ಕೋವಿಡ್ 2ನೇ ಅಲೆಯಿಂದ ದೂರ ಉಳಿದ ಕರ್ನಾಟಕದ ಈ ಗ್ರಾಮ
ಧಾರವಾಡ, ಜೂನ್ 23: ಭಾರತದಲ್ಲೆಡೆ ಕೋವಿಡ್ ಸೋಂಕು ಶೀಘ್ರವಾಗಿ ಹರಡಿದರೂ, ಧಾರವಾಡ ಜಿಲ್ಲೆಯ ಒಂದು ಹಳ್ಳಿಯು ಶೂನ್ಯ ಕೋವಿಡ್-19 ಪ್ರಕರಣಗಳೊಂದಿಗೆ ಭರವಸೆಯ ದಾರಿದೀಪವನ್ನು ಸಾಬೀತುಪಡಿಸಿದೆ.
ಪರಿಣಾಮಕಾರಿ ಮುಂಜಾಗ್ರತಾ ಕ್ರಮಗಳೊಂದಿಗೆ ಧಾರವಾಡ ಜಿಲ್ಲೆಯ ಅಲ್ಲಾಪುರ ಗ್ರಾಮದಲ್ಲಿ ಕೋವಿಡ್ ಎರಡನೇ ಅಲೆಯ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ.
ಚಿತ್ರಗಳು: ಕೋವಿಡ್-19ರ ಎರಡನೇ ಅಲೆಯಿಂದ ಬಾಧಿಸದ ಕರ್ನಾಟಕದ ಅಲ್ಲಾಪುರ ಗ್ರಾಮ
ಸಾಂಕ್ರಾಮಿಕ ಕೋವಿಡ್ ಸೋಂಕು ಹರಡದಂತೆ ಅಲ್ಲಾಪುರ ಗ್ರಾಮಸ್ಥರು ಅಗತ್ಯ ಮುನ್ನೆಚ್ಚರಿಕೆಗಳನ್ನು ಮೊದಲೇ ತೆಗೆದುಕೊಂಡಿದ್ದರು. ಮತ್ತು ಈ ಕಠಿಣ ಸಮಯದಲ್ಲಿ ಯಾರೂ ಹೊರಹಗಬಾರದೆಂದು ನಿರ್ಧರಿಸಿದ್ದರು. ಗ್ರಾಮಸ್ಥರು ಮಾಸ್ಕ್ಗಳನ್ನು ಕಡ್ಡಾಯವಾಗಿ ಧರಿಸುತ್ತಿದ್ದರು. ಅಲ್ಲದೇ ಗ್ರಾಮಸ್ಥರ ನಡುವೆ ದೈಹಿಕ ಅಂತರ ಕಾಯ್ದುಕೊಂಡು, ಉತ್ತಮ ನೈರ್ಮಲ್ಯವನ್ನು ಕಾಪಾಡಿದ್ದರು.
ಅಲ್ಲಾಪುರ ಗ್ರಾಮದ ಕೋವಿಡ್- 19 ಕಾರ್ಯಪಡೆಯ ಅಧ್ಯಕ್ಷ ಮಲ್ಲಿಕಾರ್ಜುನ್ ರಡ್ಡೇರ್ ಮಾತನಾಡಿ, "ನಮ್ಮ ಗ್ರಾಮದಲ್ಲಿ ಈವರೆಗೆ ಒಂದೇ ಒಂದು ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ. ಗ್ರಾಮದಲ್ಲಿ ಸ್ವಯಂ ಲಾಕ್ಡೌನ್ ವಿಧಿಸಲು, ಎಲ್ಲರಿಗೂ ಮಾಸ್ಕ್ಗಳನ್ನು ವಿತರಿಸಲು ಮತ್ತು ಕೋವಿಡ್ ಮಾರ್ಗಸೂಚಿಗಳ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮಸ್ಥರು ಲಾಕ್ಡೌನ್ ಸವಾಲನ್ನು ತಮ್ಮ ಮೇಲೆ ತೆಗೆದುಕೊಂಡರು,'' ಎಂದು ತಿಳಿಸಿದರು.
