ಧಾರವಾಡ ಅಪಘಾತದಲ್ಲಿ 9 ಜನ ಮೃತ: ಒಂದೇ ಚಿತೆಯಲ್ಲಿ ಮೂವರ ಅಂತ್ಯಸಂಸ್ಕಾರ
ಧಾರವಾಡ, ಮೇ21: ಧಾರವಾಡ ತಾಲೂಕಿನ ಬಾಡ ಗ್ರಾಮದ ಬಳಿ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿ ದಿಬ್ಬಣಕ್ಕೆಂದು ಬಂದವರು ಮಸಣ ಸೇರುವಂತಾಗಿದೆ. ಧಾರವಾಡದ ಬಾಡ ಗ್ರಾಮದ ಬಳಿ ರಸ್ತೆ ಅಪಘಾತ ಮೃತಪಟ್ಟ ಮೃತದೇಹ ಸ್ವಗ್ರಾಮಕ್ಕೆ ಆಗಮಿಸಿದ ಬೆನ್ನಲ್ಲೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಲ್ಲದೆ ಒಂದೇ ಚಿತೆಯಲ್ಲಿ ಮೂವರ ಅಂತ್ಯ ಸಂಸ್ಕಾರ ಮಾಡಿದ ಕುಟುಂಬಸ್ಥರು ನಿಗದಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಧಾರವಾಡ ತಾಲೂಕಿನ ನಿಗದಿ ಗ್ರಾಮಕ್ಕೆ ಬಂದಿದ್ದ ಮೂವರ ಮೃತದೇಹಗಳು, ಶಿಲ್ಪಾ, ಮಧುಶ್ರೀ, ಹರೀಶ ಶವಗಳಿಗೆ ಒಂದೇ ಚಿತೆಯಲ್ಲಿ ಮೂವರ ಶವಗಳಿಗೆ ಬೆಂಕಿ ಇಟ್ಟ ಕುಟುಂಬಸ್ಥರು, ಶವ ನೋಡಿ ಕಣ್ಣೀರು ಹಾಕಿದ ಗ್ರಾಮಸ್ಥರು, ಮೃತದೇಹಗಳನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಸಂಬಂಧಿಕರು ಗ್ರಾಮದಿಂದ ಸ್ಮಶಾನದವರಿಗೆ ಕಣ್ಣೀರು ಹಾಕುತ್ತಲೆ ಒಂದೇ ಚಿತೆಯಲ್ಲಿ ಈ ಮೂವರ ಶವಗಳಿಗೆ ಹಿಂದೂ ಸಂಪ್ರದಾಯದಂತೆ ವಿಧಿ ವಿಧಾನ ಮುಗಿಸಿದ ಬಳಿಕ ಅಂತ್ಯಕ್ರಿಯೆ ಮಾಡಿದರು.
ಸಾವಿನ ಸಂಖ್ಯೆ 9ಕ್ಕೆ ಏರಿಕೆ: ಸುಮಾರು 21 ಮಂದಿ ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಏಳು ಜನರು ಮೃತಪಟ್ಟಿದ್ದರು. ಬಳಿಕ ಆಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಸದ್ಯ ಸಾವಿನ ಸಂಖ್ಯೆ 9ಕ್ಕೆ ಏರಿದೆ.
ಶಾಸಕ ಸಿ.ಎಂ.ನಿಂಬಣ್ಣ ಸಾಂತ್ವನ
ನಿನ್ನೆ ಮಧ್ಯರಾತ್ರಿ ಧಾರವಾಡ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ, ಒಟ್ಟು ಒಂಭತ್ತು ಜನರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ, ನಿಗದಿ ಗ್ರಾಮಕ್ಕೆ ಕಲಘಟಗಿ ಕ್ಷೇತ್ರದ ಶಾಸಕ ಸಿ.ಎಂ. ನಿಂಬಣ್ಣವರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಪಘಾತದಲ್ಲಿ 9 ಜನರು ಮೃತಪಟ್ಟಿದ್ದಾರೆ. ಇದು ತುಂಬಾ ದುಃಖದ ಸಂಗತಿ. ಈ ಭಾಗದ ಜನರಿಗೆ ಆಘಾತ ತಂದಿದೆ. ಅಪಘಾತಕ್ಕೆ ಕಾರಣ ಏನು ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸುತ್ತೇವೆ. ಮೃತರ ಸಂಬಂಧಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದರು.
