ಬೆಣ್ಣೆನಗರಿ ಸಾಹಿತ್ಯ ಆಸಕ್ತರಿಗೆ ಬಿಗ್ ಶಾಕ್ ಕೊಟ್ಟ ಯಡಿಯೂರಪ್ಪ ಸರ್ಕಾರ!
ದಾವಣಗೆರೆ, ಡಿಸೆಂಬರ್.01: ವಿಶ್ವ ಕನ್ನಡ ಸಮ್ಮೇಳನದ ತಯಾರಿ ನಡೆಸಲು ಸಜ್ಜಾಗಿದ್ದ ಬೆಣ್ಣೆನಗರಿ ಸಾಹಿತ್ಯಾಸಕ್ತರಿಗೆ ಭಾರಿ ನಿರಾಸೆಯಾಗಿದೆ. ಏಕಾಏಕಿ ವಿಶ್ವ ಕನ್ನಡ ಸಮ್ಮೇಳನ ಸಿಎಂ ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗಕ್ಕ ಶಿಫ್ಟ್ ಆಗಿದೆ. ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕೈ ತಪ್ಪಿ ಹೋಗಿದೆ. ಆದ್ರೆ, ಇಲ್ಲಿನ ಜನಪ್ರತಿನಿಧಿಗಳ ವಿರುದ್ಧ ಬೆಣ್ಣೆನಗರಿ ಜನ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು, ಈ ಬಾರಿ ವಿಶ್ವ ಕನ್ನಡ ಸಮ್ಮೇಳನವನ್ನ ಕಳೆದ 2 ವರ್ಷಗಳ ಹಿಂದೆ ಬೆಣ್ಣೆನಗರಿ ದಾವಣಗೆರೆಯಲ್ಲಿ ನಡೆಸಲು ಸರ್ಕಾರ ತೀರ್ಮಾನಿಸಿತ್ತು. ಅಂದಿನ ಸಿಎಂ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸೃತಿ ಇಲಾಖೆಯ ಸಚಿವೆ ಉಮಾಶ್ರೀಯವರು ಸಮ್ಮತಿ ನೀಡಿದ್ದರು.
ದಾವಣಗೆರೆಯಲ್ಲಿ ವಿಶ್ವಕನ್ನಡ ಸಮ್ಮೇಳನ, ಯಡಿಯೂರಪ್ಪ ಭರವಸೆ ಮಾತು
ಅದ್ದೂರಿ ವಿಶ್ವ ಕನ್ನಡ ಸಮ್ಮೇಳನ ನಡೆಸಿಕೊಡಲು ದಾವಣಗೆರೆಯ ಸಾಹಿತಿ, ಚಿಂತಕರು ಕೂಡ ತೆರೆಮರೆಯಲ್ಲಿ ಸಜ್ಜಾಗಿದ್ರು. ವಿಶ್ವ ಸಮ್ಮೇಳನದ ಖರ್ಚಿಗೆ ಸರ್ಕಾರ 20 ಕೋಟಿ ಹಣ ಕೂಡ ಹಿಂದಿನ ಸರ್ಕಾರ ಮೀಸಲಿಟ್ಟಿತ್ತು. ಆದ್ರೆ, ಇದೀಗ ಸಾಹಿತ್ಯಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದೆ.
ಏಕಾಏಕಿ ವಿಶ್ವ ಕನ್ನಡ ಸಮ್ಮೇಳನ ಶಿಫ್ಟ್
ದಾವಣಗೆರೆಯಲ್ಲಿ ನಡೆಯಬೇಕಿದ್ದ ವಿಶ್ವ ಕನ್ನಡ ಸಮ್ಮೇಳನ ಏಕಾಏಕಿ ಸಿಎಂ ಬಿ.ಎಸ್.ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗಕ್ಕೆ ಶಿಫ್ಟ್ ಆಗಿದೆ. ಡಿಸಿಎಂ ಅಶ್ವಥ್ ನಾರಾಯಣ್ ಮುಂದಿನ ವರ್ಷ ಶಿವಮೊಗ್ಗದಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳ ನಡೆಸಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ. ಏಕಾಏಕಿ ಶಿವಮೊಗ್ಗ ಜಿಲ್ಲೆಗೆ ಶಿಫ್ಟ್ ಆಗಿದ್ದಕ್ಕೆ ರಾಜಕೀಯ ಎಂಟ್ರಿ ಪಡೆದುಕೊಂಡಿದೆ.
