಾಗಿ ಮತ್ತಿಕೆರೆ ಠಾಣೆಗೆ ಮನವಿ ಮಾಡಿದ್ದಾರೆ.