ಪರಿಸರ ಸಂರಕ್ಷಣೆಗಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪಾದಯಾತ್ರೆ
ದಾವಣಗೆರೆ, ಮಾರ್ಚ್ 03: ಜಾಗತಿಕ ತಾಪಮಾನ ಏರಿಕೆಯಿಂದ ಉಂಟಾಗುತ್ತಿರುವ ಹವಾಮಾನ ವೈಪರಿತ್ಯದ ದುಷ್ಪರಿಣಾಮಗಳ ವಿರುದ್ಧ ಹಾಗೂ ಪರಿಸರ ಸಂರಕ್ಷಣೆಗಾಗಿ ಇಂಜನೀಯರ್ ಪದವೀಧರ ಅರುಣ್ ಮಿತ್ತಲ್ ಎಂಬ ಯುವಕ ಜಮ್ಮು ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪಾದಯತ್ರೆ ಕೈಗೊಂಡು ಜಾಗೃತಿ ಮೂಡಿಸುತ್ತಿದ್ದಾನೆ.
ದಾವಣಗೆರೆ ನಗರದ ವಿವಿಧೆಡೆ ಪರಿಸರ ಸಂರಕ್ಷಣೆ, ನೆಲ, ಜಲ ಹಾಗೂ ವಾಯುಮಾಲಿನ್ಯ ಕುರಿತಾದ ವಿಷಯಗಳನ್ನು ಸಾರ್ವಜನಿಕರಿಗೆ ತಿಳಿಸುತ್ತ ಸಂಚಾರ ಕೈಗೊಂಡರು. ಕಳೆದ 2019 ಸೆಪ್ಟಂಬರ್ 14 ರಂದು ಜಮ್ಮುವಿನಿಂದ ಪಾದಯಾತ್ರೆ ಆರಂಭಿಸಿದ್ದು, 170 ದಿನಗಳಿಂದ ನಿರಂತರ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ.
ದುಗ್ಗಮ್ಮನ ಜಾತ್ರೆಯಲ್ಲಿ ಬಾಡೂಟಕ್ಕೆ ಬೆಣ್ಣೆ ನಗರಿ ರೆಡಿ, ಕೋಣ ಬಲಿ ನಡೆಯದಂತೆ ಕಟ್ಟೆಚ್ಚರ
ಜಮ್ಮು ಮತ್ತು ಕಾಶ್ಮೀರದಿಂದ ದಾವಣಗೆರೆವರೆಗೆ ಪಾದಯಾತ್ರೆ ಮೂಲಕ ಆಗಮಿಸಿರುವ ಅರುಣ್ ಕಾಲುಗಳಲ್ಲಿ ಬೊಬ್ಬೆ ಮೂಡಿದೆ. ಇಂದಿಗೆ ಸರಿ ಸುಮಾರು 2657 ಕಿ.ಮೀ ಸಂಚಾರ ಮಾಡಿದ್ದು, ಇಂದು ದಾವಣಗೆರೆ ನಗರದ ವಿವಿಧೆಡೆ ಸಂಚರಿಸಿ ಮಕ್ಕಳು, ಸಾರ್ಜನಿಕರಿಗೆ ಪರಿಸರದ ಅರಿವು ಮೂಡಿಸಿದರು.
ಗಿಡ ನೆಡಿ, ಪರಿಸರ ಉಳಿಸಿ. ಮಿತವಾಗಿ ನೀರನ್ನು ಬಳಸಿ ಮುಂದಿನ ಪೀಳಿಗೆಗೆ ಉಳಿಸಿ ಎನ್ನುವ ಘೋಷಣೆಗಳ ಮೂಲಕ ಜಾಗೃತಿ ಮೂಡಿಸಿದರು. ನಗರದ ಗುಳ್ಳಮ್ಮನ ದೇವಾಲಯದ ಆವರಣದಲ್ಲಿ ಗಿಡ ನೆಟ್ಟು ಅದನ್ನು ಪೋಷಿಸುವಂತೆ ಮಕ್ಕಳಿಗೆ ಸಲಹೆ ನೀಡಿದರು.