ರೇಣುಕಾಚಾರ್ಯ ಸುಮ್ಮನಿರಲ್ಲ, ಈಶ್ವರಪ್ಪ ಮಾತಾಡುತ್ತಿಲ್ಲ!
ದಾವಣಗೆರೆಯಲ್ಲಿ ಸಮ್ಮೇಳನ ನಡೆಸದಿದ್ದರೆ ರಾಜ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡುತ್ತಿವೆ. ಹೀಗಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಜಿಲ್ಲೆಯ ಶಾಸಕರೂ ಕೂಡಾ ಈ ಬಗ್ಗೆ ಎಲ್ಲೂ ಮಾತಾಡುತ್ತಿಲ್ಲ. ಇದರ ಮಧ್ಯೆ ಶಿವಮೊಗ್ಗದಲ್ಲಿ ಕವಿಗಳು ಸಾಹಿತಿಗಳು ಹೆಚ್ಚಾಗಿದ್ದು, ಅಲ್ಲಿ ಸಮ್ಮೇಳನ ನಡೆಸುವುದು ತಪ್ಪಿಲ್ಲ. ಶಿವಮೊಗ್ಗ, ದಾವಣಗೆರೆ ಎರಡು ಒಂದೇ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಸಮರ್ಥನೆ ಮಾಡಿಕೊಂಡಿದ್ದಾರೆ.
ಬೆಂಬಲ ನೀಡಲಿಲ್ವಾ ದಾವಣಗೆರೆ ಸಾಹಿತ್ಯ ಪರಿಷತ್?
ಜಿಲ್ಲೆಯ ಜನಪ್ರತಿನಿಧಿಗಳು ಕೂಡ ಸಾಹಿತ್ಯ ಪರಿಷತ್ತಿನ ಬೆಂಬಲ ಕಡಿಮೆಯಿತ್ತು. ಹೀಗಾಗಿ ಸಿಎಂ ತವರು ಜಿಲ್ಲೆ ಶಿವಮೊಗ್ಗಕ್ಕೆ ಸಮ್ಮೇಳನ ಶಿಷ್ಟ್ ಆಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ದಾವಣಗೆರೆಯಲ್ಲೇ ವಿಶ್ವ ಸಾಹಿತ್ಯ ಸಮ್ಮೇಳನ ನಡೆಸುವಂತೆ ಮನವಿ ಮಾಡಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಮಂಜುನಾಥ್ ಕುರ್ಕಿ ಹೇಳಿದ್ದಾರೆ.
ದಾವಣಗೆರೆಗೆ ಮತ್ತೆ ಅನ್ಯಾಯ ಮಾಡಲು ಹೊರಟ ಸರ್ಕಾರ!
ವಿಶ್ವ ಸಾಹಿತ್ಯ ಸಮ್ಮೇಳನಕ್ಕಾಗಿ ದಾವಣಗೆರೆ ಜಿಲ್ಲೆಯ ಸಾಹಿತಿಗಳು, ಕವಿಗಳು ಅಣಿಯಾಗಿದ್ದರು. ಕನ್ನಡ ಹಬ್ಬಕ್ಕಾಗಿ ಅಣಿಯಾಗುತ್ತಿದ್ದ ಜಿಲ್ಲೆಯ ಜನರಿಗೆ ಸರ್ಕಾರದ ನಿರ್ಧಾರ ತೀವ್ರ ನಿರಾಸೆ ಮೂಡಿಸಿದೆ. ಒಟ್ಟಾರೆ ವಿಶ್ವ ಕನ್ನಡ ಸಮ್ಮೇಳನ ಸಿಎಂ ತವರು ಜಿಲ್ಲೆಗೆ ಶಿಫ್ಟ್ ಆಗಿದ್ದರಲ್ಲಿ, ಸ್ಥಳಿಯ ರಾಜಕಾರಣಿಗಳ ಬೇಜವ್ದಾರಿತನ ಎದ್ದು ಕಾಣುತ್ತಿದೆ. ಈಗಲಾದರೂ ಶಾಸಕರು, ಸಂಸದರು, ಜನಪ್ರತಿನಿಧಿಗಳು ಹಿಂದಿನ ತೀರ್ಮಾನದಂತೆ ದಾವಣಗೆರೆಯಲ್ಲೇ ಸಮ್ಮೇಳನ ನಡೆಸಲು ಒತ್ತಾಯ ಮಾಡಬೇಕೆನ್ನುವುದು ಸ್ಥಳೀಯ ಆಗ್ರಹಿಸುತ್ತಿದ್ದಾರೆ.