ವಿಶೇಷ ವರದಿ: ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆಗೆ ಸಿಗುತ್ತಾ ಮಂತ್ರಿ ಭಾಗ್ಯ?
ದಾವಣಗೆರೆ, ಜುಲೈ 29: ದಾವಣಗೆರೆಯನ್ನು ಮಧ್ಯ ಕರ್ನಾಟಕದ ಹೆಬ್ಬಾಗಿಲು ಅಂತಾನೇ ಕರೆಯುತ್ತಾರೆ. ಕಳೆದ ಮೂರು ವರ್ಷಗಳಿಂದ ಜಿಲ್ಲೆಯ ಯಾವ ಶಾಸಕರಿಗೂ ಮಂತ್ರಿಭಾಗ್ಯ ಸಿಕ್ಕಿಲ್ಲ. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಇದ್ದಾಗಲೂ ಬೇರೊಂದು ಜಿಲ್ಲೆಯವರು ಇಲ್ಲಿ ಉಸ್ತುವಾರಿ ಮಂತ್ರಿಯಾಗಿದ್ದರು. ಯಡಿಯೂರಪ್ಪ ಸಿಎಂ ಆದಾಗಲೂ ಜಿಲ್ಲೆಯ ಯಾವ ಶಾಸಕರಿಗೂ ಸಚಿವ ಸ್ಥಾನ ಸಿಗಲಿಲ್ಲ ಎನ್ನುವುದು ಜಿಲ್ಲೆಯ ಜನರಿಗೆ ಹಾಗೂ ಶಾಸಕರಿಗೆ ನೋವಿನ ವಿಚಾರ.
ದಾವಣಗೆರೆ ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರಿದ್ದಾರೆ. ಕಳೆದ ಬಾರಿ ಯಾರಿಗಾದರೂ ಜಿಲ್ಲೆಯ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ನೀಡಿ ಎಂಬ ಆಗ್ರಹಕ್ಕೆ ಮನ್ನಣೆ ಸಿಗಲಿಲ್ಲ. ಕಳೆದ ಬಾರಿ ಮಾಡಿದ ತಪ್ಪು ಈ ಬಾರಿ ಮಾಡದಿರಲು ಶಾಸಕರೆಲ್ಲರೂ ನಿರ್ಧರಿಸಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ "ಒಗ್ಗಟ್ಟಿನ ಶಕ್ತಿ' ಪ್ರದರ್ಶಿಸಿದ್ದಾರೆ. ಯಾರಿಗಾದರೂ ನೀಡಿ, ಬೇಸರ ಇಲ್ಲ. ಆದರೆ ದಾವಣಗೆರೆ ಜಿಲ್ಲೆಯವರಿಗೇ ಕೊಡಿ ಎಂಬ ಹಕ್ಕೊತ್ತಾಯ ಮಂಡಿಸಿದ್ದಾರೆ.
ನೂತನ ಸಂಪುಟ ರಚನೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಮಹತ್ವದ ಹೇಳಿಕೆ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯಿಂದ ಹರಪನಹಳ್ಳಿಯ ಕರುಣಾಕರ ರೆಡ್ಡಿಯೂ ಸೇರಿದಂತೆ ಬಿಜೆಪಿಯ ಆರು ಶಾಸಕರು ಗೆದ್ದು ಬಂದಿದ್ದರು. ಇನ್ನು ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಗೆದ್ದಿತ್ತು. ಜೆಡಿಎಸ್- ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೂ ಜಿಲ್ಲೆಗೆ ಸಚಿವ ಸ್ಥಾನ ಸಿಗಲಿಲ್ಲ.
ಬಿಜೆಪಿಯ ಐವರು ಶಾಸಕರಿದ್ದಾರೆ
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ದಾವಣಗೆರೆಗೆ ಪ್ರಾತಿನಿಧ್ಯ ಸಿಗಲಿಲ್ಲ. ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯ ಶಾಸಕರಿಗೆ ಮಂತ್ರಿಗಿರಿ ಸಿಕ್ಕಿಲ್ಲ. ಈಗ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಜಿಲ್ಲೆಯ ಬಿಜೆಪಿಯ ಶಾಸಕರಿಗೆ ಮಿನಿಸ್ಟರ್ ಪಟ್ಟ ಸಿಗುತ್ತಾ ಎಂಬ ಕುತೂಹಲ ಸಹಜವಾಗಿಯೇ ಮನೆ ಮಾಡಿದೆ. ಈಗ ಹರಪನಹಳ್ಳಿ ಕ್ಷೇತ್ರ ಬಳ್ಳಾರಿ ಜಿಲ್ಲೆ ಸೇರ್ಪಡೆಯಾಗಿರುವ ಕಾರಣ, ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿಯ ಐವರು ಶಾಸಕರಿದ್ದಾರೆ.
ಯಡಿಯೂರಪ್ಪ ವಿರುದ್ಧ ಮಾತನಾಡಿದ್ದ ರವೀಂದ್ರನಾಥ್
ಇನ್ನು 2006ರಿಂದ 2013 ರವರೆಗೆ ಸತತ ಏಳು ವರ್ಷಗಳ ಕಾಲ ಸಚಿವರಾಗಿದ್ದ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಕಟ್ಟಾ ಆರ್ಎಸ್ಎಸ್ ಜೊತೆ ಗುರುತಿಸಿಕೊಂಡಿದ್ದು, ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇವರಿಗಾದರೂ ಸಚಿವ ಸ್ಥಾನ ಸಿಗಬಹುದಾ ಎಂಬ ಮಾತು ಕೇಳಿ ಬರುತ್ತಿದೆ. ಈಗ ಅವರಿಗೆ ವಯಸ್ಸು ಜಾಸ್ತಿಯಾಗಿದ್ದು, ಈ ಅಂಶ ಬಿಟ್ಟರೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ಆದರೆ ಮೊದಲಿನಿಂದಲೂ ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡಿರುವ ರವೀಂದ್ರನಾಥ್, ಬಹಿರಂಗವಾಗಿ ಯಡಿಯೂರಪ್ಪ ವಿರುದ್ಧ ಮಾತನಾಡಿದ್ದಾರೆ.
ಕೋವಿಡ್ ಕೇರ್ ಸೆಂಟರ್ನಲ್ಲಿ ವಾಸ್ತವ್ಯ ಹೂಡಿದ್ದ ರೇಣುಕಾಚಾರ್ಯ
ಇನ್ನು ಕೊರೊನಾ ವೇಳೆಯಲ್ಲಿ ಕೋವಿಡ್ ಕೇರ್ ಸೆಂಟರ್ನಲ್ಲಿ ವಾಸ್ತವ್ಯ, ಓಡಾಟ ಸೇರಿದಂತೆ ಹಗಲಿರುಳು ಕೆಲಸ ಮಾಡಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಬಗ್ಗೆ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಒಳ್ಳೆಯ ಅಭಿಪ್ರಾಯ ಇದೆ. ಜೊತೆಗೆ ಯಡಿಯೂರಪ್ಪರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಶಾಸಕ. ಏನೆಲ್ಲಾ ಮಾಡಿದರೂ ಈ ಹಿಂದೆ ಸಚಿವಗಿರಿ ಸಿಗಲಿಲ್ಲ. ದೆಹಲಿಗೆ ಹೋಗಿ ಬಂದರೂ ಸಾಧ್ಯವಾಗಿಲ್ಲ. ಆದರೂ ಬಿಎಸ್ವೈ ಬೆನ್ನಿಗೆ ನಿಂತಿದ್ದ ರೇಣುಕಾಚಾರ್ಯರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ದೆಹಲಿಗೆ ಹೋಗಿ ಒತ್ತಡ ಹಾಕಿ ಬಂದಿದ್ದಾರೆ.
ರೇಣುಕಾಚಾರ್ಯ ಹಾಗೂ ರವೀಂದ್ರನಾಥ್ ಇಬ್ಬರಲ್ಲಿ ಒಬ್ಬರಿಗೆ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ಜಿಲ್ಲೆಯ ಬಿಜೆಪಿ ಮುಖಂಡರು ಇದ್ದಾರೆ. ಆದರೆ ಈಗ ತಲಾ ಮೂರು ಬಾರಿ ಗೆದ್ದಿರುವ ರೇಣುಕಾಚಾರ್ಯ, ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಜಗಳೂರಿನ ಎಸ್.ವಿ. ರಾಮಚಂದ್ರಪ್ಪ ಅವರ ಹೆಸರೂ ಸಚಿವ ಸ್ಥಾನದ ರೇಸ್ನಲ್ಲಿದೆ.
ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೆಸರು ಚಾಲ್ತಿ
ಈಗ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪರ ಹೆಸರು ಚಾಲ್ತಿಯಲ್ಲಿದೆ. ಈಗಾಗಲೇ ಮಾಡಾಳು ವಿರೂಪಾಕ್ಷಪ್ಪ, ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ನೀಡಲಾಗಿತ್ತು. ದಾವಣಗೆರೆ ಜಿಲ್ಲೆಯ 8 ಸ್ಥಾನಗಳ ಪೈಕಿ ಆರು ಸ್ಥಾನ ಗೆದ್ದಿದ್ದರೂ ಬಿಜೆಪಿ ಹೈಕಮಾಂಡ್ ಯಾವ ಸ್ಥಾನಮಾನವನ್ನೂ ಕೊಟ್ಟಿರಲಿಲ್ಲ. ಲಿಂಗಾಯತ ಸಮುದಾಯದ ಎಸ್.ಎ. ರವೀಂದ್ರನಾಥರನ್ನು ಮಿನಿಸ್ಟರ್ ಮಾಡದೇ ಬಿಜೆಪಿ ಲಿಂಗಾಯತರನ್ನು ಕಡೆಗಣಿಸಿದೆ, ಮಧ್ಯ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
Recommended Video
ಎಲ್ಲ ಪ್ರಶ್ನೆಗಳಿಗೆ ಸದ್ಯದಲ್ಲಿಯೇ ಉತ್ತರ
ಮಧ್ಯ ಕರ್ನಾಟಕಕ್ಕೆ ಆದ್ಯತೆ ಸಿಗುತ್ತದೆಯಾ ಇಲ್ಲವೆ ಎಂಬುದಕ್ಕೆ ಸದ್ಯದಲ್ಲಿಯೇ ಉತ್ತರ ಸಿಗಲಿದೆ. ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ಸೇರಲು ಐವರು ಶಾಸಕರು ಒಂದಲ್ಲಾ ಒಂದು ರೀತಿಯಲ್ಲಿ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ. ಎಂ.ಪಿ. ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಎಸ್.ಎ. ರವೀಂದ್ರನಾಥ್ ಪೈಕಿ ಯಾರಿಗಾದರೂ ಒಬ್ಬರಿಗೆ ಮಿನಿಸ್ಟರ್ ಪಟ್ಟ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಎಲ್ಲವೂ ಬಿಜೆಪಿ ಹೈಕಮಾಂಡ್ ನಿರ್ಧಾರದ ಮೇಲೆ ನಿಂತಿದೆ ಅಷ್ಟೆ.