ಗರಗಕ್ಕೆ ಭೇಟಿ ನೀಡಿ ಖಾದಿ ಬಳಕೆಗೆ ಕರೆ ನೀಡಿದ ನಟಿ ಅಮೂಲ್ಯ ಪತಿ
ಧಾರವಾಡ, ಆಗಸ್ಟ್ 17: ಚಿತ್ರನಟಿ ಅಮೂಲ್ಯ ಪತಿ ಜಗದೀಶ್ ಅವರು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲು ಧಾರವಾಡದ ಗರಗ ಗ್ರಾಮಕ್ಕೆ ಭೇಟಿ ನೀಡಿದ್ದರು.
Recommended Video
ರಾಷ್ಟ್ರಧ್ವಜ ತಯಾರಿಕೆಗೆ ಹೆಸರಾಗಿರುವ ಗರಗದ ಕುಂಬಾರ ಓಣಿಗೆ ಭೇಟಿ ನೀಡಿದ ಅವರು, ಇಲ್ಲಿನ ಜನರೊಂದಿಗೆ ಸ್ವಲ್ಪ ಸಮಯ ಕಳೆದರು. ಇದೇ ಸಂದರ್ಭ, ಜನರು ಖಾದಿಯನ್ನು ಹೆಚ್ಚು ಹೆಚ್ಚು ಬಳಕೆ ಮಾಡುವ ಮೂಲಕ ಆತ್ಮನಿರ್ಭರಕ್ಕೆ ಮುಂದಾಗಬೇಕೆಂದು ಕರೆಯನ್ನೂ ನೀಡಿದರು.
ಗದ್ದೆಯಲ್ಲಿ ಟಿಲ್ಲರ್ ಮೇಲೆ ಧ್ವಜ ಹಾರಿಸಿ ಸ್ವಾತಂತ್ರ್ಯ ದಿನ ಆಚರಿಸಿದ ರೈತ
ಖಾದಿಯ ಮಹತ್ವವೇನು?,ನೂಲು ಸಿದ್ಧಪಡಿಸುವುದು ಹೇಗೆ, ಮಾರಾಟದ ವ್ಯವಸ್ಥೆ ಹೇಗಿರುತ್ತದೆ, ಕೊರೊನಾದಿಂದಾಗಿ ಈ ಉದ್ಯಮಕ್ಕೆ ಯಾವ ರೀತಿ ಹೊಡೆತ ಬಿದ್ದಿದೆ ಎಂಬುದರ ಬಗ್ಗೆ ಅಲ್ಲಿನವರ ಜೊತೆ ಮಾತನಾಡಿ ಮಾಹಿತಿ ಪಡೆದರು. ಕುಶಲಕರ್ಮಿ ಮಹಿಳೆಯರ ಸಮಸ್ಯೆಗಳನ್ನು ಆಲಿಸಿ, ಮಕ್ಕಳಿಗೆ ಸ್ಕೂಲ್ ಬ್ಯಾಗ್, ಪುಸ್ತಕಗಳನ್ನು ನೀಡಿದರು.
ಬೆಂಗಳೂರಿನ ಜಿಎಚ್ ಆರ್ ತಂಡದ ನೇತೃತ್ವವನ್ನು ಜಗದೀಶ ಅವರೇ ವಹಿಸಿಕೊಂಡಿದ್ದರು. ತಂಡದಲ್ಲಿ ರಾಘವೇಂದ್ರ, ಅವಿನಾಶ, ಕೆ.ನಾಗರಾಜ, ಮನೋಜ, ಕಾರ್ತಿಕ, ಜೀವನ, ಅಭಿ, ದಿಲೀಪಕುಮಾರ, ಧ್ರುವಕುಮಾರ ಇದ್ದರು. ಇದೇ ಸಂದರ್ಭ ಮಡಿವಾಳೇಶ್ವರ ಸ್ವಾಮಿ ಅವರನ್ನು ಭೇಟಿಯಾಗಿ ಗೌರವ ಸಲ್ಲಿಸಿದರು. ಗರಗ ಕೇಂದ್ರದ ಮ್ಯಾನೇಜರ್ ಈಶ್ವರ ಇಟಗಿ, ನೂಲು ಕೇಂದ್ರದ ಮ್ಯಾನೇಜರ್ ರಾಜು ಕಳಸದ, ಸೇಲ್ಸ್ ಮ್ಯಾನೇಜರ್ ಬಸವರಾಜ ಕುಮಾರಸ್ವಾಮಿಮಠ, ನಾಗನಗೌಡ ಪಾಟೀಲ ಸೇರಿದಂತೆ ಹಲವರು ಜಗದೀಶ್ ಅವರೊಂದಿಗೆ ಮಾತನಾಡಿ, ಖಾದಿ ಕೇಂದ್ರದ ಸ್ಥಿತಿಗತಿಯ ಬಗ್ಗೆ ವಿವರಿಸಿದರು.
"ಅರ್ಥಪೂರ್ಣವಾಗಿ ಆಚರಿಸಿದ ಈ ಸ್ವಾತಂತ್ರೋತ್ಸವ ನನಗೆ ಸಮಾಜಮುಖಿ ಕೆಲಸಗಳನ್ನು ಮಾಡಲು ಪ್ರೇರಣೆ ನೀಡಿದೆ. ಇನ್ನಷ್ಟು ಇಂಥ ಕೆಲಸಗಳನ್ನು ಮಾಡುತ್ತೇನೆ" ಎಂದರು ಜಗದೀಶ್.