ದಾವಣಗೆರೆಯಲ್ಲಿ ಮಹಿಳೆ ಸತ್ತಿದ್ದು ಕೊರೊನಾದಿಂದಲ್ಲ; ಡಿಸಿ ಸ್ಪಷ್ಟನೆ
ದಾವಣಗೆರೆ, ಮಾರ್ಚ್ 21: ಕೊರೊನಾ ಪರೀಕ್ಷೆಗೆ ಒಳಗಾಗಿದ್ದ ಮಹಿಳೆಯೊಬ್ಬರು ಕಳೆದ ರಾತ್ರಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಆತಂಕ ಮನೆ ಮಾಡಿತ್ತು. ಈ ಆತಂಕಕ್ಕೆಲ್ಲಾ ಜಿಲ್ಲಾಧಿಕಾರಿಗಳು ತೆರೆ ಎಳೆದಿದ್ದು, ಉಸಿರಾಟದ ತೊಂದರೆಯಿಂದ 56 ವರ್ಷದ ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಮಹಿಳೆಯ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್ ಬೀಳಗಿ ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೊರೊನೊ ಕುರಿತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಸಭೆ ಮುಗಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಸಮ್ಮುಖದಲ್ಲಿ ಈ ಸ್ಪಷ್ಟನೆ ನೀಡಿದರು.
ಕೇರಳದಿಂದ ನಗರಕ್ಕೆ ಮಹಿಳೆ ಬಂದಿದ್ದರು. ಅವರಿಗೆ ಜ್ವರ ಬಂದಿತ್ತು. ಎರಡನೇ ದಿನವೂ ಕಡಿಮೆಯಾಗಿರಲಿಲ್ಲ. ಆಕೆ ಮಗಳಿಗೂ ಇದೇ ಸಮಸ್ಯೆ ತಲೆದೋರಿತ್ತು. ಇದರಿಂದ ಆಕೆಯ ಗಂಟಲು ಹಾಗೂ ರಕ್ತದ ಸ್ಯಾಂಪಲ್ ಪರೀಕ್ಷೆಗಾಗಿ ಹಾಸನಕ್ಕೆ ಕಳುಹಿಸಲಾಗಿತ್ತು. ಇಂದು ಬೆಳಗ್ಗೆ ವರದಿ ಬಂದಿದೆ. ಕಡಿಮೆ ರಕ್ತದೊತ್ತಡ ಮತ್ತು ಮಧುಮೇಹ, ಉಸಿರಾಟದ ತೊಂದರೆಯಿಂದ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಕೊರೊನೊ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.