ದಾವಣಗೆರೆಯಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನ
ಮೂರನೇ ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲಿ ನಡೆಸಲು ಸರ್ಕಾರ ಸಮ್ಮತಿಸಿದ್ದು, ಮೂಲ ಸೌಕರ್ಯವುಳ್ಳ ಸೂಕ್ತ ಜಾಗ ಗುರುತಿಸಿ ಪ್ರಾಥಮಿಕ ವರದಿ ಸಲ್ಲಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಜ್ಜಾಗಿದೆ
ದಾವಣಗೆರೆ, ಮಾರ್ಚ್ 22: ಮೂರನೇ ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲಿ ನಡೆಸಲು ಸರ್ಕಾರ ಸಮ್ಮತಿಸಿದ್ದು, ಮೂಲ ಸೌಕರ್ಯವುಳ್ಳ ಸೂಕ್ತ ಜಾಗ ಗುರುತಿಸಿ ಪ್ರಾಥಮಿಕ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್ ತಿಳಿಸಿದರು.[ಬೆಳಗಾವಿ ಸಮ್ಮೇಳನದ ಮರೆಯದ ಚಿತ್ರಗಳು]
1985ರಲ್ಲಿ ಪ್ರಥಮ ಬಾರಿಗೆ ಮೈಸೂರಿನಲ್ಲಿ ವಿಶ್ವ ಕನ್ನಡ ಸಮ್ಮೇಳನ ಯಶಸ್ವಿಯಾಗಿ ನಡೆದಿತ್ತು. 2011ರಲ್ಲಿ ಬೆಳಗಾವಿಯಲ್ಲಿ 2ನೇ ಬಾರಿಗೆ ಸಮ್ಮೇಳನ ನಡೆದಿದೆ. ಇದೀಗ ದಾವಣಗೆರೆಯಲ್ಲಿ ಕನ್ನಡ ನುಡಿ ಜಾತ್ರೆಯ 3ನೇ ಸಮ್ಮೇಳನಕ್ಕೆ ಸರ್ಕಾರ ಬಜೆಟ್ನಲ್ಲಿ 20ಕೋಟಿ ರೂ. ಅನುದಾನ ನೀಡಿದೆ. [2011ರಲ್ಲಿ ನಡೆದಿದ್ದ ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನದ]
ಸಮ್ಮೇಳನದ ದಿನಾಂಕ ಇನ್ನೂನಿಗದಿಯಾಗದಿದ್ದರೂ ಜುಲೈ ತಿಂಗಳಲ್ಲಿ ನಡೆಯುವ ನಿರೀಕ್ಷೆ ಇದೆ. ಸರ್ಕಾರ ಮತ್ತು ಸರ್ಕಾರೇತರ ಸದಸ್ಯರನ್ನೊಳಗೊಂಡ 15 ಸಮಿತಿಗಳು ಈ ಸಮ್ಮೇಳನದ ರೂಪು-ರೇಷೆಗಳ ಉಸ್ತುವಾರಿ ವಹಿಸಲಿವೆ ಎಂದು ಹೇಳಿದರು.
ಸಮ್ಮೇಳನಕ್ಕಾಗಿ ಜಿಲ್ಲಾ ಕ್ರೀಡಾಂಗಣ, ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನ, ಬಾಪೂಜಿ ಎಂಬಿಎ ಮೈದಾನ, ತ್ರಿಶೂಲ್ ಕಲಾಭವನ, ತ್ರಿಶೂಲ್ ಕಂಫರ್ಟ್, ಕುವೆಂಪು ಕನ್ನಡ ಭವನ, ಎಸ್.ಎಸ್. ಕಲ್ಯಾಣ ಮಂಟಪ, ಅನುಭವ ಮಂಟಪ, ಮೋತಿ ವೀರಪ್ಪ ಕಾಲೇಜು ಮೈದಾನಗಳನ್ನು ಪರಿಶೀಲಿಸಲಾಗಿದೆ.