ಧಾರವಾಡದಲ್ಲಿ ಕಾಲೇಜು ಸಂಸ್ಥಾಪಕನಿಂದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಕಿರುಕುಳ ಆರೋಪ
ಧಾರವಾಡ, ಆಗಸ್ಟ್, 17: ಧಾರವಾಡದಲ್ಲಿ ಕಾಲೇಜು ಸಂಸ್ಥಾಪಕನೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ನಿತ್ಯ ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಧಾರವಾಡದ ಸಪ್ತಪುರದಲ್ಲಿರುವ ವಿಶ್ವೇಶ್ವರಯ್ಯ ವಿಜ್ಞಾನ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಕಾಲೇಜು ಸಂಸ್ಥಾಪಕ ಬಸವರಾಜ ಪಿಯು ಕಾಲೇಜಿನ 8 ರಿಂದ 10 ಮಂದಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ. ಅಲ್ಲದೇ ಶಿಕ್ಷಣ ಸಂಸ್ಥೆಯ ಬಸವರಾಜ ಯಡವನ್ನವರ ವಿದ್ಯಾರ್ಥಿನಿಯರಿಗೆ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ, ನೊಂದ ವಿದ್ಯಾರ್ಥಿನಿಯರು ಉಪನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಕಿತ್ತೂರು ರಾಣಿ ಚೆನ್ನಮ್ಮ ಆಡಳಿತದ ದೃಶ್ಯವೈಭವ ರಂಗಭೂಮಿಗೆ ತರಲು ಸಜ್ಜಾದ ಧಾರವಾಡ ರಂಗಾಯಣ
ಮಧ್ಯರಾತ್ರಿ 1 ಗಂಟೆಯ ವೇಳೆಗೆ ವಿದ್ಯಾರ್ಥಿನಿಯರ ಹಾಸ್ಟೆಲ್ಗೆ ಹೋಗಿ ಬಸವರಾಜ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಗಭೀರ ಆರೋಪಗಳು ಕೇಳಿಬರುತ್ತಿವೆ. ವಿದ್ಯಾರ್ಥಿನಿಯರಿಗೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ, ಗೋವಾ, ದಾಂಡೇಲಿ, ರೆಸಾರ್ಟ್ಗಳಿಗೆ ಕರೆದುಕೊಂಡು ಹೋಗುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ.
ಈ ಬೆನ್ನಲ್ಲೇ ವಿಶ್ವೇಶ್ವರಯ್ಯ ವಿಜ್ಞಾನ ಕಾಲೇಜಿನ ಸಂಸ್ಥಾಪಕ ಬಸವರಾಜ ಅವರ ವಿರುದ್ದ ಉಪನಗರ ಪೋಲಿಸ್ ಠಾಣೆಯಲ್ಲಿ ವಿದ್ಯಾರ್ಥಿನಿಯರು ದೂರು ದಾಖಲಿಸಿದ್ದಾರೆ. ಕಾಲೇಜಿಗೆ ಉಪನಗರ ಪೊಲೀಸರು ಆಗಮಿಸಿದ್ದು, ಸಿಬ್ಬಂದಿ ಬಳಿ ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲದೇ ಕಾಲೇಜಿನ ಹೊರಗಡೆ ವಿದ್ಯಾರ್ಥಿ ಸಂಘದ ಸಂಘಟನೆಗಳು, ವಿದ್ಯಾರ್ಥಿಗಳು ಜಮಾಯಿಸಿದ್ದು, ಕಾಲೇಜು ಸಂಸ್ಥಾಪಕ ಬಸವರಾಜ ಅವರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಇದೀಗ ಕಾಲೇಜಿನ ಆವರಣದಲ್ಲಿ ಪರಿಸ್ಥಿತಿ ಸೂಕ್ಷ್ಮತೆಯಿಂದ ಕೂಡಿದ್ದು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ಕಾಲೇಜಿಗೆ ಹಾಜರಾಗಿಲ್ಲ. ಇಡೀ ಪ್ರಕರಣ ಕುರಿತು ತನಿಖೆ ಮಾಡಬೇಕು. ಯಾರು ತಪ್ಪಿತಸ್ಥರು ಇರುತ್ತಾರೆಯೋ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಅಖಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.