ಸರಕಾರದಿಂದ ಯಾವ ಜಯಂತಿಯೂ ಮಾಡಬಾರದು ಎಂದ ರಾಮಚಂದ್ರ ಗುಹಾ
ಧಾರವಾಡ, ಜನವರಿ 19 : ರಾಜ್ಯ ಸರಕಾರದ ಹಣದಲ್ಲಿ ಯಾವುದೇ ಜಯಂತಿ ಮಾಡಲೇಬಾರದು. ಅದು ಟಿಪ್ಪು ಜಯಂತಿ ಇರಲಿ, ಹನುಮಾನ್ ಜಯಂತಿ ಇರಲಿ ಯಾವುದನ್ನೂ ಸರಕಾರ ಮಾಡಬಾರದು ಎಂದು ಇತಿಹಾಸಕಾರ- ಲೇಖಕ ರಾಮಚಂದ್ರ ಗುಹಾ ಶುಕ್ರವಾರ ಇಲ್ಲಿ ಅಭಿಪ್ರಾಯಪಟ್ಟರು.
ಗೌರಿ ಹತ್ಯೆ ಬಗ್ಗೆ ಹೇಳಿಕೆ ಇತಿಹಾಸಕಾರ ಗುಹಾ ವಿರುದ್ಧ ಕೇಸು ದಾಖಲಿಸಿದ ಬಿಜೆಪಿ
ಧಾರವಾಡದಲ್ಲಿ ನಡೆಯುತ್ತಿರುವ ಸಾಹಿತ್ಯ ಸಂಭ್ರಮದಲ್ಲಿ 'ಇತಿಹಾಸ ಮತ್ತು ಅಂಧಾಭಿಮಾನ' ಕುರಿತು ಉಪನ್ಯಾಸ ನೀಡಿದ ಅವರು, ಶ್ರಿರಂಗಪಟ್ಟಣದ ಸುತ್ತಮುತ್ತಲಿನ ಜನರು ಬೇಕಾದರೆ ಟಿಪ್ಪು ಜಯಂತಿ ಮಾಡಲಿ. ಯಾವುದಾದರೂ ಸಂಘದ ಶಾಖೆಯಿಂದ ಬೇಕಾದರೆ ಜಯಂತಿ ಆಚರಿಸಲಿ. ಆದರೆ ಸರಕಾರದ ಹಣದಲ್ಲಿ ಜಯಂತಿಗಳನ್ನು ಆಚರಿಸುವುದು ಸರಿಯಲ್ಲ ಎಂದು ಅವರು ಹೇಳಿದರು.
ಇತಿಹಾಸಕಾರರು ಭಗವದ್ಗೀತೆ, ಕುರ್ ಆನ್, ಬೈಬಲ್, ವೇದ ಓದಬೇಕಾಗಿಲ್ಲ. ಗಾಂಧಿ, ಅಂಬೇಡ್ಕರ್, ನೆಹರೂ ಟಾಗೋರ್ ರನ್ನು ಓದಬೇಕು ಎಂದು ಅವರು ಹೇಳಿದರು. ರಾಜ್ಯ ಸರಕಾರವು ನವೆಂಬರ್ ಹತ್ತನೇ ತಾರೀಕು ಟಿಪ್ಪು ಸುಲ್ತಾನ ಜಯಂತಿ ಆಚರಿಸಲು ತೀರ್ಮಾನಿಸಿದೆ. ಈ ಬಗ್ಗೆ ಪರ- ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿವೆ.