ಈ ಮಹಿಳೆ ಎಲ್ಲಿಗೇ ಹೋದರೂ ಕಾಗೆಗಳು ಹಿಂಬಾಲಿಸುತ್ತವೆ: ಕಾ..ಕಾ...ಕಾಟಕ್ಕೆ ಬೇಸತ್ತ ಮಹಿಳೆ
ದಾವಣಗೆರೆ, ಜುಲೈ, 30: ಹಾವಿನ ದ್ವೇಷ ಹನ್ನೆರಡು ವರ್ಷ ಅಂತಾರೆ. ನಾಗರಹಾವು ತೊಂದರೆ ಕೊಟ್ಟವರ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿರುತ್ತವೆ ಎಂಬ ಭಯ ಈಗಲೂ ಇದೆ. ಆದರೆ ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆಯ ಎಸ್ಟಿ ಕಾಲೋನಿಯಲ್ಲಿ ಬಸಮ್ಮ ಎನ್ನುವ ಮಹಿಳೆ ಕಾಗೆಗಳ ಕಾಟಕ್ಕೆ ಸಾಕಾಗಿ ಹೋಗಿದ್ದಾರೆ. ಬಸಮ್ಮ ಎಲ್ಲೇ ಹೋದರೂ ಕಾಗೆಗಳು ಹಿಂಬಾಲಿಸಿಕೊಂಡು ಹೋಗುತ್ತವೆ.
ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದ ಎಸ್ಟಿ ಕಾಲೋನಿಯಲ್ಲಿ ಕಾಗೆಗಳು ಬಸಮ್ಮನ ನೆಮ್ಮದಿಯನ್ನು ಕಸಿದಿವೆ. ಇವರಿಗೆ ಸುಮಾರು 10 ದಿನಗಳಿಂದ ಕಾಗೆಗಳು ಬೇತಾಳದಂತೆ ಕಾಡುತ್ತಿವೆ. ಎಲ್ಲೇ ಹೋದರೂ ಬೆನ್ನು ಬಿಡದೆ ಕಾಟ ಕೊಡುತ್ತಿರುವ ಕಾಗೆಗಳಿಂದ ಬಸಮ್ಮ ಜೀವನವೇ ಬೇಡ ಅನ್ನುವ ಮಟ್ಟಿಗೆ ರೋಸಿ ಹೋಗಿದ್ದಾರೆ. ಒಂದು ವಾರದ ಹಿಂದೆ ಬಸಮ್ಮ ಅವರ ಮನೆಯ ಮುಂದಿನ ಕಂಬದ ಮೇಲೆ ಕಾಗೆಯೊಂದು ವಿದ್ಯುತ್ ಶಾಕ್ನಿಂದ ಮೃತಪಟ್ಟಿತ್ತು. ಇದನ್ನು ಗಮನಿಸಿದ ಅವರು ಸತ್ತ ಕಾಗೆಯನ್ನು ಮನೆ ಅಂಗಳದಲ್ಲಿ ಬಿಡದೆ ಬೇರೊಂದು ಕಡೆ ಹಾಕಿ ಬಂದಿದ್ದರು. ಅಂದಿನಿಂದ ಇಲ್ಲಿಯವರೆಗೂ ಕಾಗೆಗಳು ಬೆನ್ನು ಬಿಡದೆ ಹಿಂಬಾಲಿಸುತ್ತಿವೆ.
ಕಾಗೆಗಳ ಕಾಟಕ್ಕೆ ಬೇಸತ್ತ ಬಸಮ್ಮ
ಬಸಮ್ಮ ಮನೆಯಿಂದ ಹೊರ ಬಂದರೆ ಸಾಕು ಹಾರಿ ತಲೆಯ ಮೇಲೆ ಬಂದು ಕೂತು ಕುಕ್ಕುತ್ತಿವೆ. ಎಲ್ಲಾದರೂ ಹೋದರೆ ಹಿಂಬಾಲಿಸಿಕೊಂಡು ಹೋಗುತ್ತವೆ. ಇದರಿಂದ ಮನನೊಂದ ಬಸಮ್ಮ ಮನೆ ಬಿಟ್ಟು ಹೊರ ಬರುವುದಕ್ಕೂ ಅಂಜುವ ಸ್ಥಿತಿ ನಿರ್ಮಾಣವಾಗಿದೆ.
ಅಳಲು ತೋಡಿಕೊಂಡ ಬಸಮ್ಮ
ಮನೆಯಿಂದ ಹೊರ ಬರುತ್ತಿದ್ದಂತೆ ಸುತ್ತುವರೆಯುತ್ತಿವೆ. ಅಲ್ಲದೇ, ರೈತರಾದ ನಾವು ಕುರಿ, ಮೇಕೆ ಸಾಕಣಿಕೆ ಮಾಡುತ್ತಿದ್ದು, ಅವುಗಳ ಆರೈಕೆಗೆ ದಿನ ಬೆಳಗಾದರೆ ಹೊರ ಬರಬೇಕು. ಕೈಯಲ್ಲಿ ಕೋಲು ಹಿಡಿದು ಹೊರ ಬರುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ನಾನು ಪಕ್ಷಿಗಳನ್ನು ಕೊಲ್ಲುವ ಕಟುಕಿಯಲ್ಲ ಎಂದು ಬಸಮ್ಮ ಕಣ್ಣೀರು ಸುರಿಸುತ್ತಾರೆ.