ಮದುವೆ ಮನೆಯಲ್ಲಿ ಸ್ಮಶಾನ ಮೌನ .. ಕಲ್ಯಾಣಮಂಟಪ ಖಾಲಿ ಖಾಲಿ !
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಂದು ಆ ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡುತ್ತಿತ್ತು . ಬಂಧು , ಮಿತ್ರರು ಬಂದು ವಧು , ವರರಿಗೆ ಆಶೀರ್ವದಿಸುತ್ತಿದ್ದರು . ಆದರೆ , ವಿಧಿಯಾಟವೇ ಬೇರೆಯಾಗಿತ್ತು. ಹೀಗೆ ಮರಕ್ಕೆ ಡಿಕ್ಕಿ ಹೊಡೆದು ನಜ್ಜುಗುಜ್ಜಾಗಿರುವ ಕ್ರೂಸರ್ ವಾಹನ , ಮದುವೆಯ ಸಂಭ್ರಮದಲ್ಲಿರಬೇಕಿದ್ದ ಮನೆ ಮುಂದೆ ನೀರವ ಮೌನ .
ನಿನ್ನೆ ತಡರಾತ್ರಿ ಧಾರವಾಡ ತಾಲೂಕಿನ ಬಾಡ ಗ್ರಾಮದ ಬಳಿ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿ ದಿಬ್ಬಣಕ್ಕೆಂದು ಬಂದವರು ಮಸಣ ಸೇರುವಂತಾಗಿದೆ . ಬೆನಕಣಕಟ್ಟಿ ಕ್ರಾಸ್ನಲ್ಲಿ ಮನೆ ಹೊಂದಿರುವ ನಿಗದಿ ಗ್ರಾಮದ ಕಲ್ಲಪ್ಪ ದಾಸನಕೊಪ್ಪ ಎಂಬುವವರ ಪುತ್ರ ಮಂಜುನಾಥ ಅವರ ವಿವಾಹ ಮನಸೂರು ಗ್ರಾಮದ ರೇವಣಸಿದ್ದೇಶ್ವರ ಮಠದಲ್ಲಿ ನಡೆಯುತ್ತಿತ್ತು . ನಿನ್ನೆ ರಾತ್ರಿ ನಿಶ್ಚಿತಾರ್ಥ ಕೂಡ ಇಟ್ಟುಕೊಳ್ಳಲಾಗಿತ್ತು . ಈ ನಿಶ್ಚಿತಾರ್ಥಕ್ಕೆ ಬಂಧು , ಮಿತ್ರರು ಕ್ರೂಸರ್ ವಾಹನದಲ್ಲಿ ಹೋಗಿ ನಿಶ್ಚಿತಾರ್ಥ ಮುಗಿಸಿಕೊಂಡು ಮರಳಿ ಬರುತ್ತಿದ್ದ ವೇಳೆ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ .
ಹಲವರ ಸ್ಥಿತಿ ಚಿಂತಾಜನಕ
ಅನನ್ಯ, ಹರೀಶ, ಶಿಲ್ಪಾ, ನೀಲವ್ವ, ಮಧುಶ್ರೀ, ಮಹೇಶ್ವರಯ್ಯ, ಶಂಭುಲಿಂಗಯ್ಯ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದರು. ಒಟ್ಟಾರೆ 9 ಜನ ಮೃತಪಟ್ಟಿದ್ದು, ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತವಾದ ಸುದ್ದಿ ತಿಳಿದ ಕೂಡಲೇ ಮದುವೆ ಮಂಟಪವನ್ನು ಸಂಬಂಧಿಕರು ಖಾಲಿ ಮಾಡಿದ್ದಾರೆ. ತಾಳಿ ಕಟ್ಟುವ ಶಾಸ್ತ್ರ ಕೂಡ ನಿನ್ನೆಯೇ ಮುಗಿದಿತ್ತು. ಹೀಗಾಗಿ ವಧು, ವರರ ಸಮೇತ ಸಂಬಂಧಿಕರು ಕಲ್ಯಾಣಮಂಟಪನ್ನು ಖಾಲಿ ಮಾಡಲಾಗಿದ್ದು , ಇಂದಿನ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ, ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದೆ.