ದಾವಣಗೆರೆ; ವಿಷ್ಣುವರ್ಧನ್ ಅಪ್ಪಟ ಅಭಿಮಾನಿ ಲೋಕೇಶ್ ನೇಣಿಗೆ ಶರಣು
ದಾವಣಗೆರೆ, ಆಗಸ್ಟ್ 28: ನಟ ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿಯೆಂದೇ ಗುರುತಿಸಿಕೊಂಡಿದ್ದ ಲೋಕೇಶ್ ಇಂದು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Recommended Video
40 ವರ್ಷದ ಲೋಕೇಶ್, ನಗರದ KSRTC ಬಸ್ ನಿಲ್ದಾಣದ ಎದುರಿನ ಭಾರತ ಡಾಬಾ ಪಕ್ಕದಲ್ಲಿ ಬೀಡಾ ಅಂಗಡಿ ಮಾಲೀಕರಾಗಿದ್ದರು. ಪ್ರತಿ ವರ್ಷವೂ ವಿಷ್ಣುವರ್ಧನ್ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದರು. ಕಳೆದ ಬಾರಿಯಷ್ಟೇ ವಿಷ್ಣುವರ್ಧನ್ ಅವರ ಪಾತ್ರವೊಂದರ ಉಡುಪು ಧರಿಸಿ, 51 ಕೆ.ಜಿಯ ಕೇಕ್ ಕತ್ತರಿಸುವ ಮೂಲಕ ವಿಶಿಷ್ಟವಾಗಿ ವಿಷ್ಣುವರ್ಧನ್ ಅವರ ಹುಟ್ಟು ಹಬ್ಬವನ್ನು ಆಚರಿಸಿದ್ದರು.
ವಿಷ್ಣು ವೇಷ ಹಾಕಿ 51 ಕೆ.ಜಿ. ಕೇಕ್ ಕತ್ತರಿಸಿದ ವಿಷ್ಣುವರ್ಧನ್ ಅಭಿಮಾನಿ
ಬೀಡಾ ಅಂಗಡಿಗೆ ಬರುವ ಜನರಿಗೆ ವಿಷ್ಣುವರ್ಧನ್ ಅವರಂತೆಯೇ ಡೈಲಾಗ್ ಹೇಳುತ್ತಾ ರಂಜಿಸುತ್ತಿದ್ದರು. ಮೃತ ಲೋಕೇಶ ದಾವಣಗೆರೆಯ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮೇಯರ್ ಅಜಯ್ ಕುಮಾರ್ ಅವರ ಪರ ಚುನಾವಣೆಯಲ್ಲಿ ವಿಷ್ಣುವರ್ಧನ್ ಅವರ ಹಾವ ಭಾವಗಳನ್ನು ಪ್ರದರ್ಶಿಸಿ ಗಮನ ಸೆಳೆದು ಬಹುತೇಕರಿಗೆ ಚಿರಪರಿಚಿತರಾಗಿದ್ದರು.
ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ ಅಪಾರ ಸಂಖ್ಯೆಯ ಸ್ನೇಹಿತ ಬಳಗವನ್ನು ಹೊಂದಿದ್ದರು. ಲೋಕೇಶ್ ಅವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.