ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ವಿಚಾರದಲ್ಲಿ ಮತ್ತೆ ವಿವಾದ
ಧಾರವಾಡ, ಜನವರಿ 6: ವಿದ್ಯಾಕಾಶಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸದಾ ಒಂದಿಲ್ಲಾ ಒಂದು ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತದೆ. ಹಗರಣ, ಕೆಲವೊಮ್ಮೆ ಅಕ್ರಮ, ಮತ್ತೆ ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಆಗುವ ಅನ್ಯಾಯ-ಹೀಗೆ ಯಾವುದಾದರೂ ಒಂದು ವಿಚಾರವಾಗಿ ಈ ವಿಶ್ವವಿದ್ಯಾಲಯ ವಿವಾದದಲ್ಲಿ ಇದ್ದೇ ಇರುತ್ತದೆ.
ಇಂಥವುಗಳ ನಡುವೆಯೇ ವಿಶ್ವವಿದ್ಯಾಲಯದಲ್ಲಿ ಇದೀಗ ಮತ್ತೊಂದು ವಿವಾದ ಎದ್ದಿದೆ. ಅದು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರ ನೇಮಕ ವಿಚಾರದಲ್ಲಿ.
ಧಾರವಾಡ ವಿವಿಯಲ್ಲಿ ಕೆಲಸ ಖಾಲಿ ಇದೆ; ಅರ್ಜಿ ಹಾಕಿ
ಇತ್ತೀಚಿಗಷ್ಟೇ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಆರು ಜನ ಸಿಂಡಿಕೇಟ್ ಸದಸ್ಯರನ್ನು ನಾಮ ನಿರ್ದೇಶನಗೊಳಿಸಲಾಗಿತ್ತು. ಈ ನಾಮ ನಿರ್ದೇಶನದ ಹಿಂದೆ ರಾಜಕೀಯ ವಾಸನೆ ಇರುವುದನ್ನು ಧಾರವಾಡದ ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಪತ್ತೆ ಹಚ್ಚಿದ್ದಾರೆ.
ಅಲ್ಲದೇ ಇವರ ನಾಮ ನಿರ್ದೇಶನ ಕೂಡ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ-2000 ಸ್ಪಷ್ಟ ಉಲ್ಲಂಘನೆಯಾಗಿದೆ ಅನ್ನುವುದು ನಾಗರಾಜ್ ಅವರ ಆರೋಪವಾಗಿದೆ. ಹೀಗಾಗಿ ಇವರ ನಾಮನಿರ್ದೇಶನವನ್ನೇ ರದ್ದುಪಡಿಸುವಂತೆ ಆಗ್ರಹಿಸಿ ಡಿಸಿಎಂ ಅಶ್ವತ್ಥ್ ನಾರಾಯಣ ಅವರಿಗೆ ನಾಗರಾಜ್ ಹೊಂಗಲ್ ಪತ್ರ ಬರೆದಿದ್ದಾರೆ.
ಇತ್ತೀಚಿಗಷ್ಟೇ ರಾಜ್ಯ ಸರಕಾರ ಜಯಪ್ರಕಾಶ ಬಾದಾಮಿ, ಪ್ರಕಾಶ ರಾಯ್ಕರ್, ಸ್ನೇಹಾ ಜೋಶಿ, ಶಾಂತನಗೌಡ ಜಕ್ಕನಗೌಡರ್, ಸುಧೀಂದ್ರ ದೇಶಪಾಂಡೆ, ರವಿಕುಮಾರ್ ಮಳಿಗೇರ್ ಅವರನ್ನು ನಾಮ ನಿರ್ದೇಶನಗೊಳಿಸಿ, ಆದೇಶ ಮಾಡಿತ್ತು. ಇದೇ ಆದೇಶದ ವಿರುದ್ಧ ಇದೀಗ ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ತಿರುಗಿ ಬಿದ್ದಿದ್ದಾರೆ.
ರಾಜ್ಯದಲ್ಲಿ ವಿಶ್ವವಿದ್ಯಾಲಯದಲ್ಲಿ ಏನೇ ಮಾಡಿದರೂ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆ-2000 ರ ಅಡಿಯಲ್ಲಿ ಮಾಡಬೇಕು. ಆದರೆ ಈ ನಾಮನಿರ್ದೇಶನದ ವೇಳೆ ಇದರಲ್ಲಿರುವ ಯಾವುದೇ ಅಂಶಗಳನ್ನು ಸರಕಾರ ಪಾಲಿಸಿಯೇ ಇಲ್ಲ. ಸರಕಾರ ನಿಯಮಾವಳಿಗಳನ್ನು ಉಲ್ಲಂಘಿಸಿ ಆರು ಜನ ಸದಸ್ಯರ ನಾಮಕರಣ ಮಾಡಿದೆ. ರಾಜ್ಯ ವಿಶ್ವವಿದ್ಯಾಲಯದ ಕಾಯ್ದೆ-2000 ಅಡಿಯಲ್ಲಿ ಸೆಕ್ಷನ್ 28 (1) ಜಿ ಪ್ರಕಾರ ಶಿಕ್ಷಣ ತಜ್ಞರು, ವಿವಿಧ ರಂಗಗಳ ಪದವೀಧರ ಪರಿಣಿತರನ್ನು ನಾಮಕರಣ ಮಾಡಬೇಕು.
ಆದರೆ ಇಂತಹ ಯಾವುದೇ ನಿಯಮಗಳು ಈ ಆರು ಸದಸ್ಯರಿಗೆ ಅನ್ವಯಿಸಿಯೇ ಇಲ್ಲ ಅನ್ನುವುದು ಸಾಮಾಜಿಕ ಹೋರಾಟಗಾರ ನಾಗರಾಜ ಅವರ ಆರೋಪ. ವಿಶ್ವವಿದ್ಯಾಲಯದ ಆಡಳಿತದಲ್ಲಿ ಸಿಂಡಿಕೇಟ್ನ ಪಾತ್ರ ಅತಿ ಪ್ರಮುಖವಾಗಿರುತ್ತದೆ. ಇಂತಹ ಸಂಸ್ಥೆಗೆ ನಾಮಕರಣದ ವಿಚಾರದಲ್ಲಿ ಸರಕಾರ ನಿಯಮಾನುಸಾರ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ಇದರ ಪರಿಣಾಮ ಒಟ್ಟಾರೆ ವಿದ್ಯಾರ್ಥಿಗಳ ಮೇಲೆ ಆಗುತ್ತದೆ ಅನ್ನುವುದು ನಾಗರಾಜ ಅವರ ವಾದವಾಗಿದೆ. ಆದರೆ ಇದಕ್ಕೆ ಕುಲಪತಿಗಳು ಹೇಳುವುದೇ ಬೇರೆ.
Recommended Video
ಒಟ್ಟಾರೆ ನಾಮ ನಿರ್ದೇಶನಗಳಲ್ಲಿ ರಾಜಕೀಯ ಪ್ರಭಾವ ಎದ್ದು ಕಾಣುತ್ತಿದೆ ಅನ್ನುವುದು ನಾಗರಾಜ ಅವರ ಆರೋಪವಾಗಿದೆ. ವಿದ್ಯಾರ್ಥಿಗಳ ಕಲಿಕೆಯ ಗಮನದಲ್ಲಿಟ್ಟುಕೊಂಡು ಹೊಸ ಹೊಸ ವಿಚಾರಗಳನ್ನು ಚರ್ಚಿಸಲು ಸಿಂಡಿಕೇಟ್ ಮುಖ್ಯ ಆಗಿರುವುದರಿಂದ, ಈ ಸಿಂಡಿಕೇಟ್ ಸದಸ್ಯರು ಅಷ್ಟೇ ಮುಖ್ಯವಾಗಿರುತ್ತಾರೆ. ಹೀಗಾಗಿ ಯೋಗ್ಯರಿಗೆ ಸದಸ್ಯತ್ವ ನೀಡಬೇಕು ಅನ್ನೋದು ನಾಗರಾಜರ ಪತ್ರದಲ್ಲಿ ಉಲ್ಲೇಖವಾಗಿದೆ.