ಗ್ರಾಮಸ್ಥರಿಂದ ಬಸಮ್ಮಗೆ ಗೇಲಿ
ಬಸಮ್ಮ ಕಾಗೆಗಳ ಕಾಟದಿಂದ ಯಾವಾಗ ಮುಕ್ತಿ ಸಿಗಬಹುದು ಎಂದು ಎದುರು ನೋಡುತ್ತಿದ್ದಾರೆ. ಇದರಿಂದ ಮುಕ್ತಿ ಕೊಡಿಸಲು ಯಾವುದಾದರೂ ದಾರಿ ಇದ್ಯಾ? ಇನ್ನು ಎಷ್ಟು ದಿನ ಕಾಗೆಗಳು ನನ್ನ ಹಿಂಬಾಲಿಸುತ್ತವೆ? ಎಂದು ಅಕ್ಕ ಪಕ್ಕದ ಜನರನ್ನು ಕೇಳುತ್ತಿದ್ದಾರೆ. ಯಾವುದೇ ಪ್ರಯೋಜನವಾಗದೆ ಮಾನಸಿಕವಾಗಿ ಭಾವನಾತ್ಮಕವಾಗಿ ಮರುಗುತ್ತಿದ್ದಾರೆ. ಗ್ರಾಮದ ಜನರು ಪ್ರತಿನಿತ್ಯ ಕಾಗೆ ಸಹವಾಸ ಏಕೆ ಮಾಡಿದೆ ಎಂದು ಬಸಮ್ಮ ಅವರನ್ನು ಗೇಲಿ ಮಾಡುತ್ತಿದ್ದಾರೆ. ಮತ್ತೆ ಕಲವರು ಏನು ಆಗೋಲ್ಲ ಯಾವುದಾದರೂ ದೇವರಿಗೆ ಹರಕೆ ಕಟ್ಟಿಕೊಳ್ಳಿ ಎಂದು ಅಭಯವನ್ನ ನೀಡುತ್ತಿದ್ದಾರೆ. ಬಸಮ್ಮ ಕಾಗೆಗಳ ಕಾಟ ತಪ್ಪಿಸಿಕೊಳ್ಳಲು ಆಂಧ್ರದ ಗಡಿ ಭಾಗದಲ್ಲಿರುವ ಪಾವಗಡದ ಶನಿಮಹಾತ್ಮ ದೇವಸ್ಥಾನದಲ್ಲಿ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ಸಲ್ಲಿಸಲು ನಿರ್ಧರಿಸಿದ್ದಾರಂತೆ.
ಶನಿಮಾತ್ಮನಿಗೆ ಪೂಜೆ ಸಲ್ಲಿಸಲು ತಯಾರಿ
"ನಮ್ಮ ಮನೆಯ ಮುಂದೆ ಕರೆಂಟ್ ಕಂಬಗಳಿದ್ದು, ಹಲವು ಬಾರಿ ಕಾಗೆಗಳು ಕರೆಂಟ್ ಶಾಕ್ನಿಂದ ಸತ್ತು ಬಿದ್ದಿವೆ. ಸತ್ತ ಕಾಗೆಗಳನ್ನು ಅಲ್ಲಿಯೇ ಬಿಡದೆ ಬೇರೆ ಕಡೆಗೆ ಹೋಗಿ ನಾನೇ ಬಿಸಾಕಿ ಬರುತ್ತಿದೆ. ಅಲ್ಲಿಂದ ಬರುವ ವೇಳೆಗೆ ಆ ಕಾಗೆಯನ್ನು ನಾನೇ ಸಾಯಿಸಿದ್ದೇನೆ ಎಂದು ತಲೆಯ ಸುತ್ತ ಕಾಗೆಗಳು ಸುತ್ತುಗಟ್ಟಿ ಕುಕ್ಕಿದವು. ಎಲ್ಲಿ ಹೋದರು ಹಿಂಬಾಲಿಸುತ್ತಿವೆ. ಇದರಿಂದ ಮುಕ್ತಿ ಸಿಕ್ಕರೆ ಸಾಕು ಅನಿಸಿದೆ" ಎಂದು ಬಸಮ್ಮ ಅಳಲು ತೋಡಿಕೊಂಡರು.
ಆದ್ದರಿಂದ ಯಾರಾದರೂ ಕಾಗೆಗಳನ್ನು ತಡೆ ಹಾಕಿಕೊಳ್ಳುವ ಮುನ್ನಾ ಎಚ್ಚರವಾಗಿರಬೇಕಾಗುತ್ತದೆ ಎನ್ನುವುದಕ್ಕೆ ಬಸಮ್ಮನವರ ಕಥೆಯೇ ಸೂಕ್ತ ಉದಾಹರಣೆಯಾಗಿದೆ. ಎಲ್ಲೂ ತಿರುಗಾಡದಂತೆ ಇವತ್ತಿನವರೆಗೂ ಕಾಗೆಗಳು ಅವರನ್ನು ಕಾಡುತ್ತಲೇ ಇವೆ. ಇದರಿಂದ ಬೇಸತ್ತ ಬಸಮ್ಮ ಪಾವಗಡದ ಶನಿಮಾತ್ಮನಿಗೆ ಪೂಜೆ ಮಾಡಿಸಲು ಸಿದ್ದರಾಗಿದ್ದಾರೆ. ಆಗಲಾದರೂ ಈ ಸಮಸ್ಯೆಯಿಂದ ಬಸಮ್ಮನಿಗೆ ಮುಕ್ತಿ ಸಿಗುತ್ತಾ ಅನ್ನುವುದನ್ನು ಕಾದುನೋಡಬೇಕಿದೆ.
Recommended Video