"ನನಗೆ ಹೋಟೆಲ್ ಇದೆ. ಆದರೆ, ಕೋವಿಡ್- 19 ಕಾರಣದಿಂದಾಗಿ ನಾನು ಅದನ್ನು ತೆರೆಯಲಿಲ್ಲ. ನಾವು ಅಂತರವನ್ನು ಕಾಯ್ದುಕೊಂಡಿದ್ದೇವೆ ಮತ್ತು ಇನ್ನೊಂದು ಹಳ್ಳಿಗೆ ಸಹ ಭೇಟಿ ನೀಡಲಿಲ್ಲ'' ಎಂದು ಸ್ಥಳೀಯ ಶಿವಲಿಂಗಪ್ಪ ಅಂಗಡಿ ಹೇಳಿದರು.
ಅಲ್ಲಾಪುರ ಗ್ರಾಮ ಪಂಚಾಯಿತಿಯು ಈ ಕೋವಿಡ್ ಸೋಂಕು ಬಗ್ಗೆ ಮತ್ತು ಪ್ರಸ್ತುತವಾಗಿರುವ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ತಮ್ಮನ್ನು ಮತ್ತು ಕುಟುಂಬಗಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿತ್ತು.
ತಮ್ಮ ಜೀವನೋಪಾಯಕ್ಕಾಗಿ ನೆರೆಹೊರೆಯ ಸ್ಥಳಗಳಿಗೆ ಭೇಟಿ ನೀಡುವ ಗ್ರಾಮಸ್ಥರು ಕಟ್ಟುನಿಟ್ಟಾದ ಕೋವಿಡ್- 19 ಮಾರ್ಗಸೂಚಿಗಳನ್ನು ಅನುಸರಿಸಿದ್ದಾರೆ. ಮನೆಗೆ ಹಿಂದಿರುಗಿದಾಗಲೂ ಕೈ ಕಾಲು ತೊಳೆಯುತ್ತಿದ್ದರು ಮತ್ತು ಇನ್ನೂ ಕೆಲವರು ತಮ್ಮ ಮನೆಯ ಹೊರಗೆ ಸ್ನಾನ ಮಾಡಿ ಒಳಗೆ ಹೋಗುತ್ತಿದ್ದರು.
ದೇಶದಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳಿಗೆ ಕಾರಣವಾಗುತ್ತಿರುವ ಅಗ್ರ ಐದು ರಾಜ್ಯಗಳಲ್ಲಿ ಕರ್ನಾಟಕ ಇನ್ನೂ ಸ್ಥಾನ ಪಡೆದಿದೆ. 55 ದಿನಗಳ ಕಟ್ಟುನಿಟ್ಟಿನ ಲಾಕ್ಡೌನ್ ನಿರ್ಬಂಧಗಳ ನಂತರ ರಾಜ್ಯದ 17 ಜಿಲ್ಲೆಗಳಲ್ಲಿ ಸಡಿಲಿಕೆ ಘೋಷಿಸಿದೆ.
Recommended Video
ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೀದರ್, ಬೆಂಗಳೂರು, ಬೆಂಗಳೂರು ಗ್ರಾಮೀಣ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೋಲಾರ, ಕೊಪ್ಪಳ, ಮಂಡ್ಯ, ರಾಯಚೂರು, ರಾಮನಗರ, ಶಿವಮೊಗ್ಗ, ಉಡುಪಿ ಜಿಲ್ಲೆಗಳಲ್ಲಿ ಕೋವಿಡ್ ಕಡಿಮೆ ಪ್ರಕರಣಗಳನ್ನು ವರದಿ ಮಾಡುತ್ತಿವೆ.
ರಾಜ್ಯದಲ್ಲಿ ಇಂದು 4,436 ಕೊರೊನಾ ಸೋಂಕು ಪತ್ತೆಯಾಗಿದ್ದು, ಇಂದು ಗುಣಮುಖರಾದವರ ಸಂಖ್ಯೆ 6,455, ಕೊರೊನಾ ಸೋಂಕಿಗೆ ಇಂದು ಸಾವನ್ನಪ್ಪಿದವರು- 123, ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ- 28,19,465, ಒಟ್ಟು ಸಾವಿನ ಸಂಖ್ಯೆ- 34,287, ಇಲ್ಲಿಯವರೆಗೆ ಒಟ್ಟು 26,68,705 ಸೋಂಕಿತರು ಗುಣಮುಖರಾಗಿದ್ದಾರೆ.