ಲೇಖಕ ಯೋಗೀಶ್ ಮಾಸ್ಟರ್ ಗೆ ಮಸಿ ಬಳಿದು, ಜೀವ ಬೆದರಿಕೆ
ದಿವಂಗತ ಪತ್ರಕರ್ತ ಪಿ. ಲಂಕೇಶ್ ಅವರ ಸ್ಮರಣೆಗಾಗಿ ಏರ್ಪಡಿಸಲಾಗಿದ್ದದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯೋಗೇಶ್ ಮಾಸ್ಟರ್.
ದಾವಣಗೆರೆ, ಮಾರ್ಚ್ 13: ಪ್ರಗತಿಪರ ಲೇಖಕ ಯೋಗೇಶ್ ಮಾಸ್ಟರ್ ಅವರ ಮುಖಕ್ಕೆ ಕಪ್ಪು ಶಾಯಿ ಬಳಿದು ಅವಮಾನ ಮಾಡಿರುವ ಘಟನೆ ನಗರದಲ್ಲಿ ಭಾನುವಾರ ನಡೆದಿದ್ದು ಬೆಳಕಿಗೆ ಬಂದಿದೆ.
ದಿವಂಗತ ಪರ್ತಕರ್ತ ಪಿ. ಲಂಕೇಶ್ ಅವರ ಸ್ಮರಣೆಗಾಗಿ ಏರ್ಪಡಿಸಲಾಗಿದ್ದ 'ಲಂಕೇಶ್ ನೆನಪು' ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ, ತಮ್ಮ ಕೆಲವಾರು ಗೆಳೆಯರೊಂದಿಗೆ ಹೋಟೆಲೊಂದರಲ್ಲಿ ಚಹಾ ಸೇವಿಸುತ್ತಿದ್ದ ಯೋಗೇಶ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಬೈಕಿನಲ್ಲಿ ಆಗಮಿಸಿದ ಈ ದುಷ್ಕರ್ಮಿಗಳು ಅವರ ಮೇಲೆ ಕಪ್ಪು ಶಾಯಿಯನ್ನು ಎಸೆದು ಅಲ್ಲಿಂದ ಪರಾರಾಯಾಗಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯ ಬಗ್ಗೆ ವಿವರಣೆ ನೀಡಿರುವ ಯೋಗೇಶ್, ''ಲಂಕೇಶ್ ಕುರಿತ ಕಾರ್ಯಕ್ರಮ ನಿಮಿತ್ತ ಆಯೋಜಿಸಲಾಗಿದ್ದ ಪುಸ್ತಕ ಮಾರಾಟ ಮಳಿಗೆಗೆ ಹತ್ತಿರದಲ್ಲೇ ಇದ್ದ ಹೋಟೆಲೊಂದರಲ್ಲಿ ನಾನು ಸ್ನೇಹಿತರೊಂದಿಗೆ ಚಹಾ ಸೇವಿಸುತ್ತಿದ್ದಾಗ ನನ್ನ ಮೇಲೆ ಕಪ್ಪು ಶಾಯಿ ತೂರಲಾಗಿದೆ. ಶಾಯಿ ತೂರಿದವರು, ಹಿಂದೂಪರ ಘೋಷಣೆಗಳನ್ನು ಕೂಗುತ್ತಾ, ಹಿಂದೂ ದೇವರುಗಳನ್ನು ಅವಹೇಳನ ಮಾಡುವಂಥ ಲೇಖನಗಳನ್ನು ಬರೆದರೆ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಹೋಗಿದ್ದಾರೆ'' ಎಂದು ಹೇಳಿದರು.
ಅವರು ಬರೆದಿರುವ ದುಂಡಿ ಎಂಬ ಕೃತಿ ಸಾಕಷ್ಟು ವಿವಾದಕ್ಕೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು.