ದಾವಣಗೆರೆ; ಎಸ್.ಎಸ್. ಮಲ್ಲಿಕಾರ್ಜುನ್ ಹುಟ್ಟುಹಬ್ಬಕ್ಕೆ ಯಾರೆಲ್ಲ ಆಗಮಿಸಲಿದ್ದಾರೆ?, ಹೇಗಿದೆ ಸಿದ್ಧತೆ?
ದಾವಣಗೆರೆ, ಸೆಪ್ಟೆಂಬರ್, 19: ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ 55ನೇ ಹುಟ್ಟುಹಬ್ಬಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಗರದ ಬಾಪೂಜಿ ಎಂಬಿಎ ಕಾಲೇಜಿನ ಸುಮಾರು 13 ಎಕರೆ ಜಾಗದಲ್ಲಿ ಬೃಹತ್ ಪೆಂಡಾಲ್ ಹಾಕಲಾಗುತ್ತಿದ್ದು, ಸೆಪ್ಟೆಂಬರ್ 22ರಂದು ಅದ್ಧೂರಿಯಾಗಿ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಇದಕ್ಕಾಗಿ ಕಳೆದ 20 ದಿನಗಳಿಂದಲೂ ರಕ್ತದಾನ ಶಿಬಿರ, ಚೆಸ್, ಸ್ಕೇಟಿಂಗ್, ತಳ್ಳು ಗಾಡಿ ವ್ಯಾಪಾರಿಗಳಿಗೆ ಜರ್ಕಿನ್ ಸೇರಿದಂತೆ ವಿವಿಧ ಜನಪರ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಸಹ ಮಲ್ಲಿಕಾರ್ಜುನ್ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಹಿರಿಯರಾದ ಶಾಮನೂರು ಶಿವಶಂಕರಪ್ಪರ ಅಧ್ಯಕ್ಷತೆಯಲ್ಲಿ ಮಲ್ಲಿಕಾರ್ಜುನ್ ಅವರ 55ನೇ ಹುಟ್ಟುಹಬ್ಬದ ಸಮಾರಂಭವನ್ನು ಆಯೋಜಿಸಲಾಗಿದೆ. ದಾವಣಗೆರೆಯಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದ್ದೇ ಮಲ್ಲಿಕಾರ್ಜುನ್ ಅವರಿಂದ. ಶಾಸಕರಾಗಿ, ಸಚಿವರಾಗಿ ಅವರು ಮಾಡಿರುವ ಕೆಲಸಗಳು ಇಂದು ಜನರ ಕಣ್ಮುಂದೆ ಇವೆ. ಅವರು ಹುಟ್ಟುಹಬ್ಬ ಆಚರಣೆ ಬೇಡ ಅಂದಿದ್ದರು, ಆದರೆ ಅಭಿಮಾನಿಗಳು, ಹಿತೈಷಿಗಳು, ಸ್ನೇಹಿತರೆಲ್ಲರೂ ಸೇರಿಕೊಂಡು ಈ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. 60 ಸಾವಿರಕ್ಕೂ ಹೆಚ್ಚು ಜನರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ದಾವಣಗೆರೆಯಲ್ಲಿ ಕೈಗಾರಿಕಾ ಕಾರಿಡಾರ್ಗೆ ವಿರೋಧ: ಶಾಮನೂರು ಶಿವಶಂಕರಪ್ಪ ಮುಂದೆ ರೈತರ ಅಳಲು
ಮಲ್ಲಿಕಾರ್ಜುನ್ ಹುಟ್ಟುಹಬ್ಬಕ್ಕೆ ಸಜ್ಜಾದ ವೇದಿಕೆ
ಸೆಪ್ಟೆಂಬರ್ 22ರಂದು ಮಧ್ಯಾಹ್ನ 1.30ಕ್ಕೆ ಕಾರ್ಯಕ್ರಮ ಆರಂಭ ಆಗಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಹೆಚ್.ಸಿ. ಮಹಾದೇವಪ್ಪ, ಶಾಸಕರಾದ ಜಮೀರ್ ಅಹ್ಮದ್, ಲಕ್ಷ್ಮೀ ಹೆಬ್ಬಾಳ್ಕರ್, ಎಸ್. ರಾಮಪ್ಪ, ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಳೆದ 10 ದಿನಗಳಿಂದ ರಕ್ತ ಸಂಗ್ರಹಿಸುವ ಕಾರ್ಯ
ಇನ್ನು ಪ್ರಭಾ ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ 5,555 ಜನರ ಬಳಿ ರಕ್ತ ಸಂಗ್ರಹಿಸುವ ಮೂಲಕ ಗಿನ್ನಿಸ್ ದಾಖಲೆ ಬರೆಯಬೇಕು ಎಂಬ ನಿಟ್ಟಿನಲ್ಲಿ ಎಲ್ಲೆಡೆ ರಕ್ತದಾನ ಶಿಬಿರ ನಡೆಸಲಾಗುತ್ತಿದೆ. ಕಳೆದ 10 ದಿನಗಳಿಂದ ರಕ್ತ ಸಂಗ್ರಹಿಸುವ ಕಾರ್ಯ ಮಾಡಲಾಗಿದ್ದು, ಡಿಸೆಂಬರ್ 31ರವರೆಗೂ ರಕ್ತವನ್ನು ಸಂಗ್ರಹಿಸಲಾಗುವುದು. ಇದಕ್ಕೆ ಎಲ್ಲಾ ಕಡೆಗಳಿಂದಲೂ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲದೆ ಈ ರಕ್ತವನ್ನು ಬಡವರಿಗೆ ನೀಡುವಂತಹ ಮಾನವೀಯ ಕಾರ್ಯ ಮಾಡಲಾಗುತ್ತಿದೆ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಹಾಗಾಗಿ ಜಿಲ್ಲೆಯ ಏಳು ತಾಲೂಕುಗಳಿಂದ ಕನಿಷ್ಠ ನಾಲ್ಕೂವರೆಯಿಂದ 5 ಸಾವಿರ ಜನರು ಆಗಮಿಸಲಿದ್ದಾರೆ. ಈಗಾಗಲೇ ನಾವೆಲ್ಲರೂ ಪ್ರತಿ ತಾಲೂಕಿಗೆ ಹೋಗಿ ಈ ಬಗ್ಗೆ ಸಭೆ ನಡೆಸಿ ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದೆ ಎಂದರು.
ಸ್ಯಾಂಡಲ್ವುಡ್ ತಾರೆಯರ ಆಗಮನ
ಇನ್ನು ಅಂದು ಸಂಜೆ ಆರು ಗಂಟೆಯಿಂದ ರಾತ್ರಿ 10ರವರೆಗೆ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರ ಮ್ಯೂಸಿಕಲ್ ನೈಟ್ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನಟ ದರ್ಶನ್ ತೂಗುದೀಪ ಆಗಮಿಸುವ ಮೂಲಕ ಮಲ್ಲಿಕಾರ್ಜುನ್ ಅವರರ ಹುಟ್ಟುಹಬ್ಬಕ್ಕೆ ಶುಭ ಕೋರಲಿದ್ದಾರೆ. ರಸ ಮಂಜರಿಯ ಮೂಲಕ ಬಂದವರಿಗೆ ರಸದೌತಣ ನೀಡಲಾಗುತ್ತದೆ ಎಂದರು. ಇನ್ನು ನಟಿ ರಚಿತಾ ರಾಮ್, ಹಾಸ್ಯ ನಟ ಚಿಕ್ಕಣ್ಣ, ಪ್ರಜ್ವಲ್ ದೇವರಾಜ್ ಸೇರಿದಂತೆ ಸ್ಯಾಂಡಲ್ವುಡ್ನ ಸಿನಿ ತಾರೆಯರು ಆಗಮಿಸಲಿದ್ದು, ಮೂರು ಗಂಟೆಗಳ ಕಾಲ ಮನರಂಜನೆಯ ಹಬ್ಬ ಇರಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದರೂ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮವನ್ನು ವಹಿಸಲಾಗುವುದು ಎಂದು ತಿಳಿಸಿದರು.
ಜನರಿಗೆ ಪ್ರಥಮ ಚಿಕಿತ್ಸೆ ವ್ಯವಸ್ಥೆ
ಸಮಾರಂಭಕ್ಕೆ ಆಗಮಿಸುವವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಶೌಚಾಲಯ, ಕುಳಿತುಕೊಳ್ಳಲು ಆಸನ, ಪ್ರಥಮ ಚಿಕಿತ್ಸೆ ನೀಡಲು ಕ್ಲಿನಿಕ್ ಸಹ ತೆರೆಯಲಾಗುತ್ತದೆ. ದಾವಣಗೆರೆಯಲ್ಲಿ ಅಂದು ಅದ್ಧೂರಿ ಕಾರ್ಯಕ್ರಮ ನಡೆಸುವ ಮೂಲಕ ಮಲ್ಲಿಕಾರ್ಜುನ್ ಅವರಿಗೆ ಶಕ್ತಿ ತುಂಬುವ ಕೆಲಸ ನಡೆಸಲಾಗುತ್ತದೆ. ಇದು ಪಕ್ಷಕ್ಕೂ ಅನುಕೂಲ ಆಗಲಿದೆ. ಜೊತೆಗೆ ಮತ್ತೆ ಮಲ್ಲಿಕಾರ್ಜುನ್ ಅವರು ಶಾಸಕರಾಗಿ, ಸಚಿವರಾಗಿ ಜಿಲ್ಲೆಯ ಮತ್ತಷ್ಟು ಅಭಿವೃದ್ಧಿಗೆ ಶ್ರಮಿಸಬೇಕು ಎಂಬುದು ನಮ್ಮೆಲ್ಲರ ಆಶಯ ಆಗಿದೆ ಎಂದರು.
ಈ ಸಂದರ್ಭದಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಮುದ್ದೇಗೌಡ್ರು ಗಿರೀಶ್, ಶಿವಗಂಗಾ ಶ್ರೀನಿವಾಸ್, ಅರುಣ್ ಶಾಮನೂರು, ಅಯೂಬ್ ಪೈಲ್ವಾನ್, ಶ್ರೀಕಾಂತ್ ಬಂಗೇರಾ, ಅಖಿಲ ಕರ್ನಾಟಕ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಆರ್. ಚಂದ್ರು, ಅಲೆಕ್ಸಾಂಡರ್ ಜಾನ್, ಅಬ್ದುಲ್ ಜಬ್ಬಾರ್, ಪಾಲಿಕೆ ಸದಸ್ಯ ಎ. ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.