"ಪಕ್ಷಾಂತರ ಕಾಯ್ದೆ ಇದ್ರೇನು, ಬಿಟ್ರೇನು": ಬಸವರಾಜ್ ಹೊರಟ್ಟಿ
ಧಾರವಾಡ, ನವೆಂಬರ್ 18: "ಇವತ್ತಿನ ರಾಜಕೀಯ ಪರಿಸ್ಥಿತಿ ನೋಡಿದರೆ ಎಲ್ಲವೂ ನಡೆಯುತ್ತದೆ ಎಂದೆನಿಸುತ್ತದೆ. ಪಕ್ಷಾಂತರ ಕಾಯ್ದೆ ಇದ್ರೇನು, ಬಿಟ್ರೇನು, ಯಾರು ಎಲ್ಲಿಗೆ ಬೇಕಾದರೂ ಹೋಗಬಹುದು" ಎಂದಿದ್ದಾರೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ.
ನಗರದಲ್ಲಿ 66ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, "ರಾಜಕೀಯದಲ್ಲಿ ನೈತಿಕತೆ ಎಂಬುದು ಯಾವ ಪಕ್ಷದಲ್ಲೂ ಇಲ್ಲ, ನಮ್ಮ ಶಾಸಕರು ಎಲ್ಲಿ ಬೇಕಾದರೂ ಹೋಗಬಹುದು, ಬರಬಹುದು. ಮೂರು ಪಕ್ಷದಲ್ಲಿ ಆಂತರಿಕ ಕಲಹ ಜೋರಾಗಿಯೇ ಇದೆ" ಎಂದು ತಿಳಿಸಿದರು.
ಜೆಡಿಎಸ್ ಅಸಮಾಧಾನಿತ ನಾಯಕರ ಸಭೆ ರದ್ದು; ಹೊರಟ್ಟಿ ಹೇಳಿದ್ದೇನು?
ವಿಶ್ವನಾಥ್ ಅವರನ್ನು ಸೋಲಿಸಲು ದೇವೇಗೌಡರ ತಂತ್ರ ವಿಚಾರದ ಬಗ್ಗೆ ಮಾತನಾಡಿದ ಅವರು, "ನಮ್ಮ ಪಕ್ಷಕ್ಕೆ ಬಂದರು, ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದೆವು. ಅವರನ್ನು ಸೋಲಿಸುವ ವಿಚಾರ ದೇವೇಗೌಡರ ತಲೆಯಲ್ಲಿದೆ. ಕುಮಾರಸ್ವಾಮಿ ಅವರು ನಾವು ಸರ್ಕಾರ ಬೀಳಲು ಅವಕಾಶ ಕೊಡುವುದಿಲ್ಲ, ದೇವೇಗೌಡರು ಇಂದಿನ ಪರಿಸ್ಥಿತಿಯಲ್ಲಿ ಇದ್ದ ಸರ್ಕಾರವನ್ನು ಕೆಡವದೆ ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳಿದ್ದಾರೆ" ಎಂದರು.
"ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ. ಆಂತರಿಕ ಕಲಹಗಳನ್ನು ಸರಿಪಡಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಸೇರಿದಂತೆ ಎಲ್ಲ ಪಕ್ಷದವರು ಅನುಕೂಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕ್ಕೊಳ್ಳುತ್ತಾರೆ" ಎಂದು ತಿಳಿಸಿದರು.